ಕೇಂದ್ರದಿಂದ ಕಾನೂನು ಭದ್ರತೆ, ನಷ್ಟ ಪರಿಹಾರಕ್ಕೆ ಸೀರಂ ಇನ್ಸ್ಟಿಟ್ಯೂಟ್ ಒತ್ತಾಯ
ನವದೆಹಲಿ, ಜೂನ್ 03: ಭಾರತದಲ್ಲಿ ಕೊರೊನಾವೈರಸ್ ಲಸಿಕೆಗಳ ಉತ್ಪಾದಕ ಕಂಪನಿಗಳಿಗೆ ಕಾನೂನು ಭದ್ರತೆ ಹಾಗೂ ನಷ್ಟ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಒತ್ತಾಯಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಭಾರತದ ಕೇಂದ್ರ ಸರ್ಕಾರವು ಫೈಜರ್ ಹಾಗೂ ಮಾಡರ್ನಾ ಕಂಪನಿಗಳ ಜೊತೆಗೆ ನಷ್ಟ ಪರಿಹಾರದ ಕುರಿತು ಚರ್ಚೆ ನಡೆಸುತ್ತಿದೆ. ಇದರ ಮಧ್ಯೆ ಭಾರತೀಯ ಲಸಿಕೆ ಉತ್ಪಾದಕೆ ಕಂಪನಿಗಳಿಗೂ ಕಾನೂನು ಭದ್ರತೆ ಜೊತೆಗೆ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದೆ.
ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ
ಕಳೆದ ವರ್ಷ ಫೈಜರ್-ಬಯೋ-ಎನ್-ಟೆಕ್ ಕಂಪನಿಯು ತನ್ನ ಕೊವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿತ್ತು. ಕಾನೂನು ಭದ್ರತೆ ಹಾಗೂ ನಷ್ಟ ಪರಿಹಾರದ ಷರತ್ತು ವಿಧಿಸಿದ ಹಿನ್ನೆಲೆ ಚರ್ಚೆ ವಿಫಲವಾಗಿತ್ತು.
5 ಕೋಟಿ ರೂ. ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ಸಂತ್ರಸ್ತ:
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸುತ್ತಿದೆ. ಕೊವಿಶೀಲ್ಡ್ ಲಸಿಕೆ ವೈದ್ಯಕೀಯ ಪ್ರಯೋಗದಲ್ಲಿ ಬಳಸಿಕೊಳ್ಳಲಾದ ವ್ಯಕ್ತಿಯೊಬ್ಬರ ಆರೋಗ್ಯದಲ್ಲಿ ಅಡ್ಡ ಪರಿಣಾಮದ ಬೀರಿದೆ ಎಂಬ ಕಾರಣಕ್ಕೆ ಕಂಪನಿ ವಿರುದ್ಧ 5 ಕೋಟಿ ರೂಪಾಯಿ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. 2020ರ ನವೆಂಬರ್ ತಿಂಗಳಿನಲ್ಲಿ ಕಂಪನಿ ವಿರುದ್ಧ ಲೀಗಲ್ ನೋಟಿಸ್ ಅನ್ನು ಸಹ ಹೊರಡಿಸಿದ್ದ ವಿಷಯವನ್ನು ಕಂಪನಿಯ ಕಾರ್ಯ ನಿರ್ವಹಣಾ ಮುಖ್ಯಸ್ಥ ಅದರ್ ಪೂನಾವಲ್ಲಾ ಉಲ್ಲೇಖಿಸಿದ್ದಾರೆ.
ಕೇಂದ್ರ ಸರ್ಕಾರದ ಜೊತೆಗಿನ ಹಲವು ಸುತ್ತಿನ ಚರ್ಚೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಭಾರತ್ ಬಯೋಟೆಕ್ ಕಂಪನಿ ಕೂಡ ಕಾನೂನು ಭದ್ರತೆ ಹಾಗೂ ನಷ್ಟ ಪರಿಹಾರವನ್ನು ನೀಡುವಂತೆ ಮನವಿ ಮಾಡಿಕೊಂಡಿತ್ತು.
ಕಾನೂನು ಭದ್ರತೆ ಮತ್ತು ನಷ್ಟ ಪರಿಹಾರದ ಅಗತ್ಯವೇನು?
ಕೇಂದ್ರ ಸರ್ಕಾರ ನೀಡುವ ಕಾನೂನು ಭದ್ರತೆಯು ಜೀವ ವಿಮೆ ರೀತಿಯಲ್ಲಿ ಕೆಲಸ ಮಾಡಲಿದೆ. ಒಂದು ವೇಳೆ ಕೊರೊನಾವೈರಸ್ ಲಸಿಕೆಯನ್ನು ಪಡೆದ ವ್ಯಕ್ತಿಯು ಯಾವುದೇ ಅಡ್ಡ ಪರಿಣಾಮಗಳಿಂದ ಮೃತಪಟ್ಟರೆ, ಅಂಥವರಿಗೆ ಕೇಂದ್ರ ಸರ್ಕಾರವೇ ಪರಿಹಾರ ನೀಡಬೇಕಾಗುತ್ತದೆಯೇ ವಿನಃ ಕಂಪನಿಯ ಕಡೆಯಿಂದ ಯಾವುದೇ ರೀತಿ ಪರಿಹಾರ ನೀಡಲಾಗುವುದಿಲ್ಲ.