ಗೊಂದಲದ ಗೂಡಾಗಿರುವ ಸಿಬಿಐ 'ಲಂಚ'ದ ಹಗರಣ : ಯಾರು ಭ್ರಷ್ಟರು?
ನವದೆಹಲಿ, ಅಕ್ಟೋಬರ್ 31 : ಸಿಬಿಐನ ಎರಡನೇ ದೊಡ್ಡ ಹುದ್ದೆ ಅಲಂಕರಿಸಿರುವ ಮತ್ತು ಭ್ರಷ್ಟಾಚಾರದ ವಿವಾದದಲ್ಲಿ ಸಿಲುಕಿರುವ ರಾಕೇಶ್ ಅಸ್ಥಾನಾ ವಿರುದ್ಧ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ವಿರುದ್ಧವೇ ಕಳ್ಳತನದ ಆರೋಪ ಹೊರಿಸುವ ಸಾಧ್ಯತೆಯಿದೆ.
ರಾಕೇಶ್ ಅಸ್ಥಾನಾ ವಿರುದ್ಧ ತನಿಖೆ ನಡೆಸುತ್ತಿದ್ದ ಅಧಿಕಾರಿ ಎಕೆ ಬಸ್ಸಿ ಅವರು ನಡೆಸಿದ ದಾಳಿಯೊಂದರಲ್ಲಿ 10 ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಒಂದು ವಸ್ತು ವಶಪಡಿಸಿಕೊಂಡಿದ್ದನ್ನಷ್ಟೇ ದಾಖಲಿಸಿದ್ದರು ಎಂದು ಸಿಬಿಐ ಅಧಿಕಾರಿ ಸತೀಶ್ ದಗಾರ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸಿಬಿಐ ವಿವಾದ: ರಾಜಕಾರಣಿಗಳ ನಂಟು ಮತ್ತು ಲಂಚದ ವಿವರ ಬಾಯ್ಬಿಟ್ಟ ಉದ್ಯಮಿ
ಅಕ್ಟೋಬರ್ 20ರಂದು ನಡೆಸಿದ ದಾಳಿಯಲ್ಲಿ ದೇವೇಂದರ್ ಕುಮಾರ್ ಎಂಬ ಅಧಿಕಾರಿಯಿಂದ ಎಂಟು ಮೊಬೈಲ್ ಫೋನ್, ಒಂದು ಐಪ್ಯಾಡ್ ಮತ್ತು ಒಂದು ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಮೊಬೈಲೊಂದನ್ನು ಮಾತ್ರ ವಶಪಡಿಸಿಕೊಂಡಿದ್ದಾಗಿ ದಾಖಲಿಸಲಾಗಿತ್ತು. ಆದರೆ, ಇದು ನಮ್ಮ ಗಮನಕ್ಕೆ ಬಂದು ಎಲ್ಲ ವಸ್ತುಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಸತೀಶ್ ದಗಾರ್ ಅವರು ವಿವರಣೆ ನೀಡಿದ್ದಾರೆ.
ಎಕೆ ಬಸ್ಸಿ ಅವರು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧ ಮಾಡಲಾಗಿರುವ ಆರೋಪಗಳ ತನಿಖೆ ನಡೆಸುತ್ತಿದ್ದರು. ಆದರೆ, ಅವರಿಬ್ಬರನ್ನು ಬಲವಂತದ ರಜಾಯ ಮೇಲೆ ಕಳಿಸಿ, ಎಂ ನಾಗೇಶ್ವರ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ಮಾಡುತ್ತಿದ್ದಂತೆ, ಬಸ್ಸಿ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಪೋರ್ಟ್ ಆಫ್ ಬ್ಲೇರ್ ಗೆ ವರ್ಗಾವಣೆ ಮಾಡಲಾಗಿತ್ತು.
ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?
ಈ ವರ್ಗಾವಣೆಯನ್ನು ಪ್ರಶ್ನಿಸಿ ಬಸ್ಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸತೀಶ್ ಬಾಬು ಸನಾ ಎಂಬ ಉದ್ಯಮಿಯಿಂದ ರಾಕೇಶ್ ಅಸ್ಥಾನಾ ಅವರು ಲಂಚ ತಿಂದಿದ್ದರ ಸಾಕ್ಷ್ಯ ತಮ್ಮ ಬಳಿಯಿದೆ ಎಂದು ಹೇಳಿದ್ದಾರೆ. ವಾಟ್ಸಾಪ್ ಸಂದೇಶಗಳು ಮತ್ತು ಕರೆಯ ವಿವರಗಳು ತಮ್ಮ ಬಳಿಯಿವೆ ಎಂದು ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಲಂಚ ಸ್ವೀಕರಿಸಿರುವ ಸಾಕ್ಷ್ಯವೂ ತಮ್ಮ ಬಳಿಯಿವೆ
ಲಂಚದ ಹಗರಣದಲ್ಲಿ ಮಧ್ಯವರ್ತಿಯಾಗಿರುವ ದುಬೈ ನಿವಾಸಿ ಮನೋಜ್ ಪ್ರಸಾದ್ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ನಡುವೆ ಸಂಪರ್ಕವಿರುವುದನ್ನು ಸಾಬೀತುಪಡಿಸುವ ಕರೆಗಳ ವಿವರಗಳೂ, ರಾಕೇಶ್ ಅಸ್ಥಾನಾ ಪರವಾಗಿ ಮನೋಜ್ ಪ್ರಸಾದ್ ಅವರು ಲಂಚ ಸ್ವೀಕರಿಸಿರುವ ಸಾಕ್ಷ್ಯವೂ ತಮ್ಮ ಬಳಿಯಿವೆ ಎಂದು ಬಸ್ಸಿ ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ. ಮನೋಜ್ ಪ್ರಸಾದ್ ಅವರನ್ನು ಅಕ್ಟೋಬರ್ ತಿಂಗಳಲ್ಲಿಯೇ ಬಂಧಿಸಲಾಗಿದೆ. ಮನೋಜ್ ಪ್ರಸಾದ್ ಅವರು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ತನಿಖಾ ಸಂಸ್ಥೆಯ ಮಾಜಿ ನಿರ್ದೇಶಕ ದಿನೇಶ್ವರ ಪ್ರಸಾದ್ ಅವರ ಮಗ. ಅವರ ಇನ್ನೊಬ್ಬ ಮಗನ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬಂದಿದೆ.
ತನಿಖೆಯ ದಿಕ್ಕು ತಪ್ಪಿಸಲು ವರ್ಗಾವಣೆ
ತನಿಖಾಧಿಕಾರಿಯಾಗಿ ತಮ್ಮ ಸ್ಥಾನವನ್ನು ಅಲಂಕರಿಸಿರುವ ಸತೀಶ್ ದಗಾರ್ ಅವರು ಸಾಕ್ಷ್ಯಗಳನ್ನು ತಿರುಚಿ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ರಕ್ಷಿಸಬಹುದು ಎಂದು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದಾರೆ. ವಿರೋಧ ಪಕ್ಷಗಳು ಕೂಡ ಇದೇ ಆರೋಪ ಹೊರಿಸುತ್ತಿವೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಕೇಶ್ ಅಸ್ಥಾನಾ ಅವರನ್ನು ರಕ್ಷಿಸಲೆಂದೇ ಅಲೋಕ್ ವರ್ಮಾ ಅವರನ್ನು ಬಲವಂತದ ರಜೆಯ ಮೇಲೆ ಕಳಿಸಲಾಗಿದೆ ಮತ್ತು ರಾಕೇಶ್ ಅಸ್ಥಾನಾ ವಿರುದ್ಧ ತನಿಖೆ ನಡೆಸುತ್ತಿದ್ದ ತಂಡದ ಇತರ ತನಿಖಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಿಬಿಐ ಕಿತ್ತಾಟ: ಉದ್ಯಮಿ ಸತೀಶ್ ಬಾಬುಗೆ ರಕ್ಷಣೆ ನೀಡಲು ಸುಪ್ರೀಂಕೋರ್ಟ್ ಸೂಚನೆ
ಹಿಂದಿನ ತನಿಖೆಯಲ್ಲಿಯೇ ಹಲವಾರು ತಪ್ಪುಗಳು
ಈ ನಡುವೆ, ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಆದೇಶದಂತೆ ಹಿಂದಿನ ತನಿಖಾ ತಂಡ ನಡೆಸುತ್ತಿದ್ದ ತನಿಖೆಯಲ್ಲಿ ಹಲವಾರು ತಪ್ಪುಗಳು ನುಸುಳಿವೆ ಎಂದು ಕೋರ್ಟಿಗೆ ಸಿಬಿಐ ತಿಳಿಸಿದೆ. ಅಲ್ಲದೆ, ರಾಕೇಶ್ ವರ್ಮಾ ಜೊತೆ ಭ್ರಷ್ಟಾಚಾರದ ಆರೋಪ ಹೊತ್ತಿರುವ ಡೆಪ್ಯುಟಿ ಸುಪರಿಂಟೆಂಡ್ ದೇವೇಂದರ್ ಕುಮಾರ್ ಅವರನ್ನು ಹೆಚ್ಚಿನ ಅವಧಿಗೆ ತಮ್ಮ ವಶಕ್ಕೆ ನೀಡಬೇಕೆಂದು ಸಿಬಿಐ ಕೇಳಿಲ್ಲ ಮತ್ತು ರಾಕೇಶ್ ಅಸ್ಥಾನಾ ಅವರ ಪರವಾಗಿ 5 ಕೋಟಿ ಲಂಚ ಇಸಿದುಕೊಂಡಿರುವ ದುಬೈ ನಿವಾಸಿ ಮನೋಜ್ ಪ್ರಸಾದ್ ಅವರ ವಿಚಾರಣೆಗೂ ಹೆಚ್ಚಿನ ಅವಧಿ ಬೇಕು ಎಂದಿಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಮಗಳ ಮದುವೆಗೆ ಪುಕ್ಕಟೆ ಸೇವೆ ಪಡೆದಿದ್ದ ಸಿಬಿಐನ ರಾಕೇಶ್ ಅಸ್ಥಾನಾ
ಇಬ್ಬರು ನಿರ್ದೇಶಕರನ್ನೂ ಮನೆಗೆ ಕಳಿಸಿದ ಕೇಂದ್ರ
ತನ್ನನ್ನು ಉದ್ದೇಶಪೂರ್ವಕವಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲಾಗಿದೆ, ತನ್ನ ವಿರುದ್ಧ ಹಾಕಲಾಗಿರುವ ಪ್ರಥಮ ಮಾಹಿತಿ ವರದಿಯನ್ನು ರದ್ದುಪಡಿಸಬೇಕೆಂದು ರಾಕೇಶ್ ಅಸ್ಥಾನಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಸತೀಶ್ ಬಾಬು ಸನಾ ಅವರಿಂದಲೇ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಲಂಚ ತಿಂದಿದ್ದಾರೆ ಎಂದು ಆರೋಪಿಸಿದ್ದಾರೆ. ರಾಕೇಶ್ ಅಸ್ಥಾನಾ ಅವರು ಸತೀಶ್ ಬಾಬು ವಿರುದ್ಧ ತನಿಖೆ ನಡೆಸುತ್ತಿದ್ದರೆ, ಅಲೋಕ್ ವರ್ಮಾ ಅವರು ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಡೀಲ್ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ತನಿಖೆಗೆ ಸಿದ್ಧರಾಗುತ್ತಿದ್ದರು. ಈಗ ಅವರಿಬ್ಬರನ್ನೂ ಕೇಂದ್ರ ಸರಕಾರ ಬಲವಂತದ ರಜೆ ನೀಡಿ ಮನೆಗೆ ಕಳಿಸಿದೆ.
ವರ್ಗಾವಣೆಯನ್ನು ಟೀಕಿಸಿದ ಸುಪ್ರೀಂ
ಇವರಿಬ್ಬರು ಹಿರಿಯ ಅಧಿಕಾರಿಗಳನ್ನು ಮನೆಗೆ ಕಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯ, ಹದಿನಾಲ್ಕು ದಿನಗಳಲ್ಲಿ ರಾಕೇಶ್ ಅಸ್ಥಾನಾ ವಿರುದ್ಧ ಮತ್ತು ಅಲೋಕ್ ವರ್ಮಾ ವಿರುದ್ಧದ ತನಿಖೆ ನಡೆಸಿ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡಬೇಕೆಂದು ಕೇಂದ್ರ ಜಾಗೃತಿ ದಳಕ್ಕೆ ಆದೇಶ ನೀಡಿದೆ. ನವೆಂಬರ್ 12ರಂದು ಪ್ರಕರಣ ಮತ್ತೆ ವಿಚಾರಣೆಗೆ ಸುಪ್ರೀಂ ಕೋರ್ಟ್ ಎದುರಿಗೆ ಬರಲಿದೆ. ಅಲ್ಲಿಯವರೆಗೆ, ಹಂಗಾಮಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಂ ನಾಗೇಶ್ವರ ರಾವ್ ಅವರಿಗೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನೂ ಸರ್ವೋಚ್ಚ ನ್ಯಾಯಾಲಯ ಕಸಿದುಕೊಂಡಿದೆ.