ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!
ಬೆಂಗಳೂರು, ಮೇ 17: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಒಂದು ದಿಕ್ಕಿನಲ್ಲಿ ಏರುಮುಖವಾಗಿ ಸಾಗುತ್ತಿದೆ. ಇನ್ನೊಂದು ಕಡೆ ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್-5 ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದ ಎರಡು ಜಿಲ್ಲೆಗಳು ಗುರುತಿಸಿಕೊಂಡಿವೆ.
ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಹೆಚ್ಚಾಗಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದಾಗ ಸಾಂಕ್ರಾಮಿಕ ಪಿಡುಗು ಮಹಾನಗರಗಳಿಂದ ಜಿಲ್ಲಾಕೇಂದ್ರಗಳಿಗೆ ಹೇಗೆ ಹರಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ತಪಾಸಣೆ ನಡೆಸಿದ 100 ಜನರ ಪೈಕಿ 47 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗುತ್ತಿದೆ.
ಕೊರೊನಾ ಇದೆ ಎಚ್ಚರಿಕೆ: ಮಹಾರಾಷ್ಟ್ರಕ್ಕಿಂತ ಕರ್ನಾಟಕವೇ ಡೇಂಜರ್!
ಪುದುಚೇರಿಯ ಮಾಹೆಯಲ್ಲಿ ಪಾಸಿಟಿವಿಟಿ ರೇಟ್ ಶೇ.60.30ರಷ್ಟಿದ್ದು, ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಭಾರತಪುರ್ ಶೇ.52ರಷ್ಟು ಪಾಸಿಟಿವಿಟಿ ದರವಿದೆ. ರಾಜಸ್ಥಾನದ ರಾಜಸಂಬಂದ್ ಶೇ.50, ಬಳ್ಳಾರಿ ಶೇ46.90 ಮತ್ತು ಉತ್ತರ ಕನ್ನಡ ಶೇ.46.40ರಷ್ಟು ಪಾಸಿಟಿವಿಟಿ ದರವನ್ನು ಹೊಂದಿದೆ.
ರಾಜ್ಯದ 5 ಜಿಲ್ಲೆಗಳಲ್ಲಿ ಶೇ.40ರಷ್ಟು ಪಾಸಿಟಿವಿಟಿ ದರ
ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 40,000ಕ್ಕಿಂತ ಹೆಚ್ಚಾಗಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಶೇ.40ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ದಾಖಲಾಗಿದೆ. ಈ ಪೈಕಿ ಬಳ್ಳಾರಿ ಶೇ46.90 ಮತ್ತು ಉತ್ತರ ಕನ್ನಡ ಶೇ.46.40ರಷ್ಟು ಪಾಸಿಟಿವಿಟಿ ದರ ವರದಿಯಾಗಿದೆ. ಮೈಸೂರು ಶೇ.44.40, ಶಿವಮೊಗ್ಗ ಶೇ.42.50 ಹಾಗೂ ಹಾಸನ ಶೇ.41ರಷ್ಟು ಪಾಸಿಟಿವಿಟಿ ದರವನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಶೇ.40ರಷ್ಟು ಪಾಸಿಟಿವಿಟಿ ದರ ಇರುವ ಇತರೆ ಜಿಲ್ಲೆಗಳು
ಕರ್ನಾಟಕದ ಹೊರತಾಗಿ ದೇಶದ ಇತರೆ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.40ಕ್ಕಿಂತ ಹೆಚ್ಚಾಗಿದೆ. ಬಿಕನೇರ್ ಶೇ.46, ಪುದುಚೇರಿ ಶೇ.45.30, ಕಟ್ನಿ ಶೇ.45.30, ರೆವಾರಿ ಶೇ.45, ಪಾಣಿಪತ್ ಶೇ.42.40, ಉತ್ತರ ಪರಗಣ ಶೇ.43.90, ಕೋಲ್ಕತ್ತಾ ಶೇ.42.30, ಉತ್ತರ ಗೋವಾ ಶೇ.41 ಹಾಗೂ ತಿರುವನಂತಪುರಂ ಶೇ.40.90ರಷ್ಟು ಪಾಸಿಟಿವಿಟಿ ದರವನ್ನು ಹೊಂದಿದೆ.
ದೇಶದಲ್ಲಿ ಶೇ.18.5ರಷ್ಟು ಪಾಸಿಟಿವಿಟಿ ದರ
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಪಾಸಿಟಿವಿಟಿ ದರ ಶೇ.18.50ರಷ್ಟಿದೆ. 490 ಜಿಲ್ಲೆಗಳಲ್ಲಿ ಶೇ.40ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ದಾಖಲಾಗಿದೆ. ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 31531 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ ಕೊವಿಡ್-19 ಸೋಂಕಿನಿಂದ 403 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 36475 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 22,03,462 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 15,81,457 ಸೋಂಕಿತರು ಗುಣಮುಖರಾಗಿದ್ದು, 21837ಕ್ಕೆ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 6,00,147 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Recommended Video
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,81,386 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,106 ಮಂದಿ ಕೊವಿಡ್-19 ಸೋಂಕಿತರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದು, 3,78,741 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 2,49,65,463 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,11,74,076 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಈವರೆಗೂ 2,74,390 ಜನರು ಬಲಿಯಾಗಿದ್ದಾರೆ. ಇದರ ಹೊರತಾಗಿ 35,16,997 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.