ನಿರ್ದಿಷ್ಟ ದರ ಮಾದರಿ ಇಲ್ಲದಿರುವುದೇ ಕೋವಿಡ್ ಸಾವಿನ ಹೆಚ್ಚಳಕ್ಕೆ ಕಾರಣ: ಸಮಿತಿ ಕಿಡಿ
ನವದೆಹಲಿ, ನವೆಂಬರ್ 21: ನಿರ್ದಿಷ್ಟ ಮಾರ್ಗಸೂಚಿಗಳ ಗೈರು ಹಾಜರಿಯ ಕಾರಣದಿಂದಾಗಿ ಖಾಸಗಿ ಚಿಕಿತ್ಸೆಗಾಗಿ ಕೋವಿಡ್ 19 ರೋಗಿಗಳಿಗೆ ಅತಿಯಾದ ಶುಲ್ಕ ವಿಧಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಸಭೆ ಸಂಸದ ರಾಮ್ ಗೋಪಾಲ್ ಯಾದವ್ ನೇತೃತ್ವದ ಸಂಸದೀಯ ಸಮಿತಿಯ ವರದಿ ತಿಳಿಸಿದೆ. ಒಂದು ಸುಸ್ಥಿರ ದರ ಮಾದರಿಯನ್ನು ಜಾರಿಗೊಳಿಸಿದ್ದರೆ ಅನೇಕ ಜೀವಗಳನ್ನು ಉಳಿಸಬಹುದಾಗಿತ್ತು ಎಂದು ವರದಿ ಹೇಳಿದೆ.
ಸಂಸದೀಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಯಾದವ್ ಅವರು ಶನಿವಾರ ಆನ್ಲೈನ್ ಸಭೆಯಲ್ಲಿ 'ಔಟ್ಬ್ರೇಕ್ ಆಫ್ ಪ್ಯಾಂಡೆಮಿಕ್ ಕೋವಿಡ್-19 ಆಂಡ್ ಇಟ್ಸ್ ಮ್ಯಾನೇಜ್ಮೆಂಟ್' ಎಂಬ ಶೀರ್ಷಿಕೆಯ ವರದಿಯನ್ನು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದರು. ಕೇಂದ್ರ ಸರ್ಕಾರವು ಕೋವಿಡ್ ಸೋಂಕಿನ ಪಿಡುಗನ್ನು ನಿಭಾಯಿಸಿದ ಬಗೆಯನ್ನು ಅವರು ಟೀಕಿಸಿದರು.
'ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ನಿರ್ದಿಷ್ಟ ಮಾರ್ಗಸೂಚಿಗಳು ಇಲ್ಲದ ಕಾರಣದಿಂದ ಆರೋಗ್ಯ ಸೇವೆಯ ಪೂರೈಕೆ ವೆಚ್ಚ ಹೆಚ್ಚಾಗಿದೆ. ಇದರ ಪರಿಣಾಮದಿಂದ ಕೋವಿಡ್ ರೋಗಿಗಳಿಗೆ ಮಿತಿಮೀರಿದ ಶುಲ್ಕವನ್ನು ವಿಧಿಸಲಾಗಿದೆ' ಎಂದು ಸಮಿತಿ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
'ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಒಂದು ಸುಸ್ಥಿರ ದರ ಮಾದರಿಯನ್ನು ಜಾರಿಗೆ ತಂದಿದ್ದರೆ ಅನೇಕ ಸಾವುಗಳನ್ನು ತಡೆಯಬಹುದಾಗಿತ್ತು ಎನ್ನುವ ಅಭಿಪ್ರಾಯಕ್ಕೆ ಸಮಿತಿ ಬಂದಿದೆ' ಎಂದು ಅದು ಹೇಳಿದೆ.
'ಸಚಿವಾಲಯವು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಇತರೆ ಲಸಿಕೆ ತಯಾರಕರ ಜತೆಗೆ ಸಹಭಾಗಿತ್ವ ಹೊಂದಿದರೆ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಲಸಿಕೆಗಳನ್ನು ಸುಲಭವಾಗಿ ದಕ್ಕುವಂತೆ ಮಾಡಬಹುದು. ಸಚಿವಾಲಯವು ದೇಶದ ಆರ್ಥಿಕ ದುರ್ಬಲ ವರ್ಗಕ್ಕೆ, ಮುಖ್ಯವಾಗಿ ಗ್ರಾಮೀಣ ಭಾಗಗಳು ಹಾಗೂ ನಗರದ ಕೊಳೆಗೇರಿ ಪ್ರದೇಶಗಳಲ್ಲಿ ಸಬ್ಸಿಡಿ ದರದಲ್ಲಿ ಲಸಿಕೆ ಪೂರೈಸಬೇಕು. ಕಪ್ಪು ಮಾರುಕಟ್ಟೆಯ ಸೃಷ್ಟಿಯ ಸಂಭಾವ್ಯತೆ ಹಾಗೂ ಲಸಿಕೆಗಳ ಕೊರತೆಯುಂಟಾಗದಂತೆ ನೋಡಿಕೊಳ್ಳಲು ಹೆಚ್ಚು ಜಾಗರೂಕತೆ ವಹಿಸಬೇಕು' ಎಂದು ಸಲಹೆ ನೀಡಿದೆ.