ಸಂಕ್ರಾಂತಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ಬಂತು ಸಿಹಿ ಸುದ್ದಿ
ನವದೆಹಲಿ, ಜನವರಿ 09: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ಬಗ್ಗೆ ನಿರೀಕ್ಷೆಯಲ್ಲಿದ್ದ ಜನರಿಗೆ ಕೇಂದ್ರ ಸಿಹಿ ಸುದ್ದಿ ನೀಡಿದೆ. ಇದೇ ಜನವರಿ 16ರಿಂದ ದೇಶಾದ್ಯಂತ ಕೊರೊನಾ ಸೋಂಕಿನ ವಿರುದ್ಧದ ಲಸಿಕಾ ಕಾರ್ಯಕ್ರಮವು ಆರಂಭಗೊಳ್ಳಲಿರುವುದಾಗಿ ತಿಳಿದುಬಂದಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಕೊರೊನಾ ವೈರಸ್ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಲು ಉನ್ನತ ಮಟ್ಟದ ಸಭೆ ಕರೆದಿದ್ದು, ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
"ಮನುಕುಲದ ರಕ್ಷಣೆಗೆ ಮೇಡ್ ಇನ್ ಇಂಡಿಯಾ ಲಸಿಕೆಗಳೊಂದಿಗೆ ನಾವು ಸಿದ್ಧ"
ಶುಕ್ರವಾರ ದೇಶಾದ್ಯಂತ ಕೊರೊನಾ ಲಸಿಕೆಯ ಎರಡನೇ ಸುತ್ತಿನ ಡ್ರೈ ರನ್ ನಡೆಸಲಾಗಿತ್ತು. ಆನಂತರ ಶೀಘ್ರವೇ ದೇಶದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಿಳಿಸಿದ್ದರು. ಇದೀಗ ಜನವರಿ 16ರಿಂದ ಕೊರೊನಾ ವೈರಸ್ ಲಸಿಕೆಗಳನ್ನು ದೇಶಾದ್ಯಂತ ನೀಡಲಾಗುವುದು ಎಂದು ತಿಳಿದುಬಂದಿದೆ. ಮುಂದೆ ಓದಿ...
ಮೂರು ಕೋಟಿ ಜನರಿಗೆ ಆದ್ಯತೆಯಲ್ಲಿ ಲಸಿಕೆ
ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸಿದ ಸುಮಾರು ಮೂರು ಕೋಟಿ ಜನರಿಗೆ ಆದ್ಯತೆಯಲ್ಲಿ ಮೊದಲು ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯಲ್ಲಿರುವ ಎರಡು ಕೋಟಿ ಕಾರ್ಯಕರ್ತರಿಗೆ, ಅಂದರೆ ವೈದ್ಯರು, ಸಮುದಾಯ ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಲಸಿಕೆಯನ್ನು ಆದ್ಯತೆಯಲ್ಲಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಹರ್ಷ ವರ್ಧನ್ ತಿಳಿಸಿದ್ದಾರೆ.50 ವರ್ಷ ಮೇಲ್ಪಟ್ಟವರಿಗೆ ಎರಡನೇ ಆದ್ಯತೆ
ಐವತ್ತು ವರ್ಷ ಮೇಲ್ಪಟ್ಟವರಿಗೆ ನಂತರದ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು. 50 ವರ್ಷಕ್ಕೂ ಕಡಿಮೆ ವಯಸ್ಸಿನವರಾಗಿದ್ದು, ಇನ್ನಿತರ ಆರೋಗ್ಯ ಸಮಸ್ಯೆಗಳಿದ್ದವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ
ಲಸಿಕೆ ಕಾರ್ಯಕ್ರಮದ ಮೊದಲ ಹಂತದಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆಯನ್ನು ನೀಡುವ ಯೋಜನೆಯಿದೆ. ಇದಕ್ಕಾಗಿ ಕೋವಿನ್ ಆಪ್ ಬಳಸಿ ಸೂಕ್ತ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಎರಡು ಲಸಿಕೆಗಳಿಗೆ ಅನುಮೋದನೆ
ಭಾರತದಲ್ಲಿ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಹಾಗೂ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾದ/ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರೆತಿದೆ.