ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ಸಭೆ: ಯಾವ ರಾಜ್ಯದಲ್ಲಿ ಹೇಗಿದೆ ಕೊವಿಡ್-19 ನಿಯಮ?
ನವದೆಹಲಿ, ಜನವರಿ 13: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮಿತಿ ಮೀರಿದೆ. ದೈನಂದಿನ ಕೊವಿಡ್-19 ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷದ ಸನ್ನಿಹಿತಕ್ಕೆ ಬರುತ್ತಿರುವ ಹಿನ್ನೆಲೆ ಗುರುವಾರ ಸಂಜೆ 4.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ನಿಯಂತ್ರಿಸುವುದು, ಯಾವ ರೀತಿ ಮುನ್ನೆಚ್ಚರಿಕೆ ತೆಗದುಕೊಳ್ಳಬೇಕು ಹಾಗೂ ಕೊವಿಡ್-19 ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಜನವರಿ 9ರಂದು ನಡೆಸಿದ ಸಭೆಯಲ್ಲಿ ಪ್ರಧಾನಿ ಮೋದಿ ಸೂಚನೆ ನೀಡಿದ್ದರು. ಲಸಿಕೆ ವಿತರಣೆಗೆ ವೇಗ ನೀಡುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದರು.
ಬಿಜೆಪಿ ಪ್ರಧಾನ ಕಚೇರಿಯಲ್ಲಿ 42 ಸಿಬ್ಬಂದಿಗೆ ಕೊರೊನಾ ಸೋಂಕು
ಪ್ರಸ್ತುತ ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಗೆ ಹೊಸ ರೂಪಾಂತರಿ ಓಮಿಕ್ರಾನ್ ಕಾರಣ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಯಾವ ರಾಜ್ಯಗಳಲ್ಲಿ ಏನೆಲ್ಲ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ಮಹಾರಾಷ್ಟ್ರದಲ್ಲಿ ನಿಯಮಗಳು
- ರಾಜ್ಯದಲ್ಲಿ ಫೆಬ್ರವರಿ 15 ರವರೆಗೆ ಶಾಲಾ-ಕಾಲೇಜುಗಳು ಬಂದ್
- ಮದುವೆ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಅಥವಾ ರಾಜಕೀಯ ಸಭೆಗಳಲ್ಲಿ 50ಕ್ಕಿಂತ ಹೆಚ್ಚು ಜನರಿಗೆ ಅನುಮತಿಯಿಲ್ಲ
- ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚು ಜನರು ಭಾಗವಹಿಸಲು ಅವಕಾಶವಿಲ್ಲ
- ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್ಗಳಲ್ಲಿ ಶೇ.50ರಷ್ಟು ಸಿಬ್ಬಂದಿಯ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸೂಚನೆ
- ಕ್ಷೌರದ ಸಲೂನ್ಗಳು, ಜಿಮ್ಗಳು ಮತ್ತು ಬ್ಯೂಟಿ ಸಲೂನ್ಗಳು ಜನವರಿ 10 ರ ಮಧ್ಯರಾತ್ರಿಯಿಂದ ಶೇಕಡಾ 50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ
- ಮನರಂಜನಾ ಉದ್ಯಾನವನಗಳು, ಮೃಗಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಎಲ್ಲಾ ಇತರ ಪ್ರವಾಸಿ ಸ್ಥಳಗಳು ಬಂದ್
- ಮಹಾರಾಷ್ಟ್ರ ಸರ್ಕಾರವು ಮದ್ಯದ ಅಂಗಡಿ ಮತ್ತು ಪೂಜಾ ಸ್ಥಳಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಕ್ರಮೇಣ ನಿರ್ಬಂಧಗಳನ್ನು ಜಾರಿಗೊಳಿಸಲಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಿಯಮಗಳು
- ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ನೈಟ್ ಕರ್ಫ್ಯೂ ಜಾರಿ
- ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ತರಗತಿಗಳು ಜನವರಿ 16ರವರೆಗೆ ಸ್ಥಗಿತ, ಆನ್ಲೈನ್ ಮೂಲಕ ತರಗತಿ
- ಮುಖ್ಯ ಕಾರ್ಯದರ್ಶಿಯವರ ಆದೇಶದ ಪ್ರಕಾರ, "ಜನವರಿ 15 ರೊಳಗೆ ರಾಜ್ಯದಲ್ಲಿನ 15 ರಿಂದ 18 ವರ್ಷದೊಳಗಿನ ಎಲ್ಲಾ ಫಲಾನುಭವಿಗಳು COVID-19 ಲಸಿಕೆಯನ್ನು ಪಡೆಯಬೇಕು
ಮಧ್ಯಪ್ರದೇಶದಲ್ಲಿ ನಿಯಮಗಳು
- ರಾಜ್ಯ ಸರ್ಕಾರವು ಮದುವೆಗಳಲ್ಲಿ 250 ಮತ್ತು ಅಂತ್ಯಕ್ರಿಯೆಯಲ್ಲಿ 50 ಜನರಿಗೆ ಮಾತ್ರ ಅನುಮತಿ ನೀಡಿದೆ
- ಶೇ. 50ರಷ್ಟು ಹಾಜರಾತಿಯೊಂದಿಗೆ ಶಾಲೆಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ
- ನಗರದಲ್ಲಿನ ಎಲ್ಲಾ ದೊಡ್ಡ ಜಾತ್ರೆಗಳು ರದ್ದು
- ರಾಜ್ಯದಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಆರು ಗಂಟೆಗಳ ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ವಿಧಿಸಲಾಗುತ್ತದೆ
- ಕೊವಿಡ್-19 ಕೇಂದ್ರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ
- ಪ್ರತಿದಿನ ಕನಿಷ್ಠ 60,000 COVID-19 ಪರೀಕ್ಷೆ ನಡೆಸುವುದು ಹಾಗೂ ಎಲ್ಲಾ ರೋಗಿಗಳನ್ನು ಮನೆಯ ಪ್ರತ್ಯೇಕತೆ(ಹೋಮ್ ಐಸೋಲೇಷನ್)ಯಲ್ಲಿ ಮೇಲ್ವಿಚಾರಣೆ ಮಾಡುವುದು
- ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಕಠಿಣ ದಂಡ ವಿಧಿಸುವುದು
ಪಶ್ಚಿಮ ಬಂಗಾಳದಲ್ಲಿ ಏನಿರುತ್ತೆ ಹಾಗೂ ಏನಿರಲ್ಲ
ರಾಜ್ಯದಲ್ಲಿ ಯಾವುದಕ್ಕೆಲ್ಲ ಅನುಮತಿ:
- ರಾತ್ರಿ 7 ಗಂಟೆಯವರೆಗೆ ಸ್ಥಳೀಯ ರೈಲುಗಳು ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ
- ಎಲ್ಲಾ ಶಾಪಿಂಗ್ ಮಾಲ್ಗಳು ಮತ್ತು ಮಾರುಕಟ್ಟೆಗಳು ಅರ್ಧದಷ್ಟು ಸಾಮರ್ಥ್ಯದೊಂದಿಗೆ ರಾತ್ರಿ 10 ರವರೆಗೆ ತೆರೆದಿರಲು ಅನುಮತಿ
- ದೂರದ ರೈಲುಗಳು ತಮ್ಮ ಸಾಮಾನ್ಯ ವೇಳಾಪಟ್ಟಿ ಮತ್ತು ಸಾಮರ್ಥ್ಯದ ಪ್ರಕಾರ ಕಾರ್ಯನಿರ್ವಹಿಸಬೇಕು
- ಕೋಲ್ಕತ್ತಾದಲ್ಲಿ ಮೆಟ್ರೋ ರೈಲುಗಳು 50 ಪ್ರತಿಶತ ಸಾಮರ್ಥ್ಯದೊಂದಿಗೆ ಎಂದಿನ ಸಮಯದ ಪ್ರಕಾರ ಕಾರ್ಯನಿರ್ವಹಿಸುತ್ತವೆ
- 50 ರಷ್ಟು ಸಾಮರ್ಥ್ಯದೊಂದಿಗೆ ಸಿನಿಮಾ ಮಂದಿರಗಳು ಮತ್ತು ಚಿತ್ರಮಂದಿರಗಳು ಕಾರ್ಯನಿರ್ವಹಿಸಲು ಅವಕಾಶ
- ಸಭೆ ಮತ್ತು ಸಮಾರಂಭಗಳಲ್ಲಿ ಏಕಕಾಲಕ್ಕೆ ಗರಿಷ್ಠ 200 ಅಥವಾ ಸಭಾಂಗಣದ ಶೇಕಡಾ 50ರಷ್ಟು ಸಾಮರ್ಥ್ಯದಷ್ಟು ಜನರು ಭಾಗವಹಿಸಲು ಅನುಮತಿ
- ಬಾರ್ ಮತ್ತು ರೆಸ್ಟೊರೆಂಟ್ಗಳು ರಾತ್ರಿ 10 ಗಂಟೆಯವರೆಗೆ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ತೆರೆದಿರಲು ಅನುಮತಿ
- ಎಂದಿನ ಪ್ರಕಾರ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಮನೆ ವಿತರಣೆಗೆ ಅವಕಾಶ
- ದೆಹಲಿ ಮತ್ತು ಮುಂಬೈನಿಂದ ಸೋಮವಾರ ಮತ್ತು ಶುಕ್ರವಾರ ಮಾತ್ರ ಎರಡು ವಿಮಾನಗಳ ಸಂಚಾರಕ್ಕೆ ಅನುಮತಿ
Recommended Video
ರಾಜ್ಯದಲ್ಲಿ ಯಾವುದಕ್ಕೆ ಅನುಮತಿಯಿಲ್ಲ:
- ಮೃಗಾಲಯಗಳು ಸೇರಿದಂತೆ ಎಲ್ಲಾ ಪ್ರವಾಸಿ ಸ್ಥಳಗಳು ಬಂದ್
- ಈಜುಕೊಳಗಳು, ಪಾರ್ಲರ್ಗಳು, ಸ್ಪಾ, ಮತ್ತು ಜಿಮ್ಗಳು ಬಂದ್
- ಮದುವೆಗಳಲ್ಲಿ 50 ಕ್ಕಿಂತ ಹೆಚ್ಚು ಜನರಿಗೆ ಅನುಮತಿಸಲಾಗುವುದಿಲ್ಲ ಮತ್ತು ಅಂತ್ಯಕ್ರಿಯೆ ಮತ್ತು ಸಮಾಧಿ ವೇಳೆ 20 ಜನರಿಗೆ ಮಾತ್ರ ಅನುಮತಿ
- ಯುಕೆಯಿಂದ ನೇರ ವಿಮಾನಯಾನ ಸ್ಥಗಿತ