ಗಂಗಾ ನದಿಯಲ್ಲಿ ತೇಲಿದ ಶವಗಳು; ಪಕ್ಕದ ರಾಜ್ಯದತ್ತ ಪರಸ್ಪರ ಬೊಟ್ಟು!
ನವದೆಹಲಿ, ಮೇ 11: ಬಿಹಾರದ ಬಕ್ಸಾರ್ ಜಿಲ್ಲೆಯ ಚೌಸಾ ಪ್ರದೇಶದ ಗಂಗಾ ನದಿಯಲ್ಲಿ ಮೃತದೇಹಗಳ ಪತ್ತೆಗೆ ಸಂಬಂಧಿಸಿದಂತೆ ಬಿಹಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಹಾಗೂ ಅಧಿಕಾರಿಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
Recommended Video
ಬಿಹಾರ ಸರ್ಕಾರವು ಗಂಗಾ ನದಿಗೆ ಎಸೆಯಲ್ಪಟ್ಟ ಮೃತದೇಹಗಳನ್ನು ಹಿಂಪಡೆದು ಶವಪರೀಕ್ಷೆ ಬಳಿಕ ಅವುಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ತಿಳಿಸಿದೆ. ಪವಿತ್ರ ಗಂಗಾ ನದಿಯಲ್ಲಿ ಮೃತದೇಹಗಳನ್ನು ಎಸೆದಿರುವುದು ತೀರಾ ದುರಾದೃಷ್ಟಕರ ಸಂಗತಿಯಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಗಂಗಾ ನದಿಗೆ ಶವಗಳನ್ನು ಎಸೆದಿದ್ದು ಅಂಬ್ಯುಲೆನ್ಸ್ ಚಾಲಕರು
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತಾಯಿ ಗಂಗಾ ನದಿಯನ್ನು ಶುದ್ಧಗೊಳಿಸುವುದಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಇದೊಂದು ಅನಿರೀಕ್ಷಿತ ಘಟನೆಯಾಗಿದ್ದು, ಬಿಹಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ತಕ್ಷಣ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಟ್ಯಾಗ್ ಮಾಡಲಾಗಿದೆ.
ಮೃತದೇಹಗಳ ಬಗ್ಗೆ ಬಿಹಾರ ಸಚಿವರ ಸರಣಿ ಟ್ವೀಟ್
ಚೌಸಾ ಪ್ರದೇಶದ ಬಳಿ ಗಂಗಾ ನದಿಯಲ್ಲಿ ಶವಗಳ ಪತ್ತೆಗೆ ಸಂಬಂಧಿಸಿದಂತೆ ಬಿಹಾರ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಝಾ ಸರಣಿ ಟ್ವೀಟ್ ಮಾಡಿದ್ದಾರೆ. ಸೋಮವಾರ 71 ಮೃತದೇಹಗಳನ್ನು ವಶಕ್ಕೆ ಪಡೆದು ಶವಪರೀಕ್ಷೆ ನಡೆಸಲಾಗಿದ್ದು, ಈ ಮೃತದೇಹಗಳು ಬಹುಶಃ ನಾಲ್ಕೈದು ದಿನಗಳ ಹಿಂದಿನವು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಬಿಹಾರ, ಉತ್ತರ ಪ್ರದೇಶಕ್ಕೆ ಕೇಂದ್ರ ಸಚಿವರ ಸಲಹೆ
"ಕೊವಿಡ್-19 ಶಿಷ್ಟಾಚಾರದ ಪ್ರಕಾರ 71 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಯ ರಾಣಿಘಾಟ್ನ ಬಳಿ ನದಿಯಲ್ಲಿ ಬಲೆಯನ್ನು ಹಾಕಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶದ ಅಧಿಕಾರಿಗಳು ಮತ್ತು ಜಿಲ್ಲಾಡಳಿತವು ಜಾಗರೂಕರಾಗಿರಿ ಎಂದು ಸಲಹೆ ನೀಡುದ್ದೇನೆ" ಎಂದು ಸಚಿವ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮಾಡಿದ್ದಾರೆ.
ಬಕ್ಸಾರ್ ಜಿಲ್ಲಾಡಳಿತದ ಆರೋಪವೇನು?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಉತ್ತರ ಪ್ರದೇಶದ ಘಾಜಿಪುರ್ ಗಡಿ ಭಾಗದ ನದಿಯಲ್ಲಿ ಮೃತದೇಹಗಳ ಎಸೆಯಲಾಗಿದೆ. ಈ ಘಟನೆಗೆ ಘಾಜಿಪುರ್ ಜಿಲ್ಲಾಡಳಿತವೇ ಮುಖ್ಯ ಕಾರಣ ಎಂದು ಬಕ್ಸಾರ್ ಜಿಲ್ಲಾಧಿಕಾರಿ ಅಮನ್ ಸಮಿರ್ ಆರೋಪಿಸಿದ್ದಾರೆ.
ಶವಗಳ ಬಗ್ಗೆ ಘಾಜಿಪುರ್ ಜಿಲ್ಲಾಡಳಿತದ ವಾದ?
ಬಿಹಾರದ ಬಕ್ಸಾರ್ ಗಡಿಯಲ್ಲಿರುವ ಗಂಗಾ ನಡಿಯಲ್ಲಿ ಶವಗಳು ಪತ್ತೆಯಾಗಿದ್ದು, ಅವುಗಳಿಗೆ ಅಲ್ಲಿನ ಜಿಲ್ಲಾಡಳಿವೇ ಹೊಣೆಯಾಗಿರುತ್ತದೆ ಎಂದು ಉತ್ತರ ಪ್ರದೇಶ ಘಾಜಿಪುರ್ ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಹೇಳಿದ್ದಾರೆ. ಇದರ ಮಧ್ಯೆ ಉತ್ತರ ಪ್ರದೇಶದ ಬಲ್ಲಿಯಾ ಎಂಬ ಪ್ರದೇಶದ ಗಂಗಾ ನದಿಯಲ್ಲಿ ಮತ್ತಷ್ಟು ಮೃತದೇಹಗಳು ಪತ್ತೆಯಾಗಿವೆ. ಆದರೆ ಎಷ್ಟು ಶವಗಳು ಪತ್ತೆಯಾಗಿವೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.