ಇದಪ್ಪಾ ಸುದ್ದಿ: ಭಾರತದಲ್ಲಿ ಕೊವಿಶೀಲ್ಡ್ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ!?
ಪುಣೆ, ಮೇ 13: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಒಂದು ಕಡೆ ಏರುಮುಖವಾಗಿದೆ. ಕೊವಿಡ್-19 ಲಸಿಕೆ ವಿತರಣೆ ಪ್ರಮಾಣ ಇನ್ನೊಂದು ಮಗ್ಗಲಿನಲ್ಲಿ ಇಳಿಮುಖವಾಗಿದೆ. ಇದರ ಮಧ್ಯೆ ಕೊವಿಶೀಲ್ಡ್ ಲಸಿಕೆ ಉತ್ಪಾದನೆ ಹಿಂದಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಕುತೂಹಲಕಾರಿ ಉತ್ತರ ನೀಡಿದ್ದಾರೆ.
ದೇಶದಲ್ಲಿ ತುರ್ತಾಗಿ ಕೊರೊನಾವೈರಸ್ ಲಸಿಕೆಯ ಉತ್ಪಾದನೆ ವೇಗವನ್ನು ಹೆಚ್ಚಿಸಬೇಕಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಬೆದರಿಕೆಯಿಂದಾಗಿ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ಲಂಡನ್ಗೆ ಓಡಿ ಹೋಗಿದ್ದಾರೆ ಎಂಬ ಟೀಕೆಗೆ ಸ್ವತಃ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅದಾರ್ ಪೂನಾವಾಲಾರಿಂದ ಬ್ರಿಟನ್ನಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ
ಲಂಡನ್ ಪ್ರವಾಸಕ್ಕೆ ತೆರಳಿರುವ ಅದರ್ ಪೂನಾವಾಲಾ ಅವರು ಇನ್ನು ಕೆಲವೇ ದಿನಗಳಲ್ಲಿ ಭಾರತಕ್ಕೆ ವಾಪಸ್ ಆಗುವುದಾಗಿ ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಆದರೆ ಯಾವ ದಿನಾಂಕದಂದು ದೇಶಕ್ಕೆ ಹಿಂತಿರುಗುತ್ತಾರೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.
ಕೊರೊನಾ ಲಸಿಕೆ ಕೊರತೆ: ಭಾರತದ ಇಂದಿನ ಸ್ಥಿತಿಗೆ ಅಂದಿನ ತಪ್ಪು ಕಾರಣ!?
ಭಾರತದಲ್ಲಿ ಕೊರೊನಾವೈರಸ್ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನಾವಾಲಾ ಲಂಡನ್ಗೆ ಹೋಗುವ ಅಗತ್ಯ ಏನಿತ್ತು. ಈ ಹಿಂದೆ ಕೇಂದ್ರ ಸರ್ಕಾರ ಇವರಿಗೆ ವೈ ಕೆಟಗರಿ ಭದ್ರತೆ ನೀಡಿದ್ದು ಏಕೆ, ಇದೀಗ ದೇಶಕ್ಕೆ ಅವರು ವಾಪಸ್ಸಾಗುವುದಾಗಿ ಹೇಳಿರುವುದರ ಹಿಂದಿನ ಉದ್ದೇಶವೇನು ಎನ್ನುವುದರ ಕುರಿತು ಒಂದು ವಿವರಣಾತ್ಮಕ ವರದಿ ಇಲ್ಲಿದೆ ಓದಿ.
ಭಾರತದಲ್ಲಿ ಬಿರುಗಾಳಿ ಸೃಷ್ಟಿಸಿದ ಪೂನಾವಾಲಾ ಹೇಳಿಕೆ
"ನಾನು ಒಂದು ದೀರ್ಘ ಅವಧಿಯವರೆಗೂ ಸ್ವದೇಶಕ್ಕೆ ವಾಪಸ್ ಆಗುವುದಿಲ್ಲ. ಏಕೆಂದರೆ ಕೊರೊನಾವೈರಸ್ ಸಂದಿಗ್ಧ ಪರಿಸ್ಥಿತಿ ನಡುವೆ ಪ್ರಬಲ ವ್ಯಕ್ತಿಗಳಿಗೆ ಲಸಿಕೆ ಸರಬರಾಜು ಮಾಡುವುದಕ್ಕೆ ಸಾಧ್ಯವಿಲ್ಲ ಎಂದರೆ ಮುಂದೆ ಏನಾಗುತ್ತದೆಯೋ ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಈ ಒಂದು ಹೇಳಿಕೆ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ತಮ್ಮ ಹೇಳಿಕೆಯಿಂದ ಶೀಘ್ರದಲ್ಲೇ ಹಿಂದೆ ಸರಿದರು.
1 ವಾರದ ಲಂಡನ್ ಪ್ರವಾಸದ ಹಿಂದಿನ ಗುಟ್ಟು
ಸಣ್ಣ ವ್ಯಾಪಾರಿ ಒಪ್ಪಂದಕ್ಕಾಗಿ ಸೀರಂ ಇನ್ಸ್ ಟಿಟ್ಯೂಟ್ ಸಿಇಓ ಅದರ್ ಪೂನಾವಾಲಾ ಅವರು ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಒಂದು ವಾರಗಳ ಪ್ರವಾಸಕ್ಕಾಗಿ ಲಂಡನ್ನಲ್ಲಿ ಇರುವ ಮೇಫೇರ್ ಹೋಟೆಲ್ ಅನ್ನು 69,000 ಡಾಲರ್ ಕೊಟ್ಟು ಬುಕ್ ಮಾಡಿಕೊಳ್ಳಲಾಗಿದೆ. ಒಂದು ವಾರಗಳಲ್ಲೇ ಅವರು ಪುಣೆಗೆ ವಾಪಸ್ ಆಗಲಿದ್ದಾರೆ. ಪ್ರಸ್ತುತ ಒಂದು ತಿಂಗಳಿಗೆ 72 ಮಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತಿದ್ದು, ಈ ಪ್ರಮಾಣವನ್ನು 100 ಮಿಲಿಯನ್ ಡೋಸ್ ಗೆ ಹೆಚ್ಚಿಸುವುದಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಒಂದು ವಾರಗಳ ನಂತರ ಈ ಹೇಳಿಕೆ ಹುಸಿ ಆಯಿತು.
ಭಾರತದಲ್ಲಿ ಭೀತಿ: 1ನೇ ಅಲೆಯಲ್ಲಿ ಸೋಂಕು, 2ನೇ ಅಲೆಯಲ್ಲಿ ಸಾವು!?
ಅದಾರ್ ಪೂನಾವಾಲಾ ಅವರು ಭಾರತಕ್ಕೆ ವಾಪಸ್ಸಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಒಂದು ದಶಕದ ಹಿಂದೆ ತಮ್ಮ ತಂದೆಯಿಂದ ಕಂಪನಿಯ ಅಧಿಕಾರವನ್ನು ವಹಿಸಿಕೊಂಡ ಅದಾರ್ ಪೂನಾವಾಲಾ ಇದೀಗ ಪುಣೆಯ ಕಚೇರಿಗೆ ಯಾವಾಗ ವಾಪಸ್ಸಾಗುತ್ತಾರೆ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ ಇಷ್ಟರಲ್ಲೇ ಪುಣೆಗೆ ವಾಪಸ್ ಬರುವುದಾಗಿ ಫೈನಾನ್ಷಿಯಲ್ ಟೈಮ್ಸ್ ಮತ್ತು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಪ್ಪಾಗಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ದೂರು
"ಸಾಧ್ಯವಾದಷ್ಟು ಬೇಗ ನಾನು ಭಾರತಕ್ಕೆ ವಾಪಸ್ ಹೋಗುತ್ತೇನೆ. ಆದರೆ ಕೊರೊನಾವೈರಸ್ ಲಸಿಕೆ ದರ ನಿಗದಿ ವಿಷಯದಲ್ಲಿ ತಪ್ಪಾಗಿ ಹಾಗೂ ಅನ್ಯಾಯವಾಗಿ ತಮ್ಮನ್ನು ಬಲಿಪಶು ಮಾಡುತ್ತಿದ್ದಂತೆ ಎನಿಸುತ್ತಿದೆ. ತಮ್ಮ ವಿರುದ್ಧದ ಟೀಕೆ ಹಾಗೂ ಆರೋಪಗಳಿಗೆ ಅಂತ್ಯವೇ ಇಲ್ಲ" ಎಂದು ಅದಾರ್ ಪೂನಾವಾಲಾ ಹೇಳಿದ್ದಾರೆ.
ಲಂಡನ್ನಲ್ಲಿ 335 ಮಿಲಿಯನ್ ಡಾಲರ್ ಹೂಡಿಕೆ
ಒಂದು ವಾರದ ಪ್ರವಾಸ ಎಂದು ತೆರಳಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಲಂಡನ್ನಲ್ಲಿ ಕಂಪನಿಯು 335 ಮಿಲಿಯನ್ ಡಾಲರ್ ಅಷ್ಟು ಹಣವನ್ನು ಹೂಡಿಕೆ ಮಾಡುತ್ತದೆ. ವಿಶೇಷವಾಗಿ ಆರ್&ಡಿ ಕೆಲಸ ಅಥವಾ ವೈದ್ಯಕೀಯ ಪ್ರಯೋಗಗಳು ಮತ್ತು ಉತ್ಪಾದನಾ ಘಟಕಗಳ ಮೇಲೆ ಹಣ ಹೂಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
'ಕಾಸ್'ಬಾತ್ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ 300 ರೂ. ಕೊರೊನಾ ಲಸಿಕೆಗೆ 1200 ರೂ.!
ಭಾರತದಲ್ಲಿ ಪರಿಸ್ಥಿತಿ ಹೀಗಾಗುವ ಬಗ್ಗೆ ನಿರೀಕ್ಷಿಸಿರಲಿಲ್ಲ
ಕೊರೊನಾವೈರಸ್ ಲಸಿಕೆಯ ತುರ್ತು ಅಗತ್ಯತೆ ಬಗ್ಗೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಕಳೆದ ಜನವರಿಯಲ್ಲಿ ಕೊವಿಡ್-19 ಅಂಕಿ-ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ತುರ್ತು ಲಸಿಕೆ ಉತ್ಪಾದನೆ ಸವಾಲು ಎದುರಾಗುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಪ್ರಮಾಣವು ನಿಧಾನಗತಿಯಲ್ಲಿ ಇಳಿಮುಖವಾಗುತ್ತಿತ್ತು. ಅಲ್ಲದೇ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶಗಳೂ ಬಂದಿರಲಿಲ್ಲ. ದೇಶದಲ್ಲಿ ನಾವು ಒಂದು ವರ್ಷಕ್ಕೆ ಒಂದು ಬಿಲಿಯನ್ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುವಂತಾ ಕಾಲ ಎದುರಾಗುತ್ತದೆ ಅಂತಾ ನಾವು ಅಂದುಕೊಂಡಿರಲಿಲ್ಲ ಎಂದು ಅದಾರ್ ಪೂನಾವಾಲಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಜಾಗತಿಕ ಮಟ್ಟದಲ್ಲೂ ಸವಾಲು ಎದುರಾದ ಬಗ್ಗೆ ಉಲ್ಲೇಖ
ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದಾರ್ ಪೂನಾವಾಲಾ ತಮ್ಮ ಜಾಗತಿಕ ಒಪ್ಪಂದಗಳಂತೆ ನಡೆದುಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಕಾನೂನು ರೀತಿಯ ಸವಾಲುಗಳನ್ನು ಎದುರಿಸುವಂತೆ ಆಗಿದ. ಗವಿ ಒಕ್ಕೂಟ(Gavi Alliance)ಕ್ಕೆ ಕೊರೊನಾವೈರಸ್ ಲಸಿಕೆ ಸರಬರಾಜು ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವುದಕ್ಕಾಗಿ ಬಿಲ್ ಗೇಟ್ಸ್ ಫೌಂಡೇಶನ್ ವತಿಯಿಂದ 300 ಮಿಲಿಯನ್ ಡಾಲರ್ ಆರ್ಥಿಕ ನೆರವು ಪಡೆದುಕೊಂಡಿದ್ದರು.
ಜಾಗತಿಕ ಒಪ್ಪಂದದಂತೆ ನಿಯಮ ಪಾಲಿಸದ ಹಿನ್ನೆಲೆ ಆಸ್ಟ್ರಾಜೆನಿಕಾ ಕಂಪನಿಯು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಲೀಗಲ್ ನೋಟಿಸ್ ಜಾರಿಗೊಳಿಸಿದೆ. ಏಕೆಂದರೆ ಭಾರತದ ಕೇಂದ್ರ ಸರ್ಕಾರದ ನಿರ್ಬಂಧದಂತೆ ಕಂಪನಿಯು ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ಮುಂದೂಡಲಾಗಿದೆ ಎಂದು ಅದಾರ್ ಪೂನಾವಾಲಾ ತಿಳಿಸಿದ್ದಾರೆ.
ಸೀರಂ ಇನ್ಸ್ ಟಿಟ್ಯೂಟ್ ಸಾಮರ್ಥ್ಯದ ಬಗ್ಗೆ ತಜ್ಞರ ಅಭಿಪ್ರಾಯ
ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅಗತ್ಯವಿರುವ ಕೊವಿಡ್-19 ಲಸಿಕೆಯನ್ನು ಪೂರೈಸುವ ಸಾಮರ್ಥ್ಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಇತ್ತು. ಈ ಬಗ್ಗೆ ಸಿಇಓ ಅದಾರ್ ಪೂನಾವಾಲಾ 2020ರಲ್ಲಿ ಒಂದು ಅಂದಾಜು ಇಟ್ಟುಕೊಂಡಿದ್ದರೆ, ಇಂದು ಪ್ರತಿ ವರ್ಷ 1.5 ಬಿಲಿಯನ್ ಡೋಸ್ ಕೊರೊನಾವೈರಸ್ ಲಸಿಕೆ ಉತ್ಪಾದಿಸುವುದಕ್ಕೆ ಸಾಧ್ಯವಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಕಳೆದ ವಾರ ರಾತ್ರೋರಾತ್ರಿ ಲಸಿಕೆ ಉತ್ಪಾದನೆ ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ, ಇದೊಂದು ವಿಶೇಷ ಪ್ರಕ್ರಿಯೆ ಆಗಿರುತ್ತದೆ ಎಂದು ಪೂನಾವಾಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
'ಬೆಂಕಿ' ಕಾರಣಕ್ಕೆ ಲಸಿಕೆ ಉತ್ಪಾದನೆ ಹೆಚ್ಚಿಸಲು ವಿಳಂಬ
ಕಳೆದ ನವೆಂಬರ್ ತಿಂಗಳಿನಲ್ಲೇ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥರೊಬ್ಬರು ಬಿಬಿಸಿಗೆ ಲಸಿಕೆ ಉತ್ಪಾದನೆ ಹೆಚ್ಚಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಅಂದು 2021ರ ಜನವರಿ ವೇಳೆಗೆ ಪ್ರತಿ ತಿಂಗಳು 100 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದಿದ್ದರು. ಇದರ ಮಧ್ಯೆ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕ್ಯಾಂಪಸ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಸ ಸೌಲಭ್ಯಗಳು ಹಾನಿಗೊಳಗಾದವು. ಲಸಿಕೆಗೆ ಸಂಬಂಧಿಸಿದ ವಸ್ತುಗಳನ್ನು ಬೇರೆಡೆ ಇರಿಸಿದ್ದರಿಂದ ಲಸಿಕೆ ಉತ್ಪಾದನೆಗೆ ಹೆಚ್ಚಿನ ನಷ್ಟವೇನೂ ಆಗಲಿಲ್ಲ. ಆದರೆ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಯೋಜನೆ ಹಿಂದೆ ಉಳಿಯಿತು. ಜುಲೈ ವೇಳೆಗೆ ಕೊವಿಶೀಲ್ಡ್ ಲಸಿಕೆ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ಯೋಜನೆ ಸಾಕಾರಗೊಳ್ಳಲಿದ್ದು, ಪ್ರತಿ ತಿಂಗಳು 100 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
"ಲಸಿಕೆಗೆ ಬೇಡಿಕೆ ಇಲ್ಲದೇ ಉತ್ಪಾದಿಸಲು ಹೇಗೆ ಸಾಧ್ಯೆ?"
ಭಾರತದಲ್ಲಿ ಕೊವಿಶೀಲ್ಡ್ ಲಸಿಕೆ ಉತ್ಪಾದನೆ ವೇಗ ನಿಧಾನಗತಿಯಲ್ಲಿ ಸಾಗುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಅದಾರ್ ಪೂನಾವಾಲಾ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ಆರಂಭಿಕ ಹಂತದಲ್ಲಿ ಕೇವಲ 21 ಮಿಲಿಯನ್ ಡೋಸ್ ಲಸಿಕೆಗಾಗಿ ಬೇಡಿಕೆ ಇಟ್ಟಿತ್ತು. ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗ ಹೆಚ್ಚಾಗುತ್ತಿರುವ ಹಂತದಲ್ಲಿ ಅಂದರೆ ಮಾರ್ಚ್ ವೇಳೆಯಲ್ಲಿ ಅತಿಹೆಚ್ಚು ಎಂದರೆ 110 ಮಿಲಿಯನ್ ಡೋಸ್ ಲಸಿಕೆಗಾಗಿ ಆದೇಶ ನೀಡಿತು.
ನಾನೊಬ್ಬ ಉತ್ಪಾದಕನಷ್ಟೇ ಆಗಿದ್ದು, ಕಾನೂನು ಮತ್ತು ನೀತಿಗಳನ್ನು ರೂಪಿಸುವುದು ನನ್ನ ಜವಾಬ್ದಾರಿ ಆಗಿರುವುದಿಲ್ಲ. ಈ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದರ ಬದಲಿಗೆ ಲಸಿಕೆ ಕೊರತೆಗೆ ನಾನೇ ಕಾರಣ ಎನ್ನುವಂತೆ ಬಿಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
Y ಬದಲಿಗೆ Z ಕೆಟಗರಿ ಭದ್ರತೆ ನೀಡಲು ಮನವಿ
ಅದಾರ್ ಪೂನಾವಾಲಾ ಮೇಲೆ ಆಕ್ರಮಣಶೀಲತೆ ಮತ್ತು ತೀವ್ರ ಬೆದರಿಕೆಗೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಉತ್ತರ ನೀಡಲು ಅವರು ಹಿಂಜರಿದರು. ಅದರ ಬದಲು ತಮ್ಮ ಭದ್ರತೆಯನ್ನು ಹೆಚ್ಚುವಂತೆ ಆಗ್ರಹಿಸಿ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದರು. ಪ್ರಸ್ತುತ Y ಕೆಟಗರಿ ಭದ್ರತೆ ಹೊಂದಿರುವ ಅದಾರ್ ಪೂನಾವಾಲಾ ಅವರು Z ಕೆಟಗರಿ ಭದ್ರತೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೊದಲು ಎಲ್ಲ ರಾಜ್ಯಗಳಿಗೆ ಸರಿ ಸಮನಾಗಿ ಲಸಿಕೆಯನ್ನು ಸರಬರಾಜು ಮಾಡುವ ಬಗ್ಗೆ ನಾವು ಯೋಜನೆ ರೂಪಿಸುತ್ತಿದ್ದೆವು. ಆದರೆ ಕೇಂದ್ರ ಸರ್ಕಾರ ಅಷ್ಟರಲ್ಲೇ ಲಸಿಕೆ ವಿತರಣೆ ಕುರಿತು ಒಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತು.
ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಕೊವಿಶೀಲ್ಡ್ ಲಸಿಕೆ ಕೊರತೆ ಹಿಂದೆ ಕೇಂದ್ರ ಸರ್ಕಾರ ಕಾರಣವೇ ಹೊರತೂ ಸೀರಂ ಇನ್ಸ್ ಟಿಟ್ಯೂಟ್ ವಿರುದ್ಧ ಬೊಟ್ಟು ಮಾಡುವಂತಿಲ್ಲ. ಇಂದಿನ ಸ್ಥಿತಿಗೆ ಸರ್ಕಾರ ಕಾರಣ ಮತ್ತು ತಪ್ಪು ನಡೆ ಕಾರಣವಾಗಿದೆಯೇ ವಿನಃ ಕಂಪನಿಯದ್ದು ಯಾವುದೇ ತಪ್ಪಿಲ್ಲ ಎಂದು ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ.
Recommended Video
ಕೊವಿಶೀಲ್ಡ್ ಲಸಿಕೆಗಾಗಿ ಎದುರು ನೋಡುತ್ತಿರುವ ಜಗತ್ತು
ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಕೊವಿಶೀಲ್ಡ್ ಲಸಿಕೆಯನ್ನು ಇಡೀ ಜಗತ್ತಿಗೆ ವಿತರಿಸುವುದಕ್ಕೆ ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಕಂಪನಿಯು ಉತ್ಪಾದಿಸುವ ಲಸಿಕೆಯನ್ನೇ ಭಾರತ ಮತ್ತು ವಿದೇಶಗಳಿಗೆ ನಿಗದಿತ ಪ್ರಮಾಣದಲ್ಲಿ ನೀಡಲು ಕಂಪನಿ ಯೋಜನೆ ರೂಪಿಸಿತ್ತು. ಸೀರಂ ಉತ್ಪಾದಿಸುವ 10 ಡೋಸ್ ಲಸಿಕೆಯಲ್ಲಿ 4 ಡೋಸ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಸರ್ಕಾರಗಳು ಅದಕ್ಕೆ ಅವಕಾಶ ನೀಡಲಿಲ್ಲ.
"ಇಂದಿಗೂ ಕೊವಿಶೀಲ್ಡ್ ಲಸಿಕೆಗಾಗಿ ಇಡೀ ಜಗತ್ತು ಎದುರು ನೋಡುತ್ತಿದೆ. ಆದರೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸಚಿವರು, ಸಾರ್ವಜನಿಕರು, ಸ್ನೇಹಿತರ ಬಳಗ ಹೀಗೆ ಸುತ್ತಲಿನಿಂದಲೂ ಲಸಿಕೆಗಾಗಿ ಒತ್ತಡ ಹೆಚ್ಚಾಯಿತು. ಎಲ್ಲರಿಗೂ ಲಸಿಕೆ ತಲುಪುವಂತೆ ಮಾಡಲು ಸಮಾನ ರೀತಿಯಲ್ಲಿ ಸರಬರಾಜು ಮಾಡುವುದಕ್ಕೆ ಶ್ರಮಿಸಿದ್ದೇನೆ" ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಸ್ಪಷ್ಟನೆ ನೀಡಿದ್ದಾರೆ.