ಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶ
ಇಟಾನಗರ್, ಮಾರ್ಚ್.08: ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಭಾರತೀಯರಲ್ಲಿ ದಿನೇ ದಿನೆ ಭೀತಿಯನ್ನು ಹೆಚ್ಚಿಸುತ್ತಿದೆ. ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಅರುಣಾಚಲ ಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯನ್ನು ಇರಿಸಿದೆ.
ವಿದೇಶಿಗರು ರಾಜ್ಯದ ಗಡಿಯನ್ನು ಪ್ರವೇಶಿಸದಂತೆ ಅರುಣಾಚಲ ಪ್ರದೇಶ ಸರ್ಕಾರವು ನಿರ್ಬಂಧ ವಿಧಿಸಿದೆ. ವಿದೇಶಿಗರಿಗೆ ನೀಡುತ್ತಿದ್ದ ಸುರಕ್ಷತಾ ಪ್ರದೇಶ ಪ್ರವೇಶ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವುದಾಗಿ ಸರ್ಕಾರವು ಸ್ಪಷ್ಟನೆ ನೀಡಿದೆ.
ಭೂತಾನ್ನಲ್ಲಿ ಮೊದಲ ಕೊರೊನಾ ಪ್ರಕರಣ: ವಿದೇಶಿಯರಿಗೆ ಎಂಟ್ರಿ ಇಲ್ಲ
ಮುಂದಿನ ಆದೇಶವು ಹೊರ ಬೀಳುವವರೆಗೂ ಅರುಣಾಚಲ ಪ್ರದೇಶ ಗಡಿ ಪ್ರವೇಶಿಸಲು ನೀಡುತ್ತಿದ್ದ ಅನುಮತಿ ಪ್ರಮಾಣ ಪತ್ರವನ್ನು ವಿತರಿಸದಿರಲು ಪ್ರಾಧಿಕಾರದ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ತಿಳಿಸಿದ್ದಾರೆ.
ಪ್ರೊಟೆಕ್ಟೆಡ್ ಏರಿಯಾ ಪರ್ಮಿಟ್ ವಿತರಣೆ ಸ್ಥಗಿತ:
ಸಾಮಾನ್ಯವಾಗಿ ಅರುಣಾಚಲ ಪ್ರದೇಶವನ್ನು ಯಾರೇ ಪ್ರವೇಶಿಸಬೇಕಾದರೂ ಕೂಡಾ ರಾಜ್ಯ ಸರ್ಕಾರವು ನೀಡುವ ಪ್ರೊಟೆಕ್ಟೆಡ್ ಏರಿಯಾ ಪರ್ಮಿಟ್(ಪಿಎಪಿ) ನ್ನು ಹೊಂದಿರಬೇಕು. ಸರ್ಕಾರಿ ಪ್ರಾಧಿಕಾರಿಗಳು ಪಿಎಪಿ ವಿತರಣೆ ಮಾಡದಂತೆ ಸರ್ಕಾರವು ಆದೇಶ ಹೊರಡಿಸಿದೆ. ವಿದೇಶಿಗರ ಅರುಣಾಚಲ ಪ್ರದೇಶ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ.
ಕಳೆದ ಶುಕ್ರವಾರವಷ್ಟೇ ಭೂತಾನ್ ನಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣವು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಎರಡು ವಾರಗಳ ಕಾಲ ವಿದೇಶಿಗರು ಭೂತಾನ್ ಗಡಿ ಪ್ರವೇಶಿಸದಿರಲು ನಿರ್ಬಂಧ ವಿಧಿಸಲಾಗಿತ್ತು.