ಕೊರೊನಾವೈರಸ್ ಲಸಿಕೆ ಕಡ್ಡಾಯವಲ್ಲ, ಒತ್ತಾಯವೂ ಇಲ್ಲ: ಕೇಂದ್ರ ಸರ್ಕಾರ
ನವದೆಹಲಿ, ಜನವರಿ 17: ಭಾರತದಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಕೊರೊನಾವೈರಸ್ ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ತಿಳಿಸಿದೆ. ಕೇಂದ್ರ ಸರ್ಕಾರದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದಾದ್ಯಂತ ವಿಕಲಚೇತನರ ಮನೆಗಳಿಗೆ ತೆರಳಿ ಆದ್ಯತೆಯ ಮೇರೆಗೆ ಕೊವಿಡ್-19 ಲಸಿಕೆಯನ್ನು ನೀಡುವಂತೆ ಕೋರಿ ಎನ್ಜಿಒ ಸರ್ಕಾರೇತರ ಸಂಸ್ಥೆ ಇವಾರಾ ಪ್ರತಿಷ್ಠಾನ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರವು ಈ ರೀತಿ ಪ್ರತಿಕ್ರಿಯೆ ನೀಡಿದೆ.
ಯಾವುದೇ ವ್ಯಕ್ತಿಯ ಒಪ್ಪಿಗೆ ಪಡೆಯದೆ ಬಲವಂತದಿಂದ ಕೊರೊನಾವೈರಸ್ ಲಸಿಕೆ ಹಾಕುವುದಿಲ್ಲ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಲಾಗಿದೆ. "ಕೋವಿಡ್ ತಡೆಯುವ ದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ಎಲ್ಲಾ ನಾಗರಿಕರು ಲಸಿಕೆ ಪಡೆಯಬೇಕೆಂದು ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು, ಸಲಹೆ ನೀಡಲಾಗಿದೆ. ಆದರೂ ತಮ್ಮ ಆಶಯಗಳಿಗೆ ವಿರುದ್ಧವಾಗಿ ಯಾವುದೇ ವ್ಯಕ್ತಿಗೆ ಬಲವಂತವಾಗಿ ಲಸಿಕೆ ಹಾಕುವುದಿಲ್ಲ" ಎಂದು ಕೇಂದ್ರ ಸರ್ಕಾರ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ.
ಮಾಸ್ಕ್ ಮತ್ತು ಫೇಸ್ ಕವರ್ ಬಗ್ಗೆ ಉಲ್ಲೇಖ:
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಮಾಸ್ಕ್ ಮತ್ತು ಫೇಸ್ ಕವರ್ಗಳ ನಿರಂತರ ಬಳಕೆಯ ಕುರಿತ ವಿವರ ಹಾಗೂ ಮನೆಯ ಸಮೀಪದ ಲಸಿಕೆ ಕೇಂದ್ರಗಳು (ಎನ್ಎಚ್ಸಿವಿಸಿ) ಮತ್ತು ಹರ್ ಘರ್ ದಸ್ತಕ್ ಅಭಿಯಾನದ ಮಾಹಿತಿಯನ್ನು ನೀಡಿದೆ.
ಸಾಮಾನ್ಯವಾಗಿ ಗುರುತಿನ ಚೀಟಿಯನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೂ ಕೊರೊನಾವೈರಸ್ ಲಸಿಕೆಯನ್ನು ನೀಡುವ ಉದ್ದೇಶದಿಂದ ವಿಶೇಷ ಲಸಿಕೆ ವಿತರಣೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಆ ಮೂಲಕ ಮೊಬೈಲ್ ಸಂಖ್ಯೆ ಮತ್ತು ಫೋಟೋ ಗುರುತಿನ ಚೀಟಿಯನ್ನೇ ಕಡ್ಡಾಯಗೊಳಿಸದೇ ಸಾಧ್ಯವಾದಷ್ಟು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲು ಪ್ರಯತ್ನಿಸಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟ್ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಭಾನುವಾರ ಒಂದು ವರ್ಷ ಪೂರ್ಣಗೊಂಡಿದೆ. ಈ ಮಹತ್ವಾಕಾಂಕ್ಷೆಯ ಕೊವಿಡ್-19 ಲಸಿಕಾ ಅಭಿಯಾನದಲ್ಲಿ ಭಾರತವು 156 ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು ಜನರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಒಂದು ವರ್ಷಗಳ ಹಿಂದೆ ಈ ದಿನದಂದು ಭಾರತದಲ್ಲಿ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈಗ ಭಾರತದಲ್ಲಿ 156 ಕೋಟಿಗೂ ಹೆಚ್ಚು ಲಸಿಕೆ ಡೋಸ್ಗಳನ್ನು ನೀಡಲಾಗಿದೆ.
Recommended Video
ಕಳೆದ ವರ್ಷ ಭಾರತವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಈ ಹಿಂದೆ 1.38 ಶತಕೋಟಿ ಜನಸಂಖ್ಯೆಗೆ ಲಸಿಕೆ ಹಾಕುವ ಪ್ರಯತ್ನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದೆ. ಲಸಿಕೆ ಕೊರತೆ, ಲಸಿಕೆ ಪಡೆಯಲು ಜನರಲ್ಲಿ ಹಿಂಜರಿಕೆ ಮೊದಲಾದ ಕಾರಣದಿಂದಾಗಿ ಲಸಿಕೆ ಅಭಿಯಾನವಾದ ಕೆಲ ದಿನದಲ್ಲೆ ಅಭಿಯಾನಕ್ಕೆ ಅಡೆತಡೆ ಉಂಟಾಗಿತ್ತು. ಆದರೆ ಎಲ್ಲಾ ಅಡೆತಡೆಗಳನ್ನು ಭಾರತ ಎದುರಿಸಿದೆ. ಪ್ರಸ್ತುತ 'ಮುನ್ನೆಚ್ಚರಿಕೆ' ಡೋಸ್' ಅನ್ನು ನೀಡುವ ಮೂಲಕ ಕೊರೊನಾ ವೈರಸ್ನ ಹೊಸ ರೂಪಾಂತರಗಳನ್ನು ಎದುರಿಸಲು ಭಾರತ ಮುಂದಾಗಿದೆ. ಜನವರಿ 3, 2022 ರಂದು, ಭಾರತವು 15 ರಿಂದ 17 ನಡುವಿನ ವಯೋಮಾನದವರಿಗೂ ಕೋವಿಡ್ ಲಸಿಕೆಯನ್ನು ಆರಂಭಿಸಿದೆ.
(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)