ಕೊರೊನಾ ವೈರಸ್: ಜಪಾನ್ ಹಡಗಿನಲ್ಲಿ ಇರುವ ಮೂವರು ಭಾರತೀಯರಿಗೆ ಸೋಂಕು
ನವದೆಹಲಿ, ಫೆಬ್ರವರಿ.14: ಜಪಾನ್ ಹಡಗಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲೂ ದಿನೇ ದಿನೆ ಏರಿಕೆಯಾಗುತ್ತಿದೆ. ಈಗಾಗಲೇ ಮೂವರು ಭಾರತೀಯರಿಗೆ ಮಾರಕ ರೋಗ ಕೊರೊನಾ ವೈರಸ್ (ಕೊವಿಡ್-19) ತಗಲಿರುವ ಬಗ್ಗೆ ಸ್ಪಷ್ಟವಾಗಿದೆ.
ಕಳೆದ ತಿಂಗಳು ಹಾಂಗ್ ಕಾಂಗ್ ನಿಂದ ಹೊರಟ ಡೈಮೆಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ 138 ಭಾರತೀಯರು ಸೇರಿದಂತೆ 3,711 ಮಂದಿ ಪ್ರಯಾಣಿಕರಿದ್ದು, ಜಪಾನ್ ನ ಯೊಕೊಹಮಾ ಬಂದರು ಹಡಗಿನಲ್ಲಿರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಫೆಬ್ರವರಿ.19ರವರೆಗೂ ಹಡಗಿನಲ್ಲಿರುವ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಈಗಾಗಲೇ ಜಪಾನ್ ಸರ್ಕಾರವು ಸ್ಪಷ್ಟಪಡಿಸಿದೆ.
ಕೊರೊನಾ ವೈರಸ್: ಒಂದೇ ನಗರ.. ಒಂದೇ ದಿನ.. ಹೆಣವಾಗಿದ್ದು 242 ಜನ!
ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಗುರುವಾರದ ವೇಳೆಗೆ 1,381ಕ್ಕೆ ಏರಿಕೆಯಾಗಿದೆ. 64 ಸಾವಿರ ಜನರಿಗೆ ಮಾರಕ ಸೋಂಕು ತಗಲಿರುವ ಬಗ್ಗೆ ಆಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಸ್ಪಷ್ಟನೆಯನ್ನು ನೀಡಿದೆ.
ಹಡಗಿನಲ್ಲಿ ಇರುವ 219 ಪ್ರಯಾಣಿಕರಿಗೆ ಕೊರೊನಾ ವೈರಸ್
ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇರುವ 3,711 ಪ್ರಯಾಣಿಕರ ಪೈಕಿ 219 ಪ್ರಯಾಣಿಕರಿಗೆ ಸೋಂಕು ತಗಲಿರುವ ಬಗ್ಗೆ ಇದುವರೆಗೂ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಈ ಪೈಕಿ ಮೂವರು ಭಾರತೀಯರಿಗೆ ಮಾರಕ ಸೋಂಕು ತಗಲಿದೆ ಎಂದು ಜಪಾನ್ ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೊವಿಡ್-19 ಸೋಂಕಿತ ಭಾರತೀಯರ ಆರೋಗ್ಯ ಸ್ಥಿರ
ಕೊರೊನಾ ವೈರಸ್ ಪತ್ತೆಗೆ ನಡೆಸಿದ ತಪಾಸಣೆ ವೇಳೆ ಇದುವರೆಗೂ ಮೂವರು ಭಾರತೀಯರಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನು, ಸೋಂಕಿತರಿಗೆ ಹಡಗಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರು ಸೋಂಕಿತರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಹಡಗಿನ ಪ್ರವೇಶಕ್ಕೆ ಫೆ.19ರವರೆಗೂ ನಿರ್ಬಂಧ
ಕಳೆದ ಪೆಬ್ರವರಿ.03ರಂದು ಡೈಮೆಂಡ್ ಪ್ರಿನ್ಸ್ ಹಡಗಿನಲ್ಲಿದ್ದ ಬ್ಯಾಂಕಾಕ್ ಪ್ರಜೆಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಂದು ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಸೋಂಕು ಇರುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಪಾನ್ ಸರ್ಕಾರವು, ದೇಶವನ್ನು ಪ್ರವೇಶಿಸಲು ಹಡಗಿಗೆ ನಿರ್ಬಂಧ ವಿಧಿಸಲಾಯಿತು. ಫೆಬ್ರವರಿ.19ರವರೆಗೂ ಪ್ರಯಾಣಿಕರನ್ನು ಹಡಗಿನಲ್ಲೇ ನಿರ್ಬಂಧಿಸುವಂತೆ ಸೂಚನೆ ನೀಡಲಾಯಿತು.
ವೃದ್ಧನಿಗೆ ಜಪಾನ್ ಹಡಗಿನ ಬಂಧನದಿಂದ ಮುಕ್ತಿ
ಇನ್ನು, 11 ದಿನಗಳಿಂದಲೂ ಹಡಗಿನಲ್ಲೇ ಬಂಧಿಸಲ್ಪಟ್ಟಿದ್ದ 80 ವರ್ಷದ ವೃದ್ಧನನ್ನು ಶುಕ್ರವಾರ ಹೊರ ಬಿಡಲಾಗಿದೆ ಎಂದು ಜಪಾನ್ ಸರ್ಕಾರವು ಸ್ಪಷ್ಟಪಡಿಸಿದೆ. ಕೊರೊನಾ ವೈರಸ್ ಇಲ್ಲದಿರುವುದನ್ನು ಸ್ಪಷ್ಟಪಡಿಸಿಕೊಳ್ಳಲಾಗಿದ್ದು, ಅನಾರೋಗ್ಯ ಪೀಡಿತರಾಗಿದ್ದ ವೃದ್ಧೆಯನ್ನು ಹಡಗಿನಿಂದ ಹೊರಗೆ ಕಳುಹಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.