ಕ್ರಿಕೆಟ್ನಿಂದ ನಿವೃತ್ತಿ ಬಳಿಕ ಬಿಜೆಪಿ ಸೇರುತ್ತಾರಾ ಎಂಎಸ್ ಧೋನಿ?
ನವದೆಹಲಿ, ಜುಲೈ 13: ಟೀಂ ಇಂಡಿಯಾ ಕಂಡ ಅಪೂರ್ವ ಆಟಗಾರರಲ್ಲಿ ಒಬ್ಬರಾದ ಮಾಜಿನಾಯಕ, ವಿಕೆಟ್ ಕೀಪರ್ ಅಂತಾರಾಷ್ಟ್ರೀಯ ಕ್ರಿಕೆಟ್ನ ವೃತ್ತಿ ಬದುಕಿಗೆ ವಿದಾಯ ಹೇಳುವ ಅಂಚಿನಲ್ಲಿದ್ದಾರೆ. ಅವರು ಇನ್ನಷ್ಟು ಕಾಲ ಆಡಲಿ ಎಂದು ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದರೂ, ಧೋನಿ ಶೀಘ್ರದಲ್ಲಿಯೇ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಅವರು ನಿವೃತ್ತಿ ಬಳಿಕ ರಾಜಕೀಯ ಪ್ರವೇಶಿಸಲಿದ್ದಾರೆ ಎಂದೂ ಹೇಳಲಾಗಿದೆ.
ನಿವೃತ್ತರಾದ ಬಳಿಕ ಎಂಎಸ್ ಧೋನಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಹೊಸ ಆಟವಾಡಲಿದ್ದಾರೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿ ದೆಹಲಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ, ಹಾಗೆಯೇ ಧೋನಿ ಅವರೂ ಬಿಜೆಪಿ ಮೂಲಕ ರಾಜಕೀಯಕ್ಕೆ ಬರಲಿದ್ದಾರೆ ಎಂಬ ವದಂತಿ ಹರಡಿದೆ.
ಎಂ.ಎಸ್.ಧೋನಿಯ ಭೇಟಿ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ
ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಂಜಯ್ ಪಾಸ್ವಾನ್ ಹೇಳಿಕೆ ನೀಡಿದ್ದಾರೆ. ಧೋನಿ ಅವರು ಪಕ್ಷವನ್ನು ಸೇರುವ ಸಂಭವವಿದ್ದು, ಈ ವಿಚಾರದ ಬಗ್ಗೆ ಸುದೀರ್ಘ ಸಮಯದಿಂದ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸುದೀರ್ಘ ಸಮಯದಿಂದ ಧೋನಿ ಗೊತ್ತು. ನಿವೃತ್ತಿಯ ಬಳಿಕ ಅವರು ಪಕ್ಷವನ್ನು ಸೇರಲಿದ್ದಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ನಿವೃತ್ತಿ ಬಳಿಕ ನಿರ್ಧಾರ
'ಹಲವು ಸಮಯದಿಂದ ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೂ ಈ ನಿರ್ಧಾರವನ್ನು ಅವರು ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕವಷ್ಟೇ ತೆಗೆದುಕೊಳ್ಳಲಾಗುತ್ತದೆ' ಎಂದು ಸಂಜಯ್ ಪಾಸ್ವಾನ್ ಹೇಳಿದ್ದಾರೆ.
'ಎಂಎಸ್ ಧೋನಿ ನನ್ನ ಸ್ನೇಹಿತ. ಅವರು ಜಗದ್ವಿಖ್ಯಾತ ಆಟಗಾರ. ಅವರನ್ನು ಪಕ್ಷದೊಳಗೆ ಕರೆದುಕೊಂಡು ಬರಲು ಆಲೋಚನೆಗಳು, ಚರ್ಚೆಗಳು ನಡೆಯುತ್ತಲೇ ಇವೆ.' ಎಂದು ತಿಳಿಸಿದ್ದಾರೆ.
ಸುಳ್ಳಾಯಿತು ಸಿದ್ದರಾಮಯ್ಯ ನುಡಿದ ಭವಿಷ್ಯ
ಧೋನಿ ಭೇಟಿಯಾಗಿದ್ದ ಅಮಿತ್ ಶಾ
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಆಯೋಜಿಸಿದ್ದ 'ಸಂಪರ್ಕ್ ಫಾರ್ ಸಮರ್ಥನ್' ಕಾರ್ಯಕ್ರಮದ ಅಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭೇಟಿಯಾದ ಸೆಲೆಬ್ರಿಟಿಗಳಲ್ಲಿ ಎಂಎಸ್ ಧೋನಿ ಕೂಡ ಒಬ್ಬರು. ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಈ ಯೋಜನೆಯಲ್ಲಿ ಧೋನಿ ಸೇರಿದಂತೆ ವಿವಿಧ ಖ್ಯಾತನಾಮರನ್ನು ಭೇಟಿ ಮಾಡಲಾಗಿತ್ತು.
ಧೋನಿ ಸಿಎಂ ಅಭ್ಯರ್ಥಿ?
ಧೋನಿ ಅವರ ತವರು ರಾಜ್ಯವಾದ ಜಾರ್ಖಂಡ್ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆಯ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗೂ ಮುನ್ನವೇ ಧೋನಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ ಎನ್ನಲಾಗಿದೆ. ಮುಂಬರುವ ಜಾರ್ಖಂಡ್ ಚುನಾವಣೆಯಲ್ಲಿ ಧೋನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿಕೊಂಡು ಅಖಾಡಕ್ಕೆ ಇಳಿಯಲು ಕೂಡ ಬಿಜೆಪಿ ಉದ್ದೇಶಿಸಿದೆ ಎಂದು ಹೇಳಲಾಗಿದೆ.
ಮಾಲ್ಡೀವ್ಸ್ ನಲ್ಲಿ ನರೇಂದ್ರ ಮೋದಿ : ಅಧ್ಯಕ್ಷ ಇಬ್ರಾಹಿಂಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ
ಆಟ ಮುಂದುವರಿಸಿ ಧೋನಿ...
38 ವರ್ಷದ ಕ್ರಿಕೆಟಿಗ ಎಂಎಸ್ ಧೋನಿ ಅವರು ರಾಜಕೀಯ ಪ್ರವೇಶಿಸುವ ಊಹಾಪೋಹಗಳಿಗೆ ಸ್ಪಷ್ಟೀಕರಣ ನೀಡುವ ನಿರೀಕ್ಷೆಯಿದೆ. ಕೊನೆಯ ವಿಶ್ವಕಪ್ ಆಡಿದ ಅವರಿಗೆ ಟ್ರೋಫಿಯೊಂದಿಗೆ ಗೆಲುವಿನ ಉಡುಗೊರೆ ಸಿಕ್ಕಿಲ್ಲ. ಹೀಗಾಗಿ ಅವರಿಗೆ ಸ್ಮರಣೀಯ ವಿದಾಯ ಸಲ್ಲಿಸಲು ಕೆಲ ಕಾಲ ಆಟ ಮುಂದುವರಿಸುವಂತೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮನವಿ ಮಾಡುತ್ತಿದ್ದಾರೆ. ಹೀಗಾಗಿ ಧೋನಿ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.