ಕೊರೊನಿಲ್ ಕಿಟ್ ಲೈಸನ್ಸ್ ಗೊಂದಲ: ಆಚಾರ್ಯ ಬಾಲಕೃಷ್ಣ ಸ್ಪಷ್ಟನೆ
ಹರಿದ್ವಾರ, ಜೂನ್ 26: ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಹೊರ ತಂದಿರುವ ಕೊವಿಡ್ 19 ಔಷಧಿ ಕೊರೊನಿಲ್ ಕಿಟ್ ಲೈಸನ್ಸ್ ಬಗ್ಗೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ.
Recommended Video
''ಔಷಧಿ ಉತ್ಪಾದನೆ ಮಾಡಲು ಬೇಕಾದ ಲೈಸನ್ಸ್ ಪಡೆದ ಬಳಿಕವೆ ಕೊರೊನಿಲ್ ಉತ್ಪಾದನೆ ಆರಂಭಿಸಲಾಯಿತು. ಮೆಡಿಸಿನ್ ಉತ್ಪಾದನೆ, ಕ್ಲಿನಿಕಲ್ ಟ್ರಯಲ್ ಎಲ್ಲವನ್ನು ಕಾನೂನಿನ ಅಡಿಯಲ್ಲಿ, ಇಲಾಖೆ ನೀಡಿರುವ ನಿರ್ದೇಶನದಂತೆ ನಡೆಸಲಾಗಿದೆ, ಲೈಸನ್ಸ್ ಪಡೆಯಲು ಯಾವುದೇ ವಾಮಮಾರ್ಗ ಅನುಸರಿಸಲಾಗಿಲ್ಲ'' ಎಂದು ಸಿಇಇ ಆಚಾರ್ಯ ಬಾಲಕೃಷ್ಣ ಹೇಳಿದರು.
ಪತಂಜಲಿ ಕೊರೊನಿಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು
''ಕೊರೊನಿಲ್ ಬಗ್ಗೆ ಪುಕ್ಕಟೆ ಪ್ರಚಾರ ನೀಡಿಲ್ಲ, ಔಷಧ ಬಳಕೆ ಹಾಗೂ ಪರಿಣಾಮದ ಬಗ್ಗೆ ಜನರಿಗೆ ತಿಳಿಸಲಾಗಿದೆ ಅಷ್ಟೆ'' ಎಂದು ಬಾಲಕೃಷ್ಣ ಹೇಳಿದ್ದಾರೆ.
ಕೊರೊನಿಲ್ ಕಿಟ್ ಉತ್ಪಾದನೆ ಹಾಗೂ ಬಳಕೆ ಎಲ್ಲವೂ ಆಯುಷ್ ಇಲಾಖೆಯಡಿಯಲ್ಲಿ ಬರಲಿದ್ದು, ಕೊವಿಡ್ 19 ಚಿಕಿತ್ಸೆಗೆ ಬಳಸುವ ಬಗ್ಗೆ ಇನ್ನೂ ಅನುಮತಿ ನೀಡಿಲ್ಲ ಎಂದು ಕೇಂದ್ರ ಆಯುಷ್ ಇಲಾಖೆ ಸ್ಪಷ್ಟನೆ ನೀಡಿದೆ. ಜೊತೆಗೆ ಕೊರೊನಿಲ್ ಕಿಟ್ ಬಗ್ಗೆ ಜಾಹೀರಾತು ನೀಡಿ, ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಕೊರೊನಿಲ್ ಹಾಗೂ ಸ್ವಸರಿ ಮೆಡಿಸಿನ್ ಬಗ್ಗೆ ಪ್ರಚಾರ ಮಾಡುತ್ತಿರುವುದು ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ರಾಜಸ್ಥಾನ ಆರೋಗ್ಯ ಇಲಾಖೆಯು ಜೈಪುರದ ನಿಮ್ಸ್ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ. ಇದೇ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿಗಳಿಗೆ ಪತಂಜಲಿಯ ಆಯುರ್ವೇದ ಡ್ರಗ್ ಕೊರೊನಿಲ್ ನೀಡಿ, ಕ್ಲಿನಿಕಲ್ ಟ್ರಯಲ್ ನಡೆಸಲಾಗಿತ್ತು.