ಕೊವ್ಯಾಕ್ಸಿನ್ ಲಸಿಕೆ: ಮೂರನೇ ಹಂತದ ಮಾನವ ಪ್ರಯೋಗ ಆರಂಭ
ನವದೆಹಲಿ, ಜುಲೈ.05: ಕೊರೊನಾವೈರಸ್ ಸೋಂಕಿನ ಲಸಿಕೆ ಸಂಶೋಧನೆಯು ಹಂತ-ಹಂತವಾಗಿ ಬೆಳೆಯುತ್ತಿದೆ. ಮೂರನೇ ಹಂತದಲ್ಲಿ ಮನುಷ್ಯನ ಮೇಲೆ ಮಾದರಿ ಲಸಿಕೆ ಪ್ರಯೋಗಿಸುವ ಕಾರ್ಯವನ್ನು ಇನ್ನೇನು ಸನ್ನಿಹಿತವಾಗಿದೆ.
ಕೊವಿಡ್-19 ಸೋಂಕಿತರಿಗಾಗಿ ಸಿದ್ಧಪಡಿಸಲಾಗುತ್ತಿರುವ ದೇಶೀಯ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗವು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಒಡಿಶಾದ ಕೆಲವು ಆಸ್ಪತ್ರೆಗಳಲ್ಲಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು!
ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ ಗೆ ಬಳಸಬಹುದು ಎಂದು ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ. ಭಾರತ್ ಬಯೋಟೆಕ್ ಕಂಪನಿಗೆ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್ ( ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್ಐಜಿ) ಸಹಕಾರ ನೀಡಿವೆ. ಭಾರತದಲ್ಲಿ ಕೊವಿಡ್-19 ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಆರು ಕಂಪನಿಗಳು ನಿರತವಾಗಿವೆ.
21 ವೈದ್ಯಕೀಯ ಸಂಸ್ಥೆಗಳಲ್ಲಿ ಮೂರನೇ ಹಂತದ ಪ್ರಯೋಗ
ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಮೂರನೇ ಹಂತದ ಪ್ರಯೋಗದಲ್ಲಿ ಬಳಸಿಕೊಳ್ಳುವುದಕ್ಕೆ ದೇಶಾದ್ಯಂತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು 21 ವಿವಿಧ ಆಸ್ಪತ್ರೆಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಅನುಮತಿ ನೀಡಿದೆ. ಒಡಿಶಾದಲ್ಲಿ ಒಂದೇ ಒಂದು ವೈದ್ಯಕೀಯ ಸಂಸ್ಥೆಗೆ ಮೂರನೇ ಹಂತದ ಲಸಿಕೆ ಪ್ರಯೋಗವನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದು ಸಮುದಾಯ ಔಷಧಿ ಇಲಾಖೆಯ ಪ್ರಾಧ್ಯಾಪಕ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ಪ್ರಿನ್ಸಪಲ್ ಇನ್ ವೆಸ್ಟಿಗೇಟರ್ ಆಗಿರುವ ಡಾ.ಇ. ವೆಂಕಟರಾವ್ ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಮೊದಲೆರೆಡು ಪ್ರಯೋಗದಲ್ಲಿ ಯಶಸ್ವಿ
ಕೊರೊನಾವೈರಸ್ ಲಸಿಕೆ ಸಿದ್ಧಪಡಿಸುವುದಕ್ಕೂ ಮೊದಲೆರೆಡು ಹಂತದಲ್ಲಿ ನಡೆಸಿದ ವೈದ್ಯಕೀಯ ಪ್ರಯೋಗಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಫಲಪ್ರದ ಎನಿಸಿದೆ. ಕೊವಿಡ್-19 ವಿರುದ್ಧ ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆ ಎನ್ನಲಾಗಿದೆ. ರೋಗ ನಿರೋಧಕ ಶಕ್ತಿಯ ಪ್ರಮಾಣ ಕೂಡಾ ವೃದ್ಧಿಯಾಗಿದ್ದು, ಮೂರನೇ ಹಂತದ ಪ್ರಯೋಗದಲ್ಲಿ ಸಾವಿರಾರು ಜನರು ಸ್ವಯಂಪ್ರೇರಿತರಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಡಾ. ಇ.ವೆಂಕಟರಾವ್ ಹೇಳಿದ್ದಾರೆ.
ವೈದ್ಯಕೀಯ ಪ್ರಯೋಗದಲ್ಲಿ ತೊಡಿಗಿಸಿಕೊಳ್ಳುವ ವಯೋಮಿತಿ
ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿ ತೊಡಗುವವರ ವಯೋಮಿತಿಯನ್ನು ಅರ್ಹತೆಯಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ವಯೋಮಿತಿಯ ಮಾನದಂಡವನ್ನು ಸಡಿಲಗೊಳಿಸಲಾಗಿದೆ. ಇತ್ತೀಚಿನ ಲಸಿಕೆ ಪ್ರಯೋಗಗಳಲ್ಲಿ ತೊಡಗಿದ ಶಕ್ತರು ಎನಿಸಿದವರಿಗೆ 3ನೇ ಹಂತದ ಪ್ರಯೋಗದಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಲಾಗಿದೆ. ಮಾದರಿ ಪ್ರಯೋಗ ನಡೆಸುವುದಕ್ಕೆ ಆರೋಗ್ಯ ಸಿಬ್ಬಂದಿಯನ್ನು ಕೂಡಾ ನೇಮಿಸಿಕೊಳ್ಳಲಾಗಿದೆ. ಸ್ವಯಂಪ್ರೇರಿತರಾಗಿ ಸಾಕಷ್ಟು ಜನರು ಲಸಿಕೆಯ 3ನೇ ಹಂತದ ಪ್ರಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಕ್ಕೆ ಮುಂದೆ ಬಂದಿದ್ದಾರೆ. ತಮ್ಮ ಮೇಲೆ ಲಸಿಕೆ ಪ್ರಯೋಗ ನಡೆಸುವುದಕ್ಕೆ ಹೆಸರಗಳನ್ನು ಕೂಡಾ ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ಡಾ. ಇ.ವೆಂಕಟರಾವ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
Recommended Video
ದೇಶದಲ್ಲಿ ಕೊವಿಡ್-19 ಹಾವಳಿ ಕೊಂಚ ಇಳಿಕೆ
ಭಾರತದಲ್ಲಿ ಒಂದೇ ದಿನ 50,129 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ ಈಗಾಗಲೇ 78,64,811ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಂದೇ ದಿನ 578 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 1,18,534ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 70,78,123 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ 6,68,154 ಸಕ್ರಿಯ ಪ್ರಕರಣಗಳಿವೆ.