ಭಾರತೀಯರಿಗೆ ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಸಿದ್ಧ: ಮೋದಿ
ನವದೆಹಲಿ, ಡಿಸೆಂಬರ್.04: ಭಾರತದಲ್ಲಿ ಮುಂದಿನ ಕೆಲವೇ ವಾರಗಳಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಲಸಿಕೆಯನ್ನು ಸಂಶೋಧಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಸಿದ್ದಾರೆ. ಶುಕ್ರವಾರ ನಡೆದ ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ದೇಶದಲ್ಲಿ ಸಾಧ್ಯವಾದಷ್ಟು ಬೇಗ ಕೊರೊನಾವೈರಸ್ ಲಸಿಕೆ ನೀಡುವುದಕ್ಕೆ ಹಸಿರು ನಿಶಾನೆ ತೋರಲಾಗುತ್ತದೆ. ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ವೃದ್ಧರು ಸೇರಿದಂತೆ ಕೊವಿಡ್-19 ಸೋಂಕಿನಿಂದ ಹೆಚ್ಚು ಅಪಾಯವನ್ನು ಹೊಂದಿರುವ ವರ್ಗಕ್ಕೆ ಲಸಿಕೆ ನೀಡಲು ಮೊದಲ ಆದ್ಯತೆ ಕೊಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಸಿಹಿಸುದ್ದಿ: ಭಾರತದಲ್ಲಿ 90,16,289 ಕೊರೊನಾ ಸೋಂಕಿತರು ಗುಣಮುಖ
ಭಾರತೀಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸಂಶೋಧಕರು ಕಂಡು ಹಿಡಿಯುವ ಲಸಿಕೆಯ ಮೇಲೆ ಹೆಚ್ಚು ವಿಶ್ವಾಸವನ್ನು ಹೊಂದಲಾಗಿದೆ. ಏಕೆಂದರೆ ಇಂದು ಇಡೀ ಜಗತ್ತು ಅತ್ಯಂತ ಕಡಿಮೆ ಬೆಲೆಯ ಮತ್ತು ಸುರಕ್ಷಿತ, ಪರಿಣಾಮಕಾರಿ ಕೊರೊನಾವೈರಸ್ ಲಸಿಕೆಗಾಗಿ ಎದುರು ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಸಹಕಾರ
ಕೊರೊನಾವೈರಸ್ ಸೋಂಕಿನ ಲಸಿಕೆ ವಿತರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಂಡಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ದೇಶಾದ್ಯಂತ ಲಸಿಕೆ ವಿತರಣೆಯನ್ನು ಸಮರ್ಪಕ ರೀತಿಯಲ್ಲಿ ಪೂರೈಸುವ ಸಾಮರ್ಥ್ಯ ಮತ್ತು ಪರಿಣಿತಿಯು ಭಾರತೀಯರಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೇ ವೈದ್ಯಕೀಯ ವಲಯ ಹಾಗೂ ಲಸಿಕೆ ಸಂಶೋಧನೆಯಲ್ಲಿ ದೇಶವು ವಿಶೇಷ ಪಾಂಡಿತ್ಯ ಮತ್ತು ಅನುಭವವನ್ನು ಹೊಂದಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಮಯ ಇದೀಗ ಬಂದಿದೆ ಎಂದು ಮೋದಿ ಹೇಳಿದ್ದಾರೆ.
ಸರ್ವಪಕ್ಷ ಮುಖಂಡರ ಸಲಹೆ ಕೋರಿದ ಪ್ರಧಾನಿ
ಕೊರೊನಾವೈರಸ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ವಪಕ್ಷದ ನಾಯಕರು ತಮ್ಮ ಸಲಹೆ ಸೂಚನೆಗಳನ್ನು ಬರಹದ ರೂಪದಲ್ಲಿ ನೀಡಬೇಕು. ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಎಲ್ಲ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರದ ಸರ್ವಪಕ್ಷ ಸಭೆಯಲ್ಲಿ ಹೆಚ್ ಡಿ ದೇವೇಗೌಡರು
ರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕುರಿತು ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಸರ್ವಪಕ್ಷಗಳ ಸಭೆಯಲ್ಲಿ ದೇಶದ ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡರು ಭಾಗವಹಿಸಿದ್ದರು. ಬೆಂಗಳೂರಿನ ತಮ್ಮ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು.
ಕೊರೊನಾವೈರಸ್ ಲಸಿಕೆ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚೆ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟಕ್ಕೆ ಯಾವೆಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದೇಶಗಳಿಗೂ ಮತ್ತು ಭಾರತದಲ್ಲಿ ತೆಗೆದುಕೊಂಡ ಶಿಸ್ತುಕ್ರಮಗಳ ಕುರಿತು ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು 15-20 ನಿಮಿಷಗಳ ಕಾಲ ಸದಸ್ಯರಿಗೆ ಮಾಹಿತಿ ನೀಡಿದರು. ದೇಶದಲ್ಲಿ ಯಾವ ಯಾವ ಕಂಪನಿಗಳು ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಲಸಿಕೆ ಪ್ರಯೋಗದ ವೈದ್ಯಕೀಯ ಸಂಶೋಧನೆಯು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾತನಾಡಿದರು. ಇಂದಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾಮಾಜಿಕ ನ್ಯಾಯ ಸಚಿವ ಥವಾರ್ ಚಾಂದ್ ಗೆಹ್ಲೋಟ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು.
Recommended Video