ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಗಣನೀಯ ಇಳಿಕೆ
ನವದೆಹಲಿ, ಜೂ.19: ''ತೀವ್ರವಾದ ಎರಡನೇ ಅಲೆಯ ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ಅಭಿಯಾನದ ಭಾಗವಾಗಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡುವುದು ಆಸ್ಪತ್ರೆಗೆ ದಾಖಲಾಗುವ, ಆಮ್ಲಜನಕದ ಅಗತ್ಯತೆ ಮತ್ತು ಐಸಿಯು ಅಗತ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ,'' ಎಂದು ಸಾಂಕ್ರಾಮಿಕ ರೋಗದ ಕುರಿತು ದೇಶದ ಕಾರ್ಯಪಡೆಯ ಮುಖ್ಯಸ್ಥರಾದ ಡಾ ವಿ ಕೆ ಪೌಲ್ ಅಭಿಪ್ರಾಯಿಸಿದ್ದಾರೆ.
ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ದತ್ತಾಂಶವನ್ನು ಉಲ್ಲೇಖಿಸಿದ ಡಾ ವಿ ಕೆ ಪೌಲ್, ಕೇವಲ ಒಂದು ಡೋಸ್ ಪಡೆದವರು ಸೇರಿದಂತೆ 8,991 ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತರಲ್ಲಿ ಲಸಿಕೆಯು ಪರಿಣಾಮಕಾರಿಯಾಗಿದೆ. ಈ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಪಡೆದ ಬಳಿಕ ಕೊರೊನಾ ಬಂದರೆ ಸೋಂಕಿತ ಆರೋಗ್ಯ ಕಾರ್ಯಕರ್ತರು ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾದ ಪ್ರಮಾಣವನ್ನು ತಡೆಗಟ್ಟುವಲ್ಲಿ ಲಸಿಕೆಗಳ ಪಾತ್ರವು ಶೇಕಡಾ 94 ರಷ್ಟಿದೆ ಎಂದು ತಿಳಿಸಿದ್ದಾರೆ. ಲಸಿಕೆಗಳು ತೀವ್ರವಾದ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂದು ತೋರಿಸುತ್ತದೆ ಎಂದು ವರದಿ ತಿಳಿಸಿದೆ.
ಕೋವಿಡ್ ಲಸಿಕೆ ಬಗ್ಗೆ ಭಯಬೇಡ: ವ್ಯಾಕ್ಸಿನ್ ಪಡೆದ ಬಳಿಕ ಸೋಂಕು ದೃಢಪಟ್ಟ ಅಧಿಕ ಜನರಲ್ಲಿ ಸೌಮ್ಯ ಲಕ್ಷಣ
ಇನ್ನು ಬೇರೊಂದು ಅಧ್ಯಯನವು ಕೂಡಾ ಇದೇ ರೀತಿಯ ವಿಚಾರಗಳನ್ನು ಬಹಿರಂಗಪಡಿಸಿದೆ. ಫೋರ್ಟಿಸ್ ಹೆಲ್ತ್ಕೇರ್ ಬಿಡುಗಡೆ ಮಾಡಿದ ಪುರಾವೆ ಆಧಾರಿತ ಅಧ್ಯಯನದ ಪ್ರಕಾರ ಎರಡೂ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತರಲ್ಲಿ ಶೇ.92 ರಷ್ಟು ಜನರಲ್ಲಿ ಸೌಮ್ಯವಾದ ಕೋವಿಡ್ ಲಕ್ಷಣಗಳು ಮಾತ್ರ ಕಂಡು ಬಂದಿದೆ. ಈ ಕೊರೊನಾ ಎರಡನೇ ಅಲೆಯ ತೀವ್ರತೆಯ ಸಂದರ್ಭದಲ್ಲಿಯೂ ಈ ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕು ತಗುಲಿದ ಹೆಚ್ಚಿನ ಮಂದಿ ಮನೆಯಲ್ಲಿಯೇ ಆರೈಕೆ ಪಡೆದು ಚೇತರಿಸಿಕೊಂಡಿದ್ದಾರೆ.
ಲಸಿಕೆ ಕೊರೊನಾ ತೀವ್ರತೆಯಿಂದ ರಕ್ಷಣೆ: ಅಧ್ಯಯನದಲ್ಲಿ ಬಹಿರಂಗ
"ಕೊರೊನಾ ಲಸಿಕೆ ಪಡೆದ ನಂತರ ಕೊರೊನಾ ತೀವ್ರತೆಯಿಂದ ಲಸಿಕೆ ಪಡೆದವರು ರಕ್ಷಿತರಾಗಿರುವುದನ್ನು ದೃಢಪಡಿಸುವ ಅಧ್ಯಯನಗಳು ಭಾರತದಿಂದ ಹೊರಹೊಮ್ಮುತ್ತಿವೆ. ಕೊರೊನಾ ಸೋಂಕಿಗೆ ಹೆಚ್ಚಾಗಿ ತುತ್ತಾಗುವ ಆರೋಗ್ಯ ಕಾರ್ಯಕರ್ತರ ಬಗ್ಗೆ ಇಂತಹ ಎರಡು ಅಧ್ಯಯನಗಳಿವೆ. ಲಸಿಕೆ ಪಡೆದ ನಂತರ, ಆಸ್ಪತ್ರೆಗೆ ಸೇರಿಸುವ ಅಗತ್ಯವು ಶೇಕಡ 75-80ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಲಸಿಕೆ ಪಡೆದ ನಂತರ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾದ ಪ್ರಮಾಣವು ಕೇವಲ ಶೇ.20 ರಷ್ಟಿದೆ," ಎಂದು ಡಾ ವಿ ಕೆ ಪೌಲ್ ಎಂದು ಹೇಳಿದ್ದಾರೆ.
ಲಸಿಕೆ ಪಡೆದ ಬಳಿಕ ಸೋಂಕು ಬಂದರೆ ಶೇ. 94 ರಷ್ಟು ಜೀವ ರಕ್ಷಣೆ
"ಲಸಿಕೆ ಪಡೆದ ಬಳಿಕ ಸೋಂಕು ದೃಢಪಟ್ಟರೆ ಆಮ್ಲಜನಕದ ಅವಶ್ಯಕತೆಯ ಸಾಧ್ಯತೆಯು ಕೇವಲ ಶೇ. 8 ಆಗಿದೆ. ಗಂಭೀರ ಪರಿಸ್ಥಿತಿ ಬಂದು ಐಸಿಯುಗೆ ದಾಖಲಾಗುವ ಪ್ರಮಾಣವು ಕೇವಲ ಶೇ. 6 ಆಗಿದೆ. ಆದ್ದರಿಂದ, ಲಸಿಕೆ ಪಡೆದ ಬಳಿಕ ಕೋವಿಡ್ ಸೋಂಕು ಬಂದರೆ ಶೇ.94 ರಷ್ಟು ಜೀವ ರಕ್ಷಣೆಯಾಗುತ್ತದೆ. ಅಧ್ಯಯನವು ಇದನ್ನು ಬಹಿರಂಗ ಪಡಿಸಿದೆ. ಈ ಅಧ್ಯಯನವು ಹೆಚ್ಚಾಗಿ ಸೋಂಕಿತರಾಗುವ ಸಾಧ್ಯತೆಯಿರುವ ವಲಯದಲ್ಲಿ ಮಾಡಲಾಗಿದೆ. ಒಂದು ಅಧ್ಯಯನದ ಪ್ರಕಾರ, ಸೋಂಕು ಬಂದ 7000 ಮಂದಿಯಲ್ಲಿ ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. ಆ ವ್ಯಕ್ತಿಯು ಸಹ ಕೊಮೊರ್ಬಿಡಿಟಿಗಳನ್ನು ಹೊಂದಿದ್ದನು. ಲಸಿಕೆಗಳು ವಿಶೇಷವಾಗಿ ಗಂಭೀರ ಕಾಯಿಲೆಯಿಂದ ರಕ್ಷಣೆ ನೀಡುತ್ತವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ," ಎಂದು ಡಾ ವಿ ಕೆ ಪೌಲ್ ಮಾಹಿತಿ ನೀಡಿದ್ದಾರೆ.
ಕೋವಿಡ್ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರ
ಅಧ್ಯಯನ ಬೇರೇನು ಹೇಳಿದೆ?
ಫೆಬ್ರವರಿ 21 ಮತ್ತು ಮೇ 19 ರ ನಡುವೆ 1,350 ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 33 ಮಂದಿಯಲ್ಲಿ ಎರಡನೇ ಡೋಸ್ ಲಸಿಕೆ ಪಡೆದ ಎರಡು ವಾರಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಂಪೂರ್ಣ ಲಸಿಕೆ ಹಾಕಿದ 7,080 ಆರೋಗ್ಯ ಕಾರ್ಯಕರ್ತರಲ್ಲಿ, 679 ಜನರಲ್ಲಿ ಎರಡನೇ ಡೋಸ್ ಪಡೆದ 47 ದಿನಗಳ ನಂತರ ಸೋಂಕು ಕಾಣಿಸಿಕೊಂಡಿದೆ. "ಲಸಿಕೆ ಪಡೆದ ಬಳಿಕ ಸೋಂಕು ತಗಲುವ ಪ್ರಮಾಣವು ಶೇಕಡ 65 ರಷ್ಟು ಕಡಿಮೆಯಾಗಿದೆ, ಸೋಂಕು ಬಂದವರಲ್ಲಿ ಆಸ್ಪತ್ರೆಗೆ ದಾಖಲು ಪ್ರಮಾಣವು ಶೇಕಡ 77 ರಷ್ಟು ಕಡಿಮೆಯಾಗಿದೆ, ಆಮ್ಲಜನಕದ ಅವಶ್ಯಕತೆಯು ಶೇಕಡ 92 ರಷ್ಟು ಕಡಿಮೆಯಾಗಿದೆ, ಐಸಿಯು ಅಗತ್ಯದ ಪ್ರಮಾಣವು ಶೇಕಡ 94 ರಷ್ಟು ಕಡಿಮೆಯಾಗಿದೆ," ಎಂದು ಅಧ್ಯಯನವು ತಿಳಿಸಿದೆ. ಇನ್ನು ಸೋಂಕು ದೃಢಪಟ್ಟು ಸಾವನ್ನಪ್ಪಿದ ಏಕೈಕ ಸಿಬ್ಬಂದಿಗೆ ಅನೇಕ ಇತರೆ ಕಾಯಿಲೆಗಳಿವೆ ಹಾಗೂ ಲಸಿಕೆ ತೆಗೆದುಕೊಂಡಿಲ್ಲ ಎಂದು ಅಧ್ಯಯನವು ಎತ್ತಿ ತೋರಿಸಿದೆ.
ವೆಲ್ಲೂರ್ನ ಸಿಎಮ್ಸಿಯ ಸಂಶೋಧನೆ, ಉನ್ನತ ಆಸ್ಪತ್ರೆಗಳ ಸಮೀಕ್ಷೆ
ದೇಶದ ಅತಿದೊಡ್ಡ ಖಾಸಗಿ ಆಸ್ಪತ್ರೆಗಳಾದ ಅಪೊಲೊದ 24 ನಗರಗಳ 43 ಘಟಕಗಳಲ್ಲಿ ಬುಧವಾರ, 31,000 ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತರ ಪೈಕಿ ಯಾರು ಕೂಡಾ ಸಾವನ್ನಪ್ಪಿಲ್ಲ. ಜನವರಿ 16 ರಿಂದ ಮೇ 31 ರವರೆಗೆ 1,355 ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಈ ಪೈಕಿ ಕೇವಲ 90 ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಮೂವರು ಐಸಿಯು ಆರೈಕೆ ಪಡೆದಿದ್ದಾರೆ.
ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಾಗಿರಿ
ಇನ್ನು ಈ ಸಂದರ್ಭದಲ್ಲೇ ಪೌಲ್, ''ಜನರು ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಾಗಿರವಂತೆ ಹೇಳಿದ್ದಾರೆ. ನಾವು ಮಕ್ಕಳಿಗೆ ಸೋಂಕು ತಗುಲಿದರೆ ಚಿಕಿತ್ಸೆ ಹೇಗೆ ಎಂಬ ಮಾರ್ಗಸೂಚಿ ಪಾಲಿಸಬೇಕು. ಮಕ್ಕಳ ಆರೈಕೆಗೆ ಎಷ್ಟು ವೆಂಟಿಲೇಟರ್ಗಳು ಬೇಕು, ಸೋಂಕಿತ ಮಕ್ಕಳಲ್ಲಿ ನಂತರ ಕಂಡುಬರುವ ಬಹು-ವ್ಯವಸ್ಥೆಯ ಉರಿಯೂತದ ಸಿಂಡ್ರೋಮ್ ಅನ್ನು ಹೇಗೆ ನಿಭಾಯಿಸಬೇಕು ಎಂದು ಸಮಗ್ರವಾಗಿ ನಾವು ಪರಿಶೀಲಿಸುತ್ತಿದ್ದೇವೆ,'' ಎಂದು ತಿಳಿಸಿದ್ದಾರೆ. ಹಾಗೆಯೇ ಪೌಲ್ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಪ್ರಮಾಣ ಹೆಚ್ಚುತ್ತಿದೆ.
(ಒನ್ಇಂಡಿಯಾ ಸುದ್ದಿ)