ಚಾರ್ ಧಾಮ್ ಯಾತ್ರೆ: ಕೋವಿಡ್-19 ಪರೀಕ್ಷೆ ಇಲ್ಲ, ಲಸಿಕೆ ಪ್ರಮಾಣಪತ್ರವೂ ಕಡ್ಡಾಯವಲ್ಲ
ನವದೆಹಲಿ, ಏಪ್ರಿಲ್ 30: ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆ ಮೇ 3ರಿಂದ ಆರಂಭವಾಗಲಿದ್ದು, ಸರ್ಕಾರದ ಅಧಿಕೃತ ಪೋರ್ಟಲ್ ನಲ್ಲಿ ಭಕ್ತಾಧಿಗಳು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆಯ ಆತಂಕ ಒಂದು ಕಡೆಯಾದರೆ, ಇದರ ಮಧ್ಯೆ ಭಕ್ತಾದಿಗಳು ಯಾವುದೇ ಭಯವಿಲ್ಲದೇ ಚಾರ್ ಧಾಮ್ ಯಾತ್ರೆಗೆ ಹೋಗಬಹುದು. ಇಲ್ಲಿ ಯಾವುದೇ ಕೋವಿಡ್-19 ಪರೀಕ್ಷೆ ಹಾಗೂ ಲಸಿಕೆ ಪ್ರಮಾಣಪತ್ರವು ಕಡ್ಡಾಯವಿರುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಯಾತ್ರಾರ್ಥಿಗಳ ಗಮನಕ್ಕೆ: ಚಾರ್ಧಾಮ್ ಯಾತ್ರೆಗೆ ಹೊಸ ಮಾರ್ಗಸೂಚಿ
ಉತ್ತರಾಖಂಡದ ಹೊರತಾಗಿ ಬೇರೆ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಕೋವಿಡ್-19 ಪರೀಕ್ಷೆ ಹಾಗೂ ಲಸಿಕೆ ಪ್ರಮಾಣಪತ್ರ ಪರಿಶೀಲನೆ ಕುರಿತು ಗೊಂದಲಗಳ ನಿವಾರಣೆಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ಎಸ್ ಸಧು ವಾಸ್ತವ ಸ್ಥಿತಿಯ ಕುರಿತು ಮಾಹಿತಿ ನೀಡಿದರು.
ಸುಗಮ ರೀತಿಯಲ್ಲಿ ಚಾರ್ ಧಾಮ್ ಯಾತ್ರೆ:
ಉತ್ತರಾಖಂಡದಲ್ಲಿ ಮುಂಬರುವ ಮೇ 3ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಲಿದೆ. ಈ ಹಂತದಲ್ಲಿ ಭಕ್ತಾದಿಗಳಿಗೆ ಯಾವುದೇ ಗೊಂದಲಗಳಿಲ್ಲದೇ, ತೊಂದರೆಗಳಿಲ್ಲದೇ ಸರಳ ಹಾಗೂ ಸುಗಮ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸರ್ಕಾರ ಮುಖ್ಯ ಕಾರ್ಯದರ್ಶಿ ಎಸ್ಎಸ್ ಸಧು ಸೂಚನೆ ನೀಡಿದರು. ಮುಂದಿನ ಆದೇಶದವರೆಗೂ ಯಾವುದೇ ರೀತಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸದಂತೆ ಸೂಚಿಸಲಾಯಿತು.
ಕೋವಿಡ್-19 ಪರೀಕ್ಷೆ, ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ:
ಚಾರ್ ಧಾಮ್ ಯಾತ್ರೆಗೆ ಆಗಮಿಸುವ ಅನ್ಯರಾಜ್ಯದ ಭಕ್ತಾದಿಗಳು ಗಡಿಯಲ್ಲಿ ಕೋವಿಡ್-19 ಪರೀಕ್ಷೆಗೆೆ ಒಳಗಾಗುವ ಅಗತ್ಯ ಇರುವುದಿಲ್ಲ. ಅಲ್ಲದೇ ಮೊದಲಿನಂತೆ ಕೊರೊನಾವೈರಸ್ ಲಸಿಕೆ ಪಡೆದುಕೊಂಡಿರುವ ಬಗ್ಗೆ ಯಾವುದೇ ರೀತಿ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಲ್ಲ ಎಂದು ಹೇಳಲಾಗಿದೆ.
ಸರ್ಕಾರದ ಪೋರ್ಟಲ್ ನಲ್ಲಿ ಹೆಸರು ನೋಂದಣಿ ಕಡ್ಡಾಯ:
ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ತೆರಳು ಪ್ರವಾಸಿಗರು ಹಾಗೂ ಭಕ್ತಾದಿಗಳು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪೋರ್ಟಲ್ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಚಾರ್ ಧಾಮ್ ಯಾತ್ರೆಗೆ ತೆರೆಳುವ ಭಕ್ತಾದಿಗಳು ಹಾಗೂ ವಾಸ್ತವ ಸ್ಥಿತಿಯ ಕುರಿತು ನಿಗಾ ವಹಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.