ಭಯ ಬಿಡಿ: ಕೊವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಬಗ್ಗೆ 2 ವಾರದಲ್ಲೇ ದತ್ತಾಂಶ!
ನವದೆಹಲಿ, ಫೆಬ್ರವರಿ.23: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ. ದೇಶದಲ್ಲಿ ಎರಡು ಕಂಪನಿ ಲಸಿಕೆಗಳನ್ನು ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ಔಷಧೀಯ ಪ್ರಾಧಿಕಾರ ಅನುಮೋದನೆ ನೀಡಿದೆ.
ದೇಶದಲ್ಲಿ ಕಳೆದ 38 ದಿನಗಳಲ್ಲಿ 1,14,24,094 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. 64,25,060 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 11,15,542 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 38,83,492 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಕೊವಿಡ್-19 ಲಸಿಕೆಯನ್ನು ನೀಡಲಾಗಿದೆ.
ಸಿಹಿಸುದ್ದಿ: ಭಾರತದ 19 ರಾಜ್ಯಗಳಲ್ಲಿ ಕೊರೊನಾದಿಂದ ಮೃತಪಟ್ಟವರೇ ಇಲ್ಲ!
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇನ್ನೊಂದಡೆ ಅನುಮೋದನೆ ಸಿಕ್ಕಿದ್ದರೂ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಹಿಂದೇಟು ಹಾಕುತ್ತಿದ್ದಾರೆ. ಸಂಶೋಧನಾ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಭಾರತ್ ಬಯೋಟೆಕ್ ಸಂಸ್ಥೆಯು ಸಿಹಿಸುದ್ದಿಯೊಂದನ್ನು ನೀಡಿದೆ.
3ನೇ ಹಂತದ ಸಂಶೋಧನೆಗೆ ಸಂಬಂಧಿಸಿದ ದತ್ತಾಂಶ
ಮೇಡ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಸಹಯೋಗದೊಂದಿಗೆ ಕೊವ್ಯಾಕ್ಸಿನ್ ಲಸಿಕೆ ಸಂಶೋಧನೆ ನಡೆಸಲಾಗುತ್ತಿದೆ. 3ನೇ ಹಂತದ ಸಂಶೋಧನೆಗೆ ಸಂಬಂಧಿಸಿದ ದತ್ತಾಂಶ ಇನ್ನೇನು 2 ವಾರಗಳಲ್ಲೇ ಬಿಡುಗಡೆ ಆಗಲಿವೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ.
2 ವಾರದಲ್ಲಿ ಪರಿಣಾಮಕಾರಿ ಲಸಿಕೆ ಬಿಡುಗಡೆಯ ಭರವಸೆ
"ನಾವು ಸಾಕಷ್ಟು ವೇಗವಾಗಿ ಸಂಶೋಧನೆಗಳನ್ನು ನಡೆಸಿದೆವು. ಆದರೆ ಅಕಸ್ಮಾತ್ತಾಗಿ ಪರಿಣಾಮಕಾರತ್ವವನ್ನು ಗುರುತಿಸುವಲ್ಲಿ ಸ್ವಲ್ಪ ಸೋತೆವು. 2 ಅಥವಾ 3ನೇ ಹಂತದ ಸಂಶೋಧನೆಗಳನ್ನು ಒಟ್ಟಾಗಿ ನಡೆಸಿದ್ದು, ಪರಿಣಾಮಕಾರಿ ವೇಗವನ್ನು ತಿಳಿಯಲು ಸಾಧ್ಯವಾಗಲಿಲ್ಲ. ಅದೇನೇ ಇರಲಿ. ಇನ್ನೆರಡು ವಾರಗಳಲ್ಲಿ ಪರಿಣಾಮಕಾರಿ ದತ್ತಾಂಶಗಳೊಂದಿಗೆ ನಾವು ಹೊರ ಬರುತ್ತೇವೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯ ಚೇರ್ ಮೆನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ಭಾರತದಲ್ಲೇ ಸಂಶೋಧಿಸಿ, ಉತ್ಪಾದಿಸುತ್ತಿರುವ ಮೊದಲ ಲಸಿಕೆ
ಕೊವ್ಯಾಕ್ಸಿನ್ ಲಸಿಕೆಯು ಭಾರತದಲ್ಲೇ ಸ್ಥಳೀಯವಾಗಿ ಸಂಶೋಧಿಸಿ ಮತ್ತು ಉತ್ಪಾದಿಸುತ್ತಿರುವ ಮೊದಲ ಕೊರೊನಾವೈರಸ್ ಲಸಿಕೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ರಾಷ್ಟ್ರೀಯ ವೈದ್ಯಕೀಯ ಪ್ರಾಧಿಕಾರವೇ ಅನುಮೋದನೆ ನೀಡಿದೆ. 3ನೇ ಹಂತದ ಸಂಶೋಧನೆ ಪ್ರಗತಿಯಲ್ಲಿ ಇರುವಾಗಲೇ ರಾಷ್ಟ್ರೀಯ ಪ್ರಾಧಿಕಾರವು ಕಳೆದ ಜನವರಿಯಲ್ಲೇ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಸಂಶೋಧನಾ ಹಂತದಲ್ಲಿರುವ ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮತಿ ನೀಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಐಸಿಎಂಆರ್ ನೀಡಿದ ಮಾಹಿತಿ
"ದೇಶದಲ್ಲಿ ತುರ್ತು ಅಲ್ಲದ ಪರಿಸ್ಥಿತಿಯಲ್ಲೂ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿಯ ಪರಿಣಾಮಕ್ಕೆ ಸಂಬಂಧಿಸಿದಂತೆ ಅಗತ್ಯ ದತ್ತಾಂಶವನ್ನು ಪಡೆಯಬೇಕಿದೆ. ಸದ್ಯದ ಸಾಂಕ್ರಾಮಿಕ ಪಿಡುಗಿನ ಸ್ಥಿತಿಯಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ. ವಿಜ್ಞಾನ ಮತ್ತು ಖಚಿತ ಚಿಕಿತ್ಸೆಗೆ ಅಗತ್ಯವಿರುವ ತ್ವರಿತ ಅನುಮೋದನೆ ಬಗ್ಗೆ ತಜ್ಞರ ಸಮಿತಿ ಪರಿಗಣಿಸುತ್ತದೆ. ಸಾಂಕ್ರಾಮಿಕ ಪಿಡುಗಿನ ಪರಿಸ್ಥಿತಿಯ ನಿರ್ಬಂಧಿತ ಸಮಯದಲ್ಲಿ ಸುರಕ್ಷತೆಗೆ ಸಂಬಂಧಿಸಿದ 3ನೇ ಹಂತದ ಸಂಶೋಧನೆ ನಡೆಯುತ್ತಿದೆ" ಎಂದು ಐಸಿಎಂಆರ್ ನಿರ್ದೇಶಕ ಡಾ.ಬಾಲರಾಮ್ ಭಾರ್ಗವ್ ತಿಳಿಸಿದ್ದಾರೆ.
ದೇಶದಲ್ಲಿ ಕೊವಿಡ್-19 ಸೋಂಕಿನ ಪ್ರಕರಣಗಳು
ಭಾರತದಲ್ಲಿ ಒಂದೇ ದಿನ 10584 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 1,10,16,434ಕ್ಕೆ ಏರಿಕೆಯಾಗಿದೆ. ಒಂದೇ ದಿನ ಕೊವಿಡ್-19 ಸೋಂಕಿಗೆ 78 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,56,463ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 13,255 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 1,07,12,665 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ 1,47,306 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲೇ 10584 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 1,10,16,434ಕ್ಕೆ ಏರಿಕೆಯಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದು ಯಾವ ರಾಜ್ಯದಲ್ಲಿ ಎಷ್ಟು ಡೋಸ್ ಲಸಿಕೆ ವಿತರಿಸಲಾಗಿದೆ ಎನ್ನುವುದರ ಪಟ್ಟಿ ಇಲ್ಲಿದೆ ನೋಡಿ.
ಅತಿಹೆಚ್ಚು ಕೊರೊನಾವೈರಸ್ ಲಸಿಕೆ ನೀಡಿದ ಟಾಪ್-5 ರಾಜ್ಯಗಳು:
ರಾಜ್ಯ - ಲಸಿಕೆ ಹಾಕಿಸಿಕೊಂಡ ಫಲಾನುಭವಿಗಳು
ಉತ್ತರ ಪ್ರದೇಶ - 12,02,243
ಮಹಾರಾಷ್ಟ್ರ - 9,49,445
ಗುಜರಾತ್ - 8,96,667
ರಾಜಸ್ಥಾನ - 8,26,492
ಪಶ್ಚಿಮ ಬಂಗಾಳ - 7,12,744