ಮೊಬೈಲ್ ಕೂಡ ಬಳಸದ ಈ ಮುಖ್ಯಮಂತ್ರಿ ಬ್ಯಾಂಕ್ ಬ್ಯಾಲೆನ್ಸ್ ರು. 2410 !
ಸದ್ಯಕ್ಕೆ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಅತ್ಯಂತ ಬಡವರು ಯಾರು? ಎರಡನೇ ಆಲೋಚನೆ ಮಾಡದೆ ಹೇಳಬಹುದಾದ ಹೆಸರು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್. ಸದ್ಯಕ್ಕೆ ಅವರ ಬಳಿ ಇರುವ ನಗದು 1520 ರುಪಾಯಿ ಮಾತ್ರ.
ಹಿರಿಯ ಕಮ್ಯೂನಿಸ್ಟ್ ನಾಯಕ ಸೋಮವಾರ ಧನ್ ಪುರ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರ ಬಹಿರಂಗ ಮಾಡಿದ್ದಾರೆ. ಅಂದಹಾಗೆ ತ್ರಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವೇಳೆ ಮಾಣಿಕ್ ಸರ್ಕಾರ್ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ರು. 2410.16 ಎಂದು ಘೋಷಿಸಿದ್ದಾರೆ. ಕಳೆದ ಬಾರಿ ಚುನಾವಣೆ ವೇಳೆಯೇ ಅವರ ಬಳಿ ರು. 9720.38 ಇತ್ತು. ಈ ಬಾರಿ ಅದಿನ್ನೂ ಕಡಿಮೆ ಆಗಿದೆ.
ಪ್ರಸಾರವಾಗದ ತ್ರಿಪುರಾ ಸಿಎಂ ಭಾಷಣ, ಪ್ರಸಾರ್ ಭಾರತಿ ವಿರುದ್ಧ ಆಕ್ರೋಶ
1998ರಿಂದ ಮಾಣಿಕ್ ಸರ್ಕಾರ್ ತ್ರಿಪುರ ಮುಖ್ಯಮಂತ್ರಿಗಳಾಗಿದ್ದಾರೆ. ಅರವತ್ತೊಂಬತ್ತು ವರ್ಷದ ಸರ್ಕಾರ್ ಗೆ ಮುಖ್ಯಮಂತ್ರಿಯಾಗಿ 26,315 ರುಪಾಯಿ ವೇತನ. ಆ ಹಣವನ್ನು ಪ್ರತಿ ತಿಂಗಳು ಪಾರ್ಟಿ ಫಂಡ್ ಗೆ ಕೊಟ್ಟುಬಿಡುತ್ತಾರೆ. ಪಕ್ಷದಿಂದ ತಿಂಗಳಿಗೆ 9,700 ರುಪಾಯಿ ಪಡೆಯುತ್ತಾರೆ.
ಕೃಷಿಯೇತರ ಭೂಮಿ ಎಂದು ಅಗರ್ತಲದಲ್ಲಿ 0.0118 ಎಕರೆ ಜಾಗ ಇದ್ದು, ಅದು ಕೂಡ ಅಣ್ಣ-ತಮ್ಮಂದಿರ ಎಲ್ಲರ ಹೆಸರಿನಲ್ಲಿ. ಇದೊಂದೇ ಅವರ ಪಾಲಿನ ಪಿತ್ರಾರ್ಜಿತ ಆಸ್ತಿ. ಮುಖ್ಯಮಂತ್ರಿಗಳ ಬಳಿ ಮೊಬೈಲ್ ಫೋನ್ ಕೂಡ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಅಬ್ಬರ ಬಲು ಜೋರಾಗಿದೆ. ಮಾಣಿಕ್ ಸರ್ಕಾರ್ ಅವರ ಇಮೇಲ್ ಅಕೌಂಟ್ ಕೂಡ ಇಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ದೂರದ ಮಾತಾಯಿತು.
ಇನ್ನು ಅವರ ಪತ್ನಿ- ನಿವೃತ್ತ ರಾಜ್ಯ ಸರಕಾರಿ ಉದ್ಯೋಗಿ ಪಾಂಚಾಲಿ ಭಟ್ಟಾಚಾರ್ ಜೀ ಅವರ ಬಳಿ 20,140 ನಗದು ಇದೆ. ಇನ್ನು ಬ್ಯಾಂಕ್ ಖಾತೆಯಲ್ಲಿ ರು. 12,15,714.78 ಇದೆ. ಅಗರ್ತಲದಲ್ಲಿ ಮುಖ್ಯಮಂತ್ರಿಗಳಿಗಾಗಿ ರಾಜ್ಯ ಸರಕಾರ ನೀಡುವ ವಸತಿಯಲ್ಲಿ ವಾಸ. ಇನ್ನು ಮುಖ್ಯಮಂತ್ರಿಗಳ ಪತ್ನಿ ಪಾಂಚಾಲಿ ಅವರನ್ನು ಅಗರ್ತಲದ ರಸ್ತೆಗಳ ಮೇಲೆ ಆಟೋದಲ್ಲಿ ಓಡಾಡುವಾಗ ನೋಡಬಹುದು.