ಸತತ 4 ವಾರ ಸೋಂಕು ಸ್ಥಿರವಾಗಿದ್ದರೆ ಕೊರೊನಾ ಎಂಡೆಮಿಕ್ ಎಂದು ಹೇಳಬಹುದು
ನವದೆಹಲಿ, ಫೆಬ್ರವರಿ 15: ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಕೊರೊನಾ ಅಂತ್ಯ ಎಂದು ಅರ್ಥವಲ್ಲ ಎಂದು ಜಾಕೋಬ್ ಜಾನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೇನು ಮೂರನೇ ಅಲೆ ಮುಕ್ತಾಯದೊಂದಿಗೆ ಕೋವಿಡ್-19 ಕಥೆಯೂ ಮುಗಿದೇ ಹೋಯ್ತು ಎನ್ನುವಂತಹ ಸಕಾರಾತ್ಮಕ ವಾತಾವರಣ ಕಾಣುತ್ತಿದೆ.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಕೆ: 1 ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆ
ಈ ಬೆಳವಣಿಗೆಗಳ ಬಗ್ಗೆ ಭಾರತದ ಖ್ಯಾತ ವೈರಾಲಜಿಸ್ಟ್ ಜಾಕೋಬ್ ಜಾನ್ ಮಾತನಾಡಿದ್ದು, ಭಾರತದಲ್ಲಿ ಕೋವಿಡ್-19 ಸೋಂಕು ಸಂಖ್ಯೆಗಳು ಸತತ 4 ವಾರಗಳ ಕಾಲ ಇಳಿಕೆಯ ಹಾದಿಯಲ್ಲೇ ಇದ್ದರಷ್ಟೇ ಅದನ್ನು ಎಂಡೆಮಿಕ್ ಹಂತದಲ್ಲಿದೆ ಎಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ.
ಜ.21 ರಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಇಳಿಮುಖವಾಗುತ್ತಿದ್ದು, ಇಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ಇದ್ದು ಸತತ 9 ನೇ ದಿನ ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ.
ಸಣ್ಣಪುಟ್ಟ ಏರುಪೇರುಗಳಿಂದ ಕೋವಿಡ್-19 ಎಂಡೆಮಿಕ್ ಹಂತ ತಲುಪಿದೆ ಎನ್ನಲು ಸಾಧ್ಯವಿಲ್ಲ. ಕೋವಿಡ್-19 ಎಂಡೆಮಿಕ್ ಹಂತ ತಲುಪಿದರೂ ಅದರಿಂದ ಹೊರಬರಲು ಹಲವು ತಿಂಗಳುಗಳೇ ಬೇಕು ಹಾಗೂ ಓಮಿಕ್ರಾನ್, ಡೇಲ್ಟಾಗಿಂತಲೂ ಹೆಚ್ಚು ಪ್ರಸರಣ ವೇಗ, ಮಾರಕವಾದ ರೂಪಾಂತರಿ ವೈರಾಣು ಹುಟ್ಟಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಜಾಕೋಬ್ ಜಾನ್ ಅಭಿಪ್ರಾಯಪಟ್ಟಿದ್ದಾರೆ.
ಓಮಿಕ್ರಾನ್ ಭೀತಿಯಿಂದಾಗಿ 3ನೇ ಅಲೆಯಲ್ಲಿರುವ ಭಾರತದಲ್ಲಿ ದಿನ ಕ್ರಮೇಣ ಸೋಂಕಿನ ಪ್ರಮಾಣ ತಗ್ಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 27,409 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ.
ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 27,409 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಅಂತೆಯೇ ಇದೇ ಅವಧಿಯಲ್ಲಿ ಕೋವಿಡ್ ನಿಂದಾಗಿ 347 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 5,09,358ಕ್ಕೆ ಏರಿಕೆಯಾಗಿದೆ.
ಇಂದಿನ ಹೊಸ ಸೋಂಕು ಪ್ರಕರಣಗಳೊಂದಿಗೆ ದೇಶದಲ್ಲಿನ ಸೋಂಕು ಸಕಾರಾತ್ಮಕ ದರ ಶೇ.2.23ಕ್ಕೆ ಕುಸಿದಿದೆ. 24 ಗಂಟೆಗಳಲ್ಲಿ ದೇಶಾದ್ಯಂತ 82,817 ಮಂದಿ ಸೋಂಕಿತರು ಗುಣಮುಖರಾಗಿದ್ದು ಆ ಮೂಲಕ ಗುಣಮುಖರ ಪ್ರಮಾಣ 4,17,60,458ಕ್ಕೇರಿದೆ.
ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,23,127ಕ್ಕೆ ಇಳಿಕೆಯಾಗಿದೆ. ಅಂತೆಯೇ ದೇಶದಲ್ಲಿನ ಕೋವಿಡ್ ಲಸಿಕೆ ವಿತರಣೆ ಪ್ರಮಾಣ 173.42 ಕೋಟಿ ಡೋಸ್ ಗೇರಿದೆ.