ಕೊರೊನಾ: ಹಿಂದೆ ಮಾಡಿದ ಎಡವಟ್ಟನ್ನೇ ಮತ್ತೆ ಮಾಡುತ್ತಿರುವ ಮೋದಿ ಸರಕಾರ
ಕೆಲವೇ ದಿನಗಳ ಹಿಂದೆ, ಅಂದರೆ, ನವೆಂಬರ್ ಹದಿನೆಂಟರಂದು ಕೊರೊನಾ ವೈರಸ್ ತನ್ನ ಮೊದಲ ಬರ್ತಡೇಯನ್ನು ಆಚರಿಸಿಕೊಂಡಿತು. ಮೊದಲನೇ ವರ್ಷದಲ್ಲೇ ಅದರ ಡೆತ್ ಡೇ ಆಗುತ್ತದೆ ಎನ್ನುವ ನಂಬಿಕೆ ಹುಸಿಯಾಗಿದೆ. ಕೊರೊನಾ ವೈರಸಿನ ಎರಡನೇ/ಮೂರನೇ ಅಲೆ ಮತ್ತೆ ವ್ಯಾಪಕವಾಗುತ್ತಿದೆ.
ಈ ಒಂದು ವರ್ಷದಲ್ಲಿ ಮನುಕುಲ ಎದುರಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಲಕ್ಷಲಕ್ಷ ಜನ ಸಾವನ್ನಪ್ಪಿದರೆ, ಎಷ್ಟೋ ಜನ ಬೀದಿಗೆ ಬಂದರು, ಮನೆಮಠ ಉದ್ಯೋಗ ಕಳೆದುಕೊಂಡರು. ಇನ್ನು, ಭಾರತದಲ್ಲಿ ಕೆಲವು ರಾಜ್ಯಗಳನ್ನು ಹೊರತು ಪಡಿಸಿದರೆ, ಪರಿಸ್ಥಿತಿ ತಕ್ಕಮಟ್ಟಿಗೆ ಸದ್ಯ ನಿಯಂತ್ರಣದಲ್ಲಿದೆ ಎಂದು ಹೇಳಬಹುದು.
ಭಾರತದಲ್ಲಿ ಈವರೆಗೆ 86 ಲಕ್ಷ ಕೊವಿಡ್-19 ಸೋಂಕಿತರು ಗುಣಮುಖ
ಈ ವೈರಸ್ ಹರಡುವ ಆರಂಭದ ದಿನದಲ್ಲಿ ಕೇಂದ್ರ ಸರಕಾರ ನುಡಿದಂತೆ ಇದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದುಡುಕಿನ ಲಾಕ್ ಡೌನ್ ಕೆಲಸಕ್ಕೆ ಬರಲಿಲ್ಲ. ಆರ್ಥಿಕ ಉತ್ತೇಜನದ ಹೆಸರಿನಲ್ಲಿ, ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಸಮಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಯಿತು.
ಸದ್ಯ ಈಗ ನಾಲ್ಕು ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಭಯಾನಕ ರೀತಿಯಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಕೇಂದ್ರದ ಮೋದಿ ಸರಕಾರ, ಕೊರೊನಾ ಭಾರತಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಮಾಡಿದ ತಪ್ಪನ್ನು ಮತ್ತೆ ಪುನರಾವರ್ತಿಸಲು ಹೊರಟಿದೆಯೇ?
1000 ರೂ.ಗೆ ಕೊವಿಡ್-19 ಲಸಿಕೆ; ಭಾರತಕ್ಕೆ ಮೊದಲ ಆದ್ಯತೆ ಎಂದ ಸಂಸ್ಥೆ!
ಚೀನಾದ ವುಹಾನ್ ನಿಂದ ಆರಂಭವಾದ ಕೊರೊನಾ ವೈರಸ್
ಚೀನಾದ ವುಹಾನ್ ನಿಂದ ಆರಂಭವಾದ ಕೊರೊನಾ ವೈರಸ್, ವಿಶ್ವದ ಇತರ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಲು ಕಾರಣವಾಗಿದ್ದದ್ದು ಪ್ರಮುಖವಾಗಿ ಅಂತರಾಷ್ಟ್ರೀಯ ಪ್ರಯಾಣ. ಮೋದಿ ಸರಕಾರ ಇದೇ ತಪ್ಪನ್ನು ಆರಂಭದಲ್ಲಿ ಮಾಡಿತ್ತು. ಈ ವೈರಸ್ ತೀವ್ರವಾಗಿ ಜಗತ್ತನ್ನು ಕಾಡಲಿದೆ ಎನ್ನುವ ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿದ್ದರೂ, ಕೇಂದ್ರ ಸರಕಾರ ಇದರ ಬಗ್ಗೆ ಗಮನ ಕೊಡಲು ಹೋಗಲಿಲ್ಲ. ಮಾರ್ಚ್ 23ರಿಂದ ಅಂತರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹೇರಲಾಯಿತು. ಅಷ್ಟೊತ್ತಿಗೆ ವೈರಸ್ ದೇಶದಲ್ಲಿ ದಾಂಗುಡಿ ಇಟ್ಟಾಗಿತ್ತು.
ರಾಜಧಾನಿ ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್
ಇಂತಹ ತಪ್ಪು ಮತ್ತೆ ಮುಂದುವರಿಯುತ್ತದಾ ಎನ್ನುವ ಭಯ/ಪ್ರಶ್ನೆ ಕಾಡಲು ಆರಂಭವಾಗಿರುವುದು ಪ್ರಮುಖವಾಗಿ ನಾಲ್ಕು ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವುದು. ರಾಜಧಾನಿ ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ವೈರಸ್ ಪ್ರಬಾವ ಹೆಚ್ಚಾಗುತ್ತಿದೆ. ಆಯಾಯ ರಾಜ್ಯಗಳು ಕೆಲವೊಂದು ನಿರ್ಬಂಧವನ್ನು ಮುಂದುವರಿಸಿದ್ದರೂ, ಇದು ಬೇರೆ ರಾಜ್ಯಗಳಿಗೆ ಹರಡಿದರೆ ಎನ್ನುವ ಭೀತಿ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.
ಅಂತರ್ ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧವನ್ನು ಇನ್ನೂ ಹೇರಲಿಲ್ಲ
ಈ ರಾಜ್ಯಗಳಿಂದ ಅಂತರ್ ರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧವನ್ನು ಕೇಂದ್ರ ಸರಕಾರ ಇನ್ನೂ ಹೇರಲಿಲ್ಲ. ರಸ್ತೆ, ರೈಲು, ವಿಮಾನ ಸಂಚಾರಗಳು ಎಂದಿನಂತೆ ಮುಂದುವರಿದಿದೆ. ಅಯಾಯ ರಾಜ್ಯಗಳು ನೈಟ್ ಕರ್ಪ್ಯೂ, ಸೆಕ್ಷನ್ 144 ಮುಂತಾದವ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಜನರೂ ಮತ್ತು ಸರಕಾರ ಇನ್ನೂ ಸೀರಿಯಸ್ಸಾಗಿಲ್ಲ.
ಹಿಂದೆ ಮಾಡಿದ ಎಡವಟ್ಟನ್ನೇ ಮತ್ತೆ ಮಾಡುತ್ತಿರುವ ಮೋದಿ ಸರಕಾರ
ಹಾಗಾಗಿ, ಆರಂಭಿಕ ದಿನದಲ್ಲಾದ ತಪ್ಪುಗಳು ಮತ್ತೆ ಸರಕಾರದಿಂದ ಆಗದಿರಲಿ. ಕೊರೊನಾ ವ್ಯಾಪಕವಾಗಿರುವ ರಾಜ್ಯಗಳಲ್ಲಿ ಎಲ್ಲಾ ರೀತಿಯ ಅಂತರ್ ರಾಜ್ಯ ಪ್ರಯಾಣವನ್ನು ಸರಕಾರ ನಿರ್ಬಂಧಿಸಲಿ. ಗಡಿಯನ್ನು ಬಂದ್ ಮಾಡಿ, ಜನಸಂಚಾರಕ್ಕೆ ಬ್ರೇಕ್ ಹಾಕಲಿ. ಇದರಿಂದ, ಈ ರಾಜ್ಯಗಳಿಂದ ಕೊರೊನಾ ವೈರಸ್ ಇತರ ರಾಜ್ಯಗಳಿಗೆ ಹರಡುವುದನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಒಂದು ಹಂತಕ್ಕೆ ತಡೆಯಬಹುದು.