ಕುಂಭಮೇಳಕ್ಕೆ ಹೋಗಲು ಕೊವಿಡ್-19 ನೆಗಟಿವ್ ವರದಿ ಬೇಕಿಲ್ಲ: ಸಿಎಂ ಆದೇಶ
ನವದೆಹಲಿ, ಮಾರ್ಚ್ 14: ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳಲ್ಲೇ ರಾಜಕೀಯವಾಗಿ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಸಿಎಂ ತೀರಥ್ ಸಿಂಗ್ ರಾವತ್ ಮಾರ್ಪಾಡು ಮಾಡಿದ್ದಾರೆ.
ಏಪ್ರಿಲ್ 01ರಿಂದ ಆರಂಭವಾಗಲಿರುವ ಕುಂಭ ಮೇಳಕ್ಕೆ ಕೊವಿಡ್-19 ನೆಗಟಿವ್ ವರದಿ ಕಡ್ಡಾಯ ಎಂದು ಈ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಆದೇಶಿಸಿದ್ದರು. ಇದೀಗ ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೊರೊನಾವೈರಸ್ ಸೋಂಕಿನ ನೆಗಟಿವ್ ವರದಿ ಕಡ್ಡಾಯವಲ್ಲ ಎಂದು ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಘೋಷಿಸಿದ್ದಾರೆ.
ಕುಂಭ ಮೇಳ ಏಪ್ರಿಲ್ 1ರಿಂದ ಆರಂಭ: 30 ದಿನ ಮಾತ್ರ ಆಚರಣೆ
"ಸಾಮಾನ್ಯ ಭಕ್ತಾದಿಗಳು ಮತ್ತು ಸಾರ್ವಜನಿಕರ ಭಾವನೆಗಳೊಂದಿಗೆ ಹೋಗಬೇಕಿದೆ" ಎಂದು ಹೇಳಿರುವ ಸಿಎಂ ತೀರಥ್ ಸಿಂಗ್ ರಾವತ್, ಹರಿದ್ವಾರಕ್ಕೆ ಆಗಮಿಸುವವರಿಗೆ ಕೊವಿಡ್-19 ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ನಿರ್ಧಾರದಿಂದ ಭಕ್ತಾದಿಗಳಿಗೆ ರಿಲೀಫ್
ಉತ್ತರಾಖಂಡ್ ರಾಜ್ಯದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾದಿಗಳು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಏಪ್ರಿಲ್ 1ರಿಂದ ಆರಂಭವಾಗುವ ಕುಂಭಮೇಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೊರೊನಾವೈರಸ್ ನೆಗಟಿವ್ ವರದಿ ಕಡ್ಡಾಯವಿಲ್ಲ ಎಂಬ ಸರ್ಕಾರದ ನಿರ್ಧಾರವು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಭಕ್ತಾದಿಗಳಿಗೆ ಬಿಗ್ ರಿಲೀಫ್ ನೀಡಿದೆ.
ತ್ರಿವೇಂದ್ರ ಸಿಂಗ್ ರಾವತ್ ಸರ್ಕಾರದಿಂದ ಶಿಷ್ಟಾಚಾರ ಜಾರಿ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಈ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಸರ್ಕಾರವು ಹಲವು ನಿಯಮಗಳನ್ನು ಜಾರಿಗೊಳಿಸಿತ್ತು. ಕೊವಿಡ್-19 ನೆಗೆಟಿವ್ ವರದಿ ಕಡ್ಡಾಯ, ಹಿರಿಯರು ಮತ್ತು ಆರೋಗ್ಯ ಸಮಸ್ಸೆಯ ಉಳ್ಳವರಿಗೆ ನಿರ್ಬಂಧ ವಿಧಿಸುವುದು ಸೇರಿದಂತೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಆದೇಶ ಹೊರಡಿಸಲಾಗಿತ್ತು.
ದೇವಸ್ಥಾನಂ ಕಾಯ್ದೆ ಪರಿಶೀಲನೆ ಬಗ್ಗೆ ಸಿಎಂ ಸ್ಪಷ್ಟನೆ
ಬದ್ರಿನಾಥ್, ಕೇದಾರನಾಥ, ಗಂಗೋತ್ರಿ, ಮತ್ತು ಯಮುನೋತ್ರಿ ದೇವಾಲಯಗಳು ಸೇರಿದಂತೆ 55 ದೇವಸ್ಥಾನಗಳನ್ನು ಸರ್ಕಾರದ ಅಧೀನಕ್ಕೆ ತರುವ ವಿವಾದಾತ್ಮಕ ದೇವಸ್ತಾನಂ ಕಾಯ್ದೆಯನ್ನು ಸರ್ಕಾರ 'ಪರಿಶೀಲಿಸಲಿದೆ'. ನಾನು ಪುರೋಹಿತರೊಂದಿಗೆ ಮಾತನಾಡುತ್ತೇನೆ. ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಸಿಎಂ ತೀರಥ್ ಸಿಂಗ್ ರಾವತ್ ತಿಳಿಸಿದ್ದಾರೆ.
ಉತ್ತರಾಖಂಡ್ ನಲ್ಲಿ ಇತ್ತೀಚಿಗಷ್ಟೇ ಮುಖ್ಯಮಂತ್ರಿ ಬದಲು
ಉತ್ತರಾಖಂಡ್ ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕಾರ್ಯವೈಖರಿ ಬಗ್ಗೆ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ರಾಜ್ಯಪಾಲ ಬೇಬಿ ರಾಣಿ ಮೌರ್ಯರಿಗೆ ರಾಜೀನಾಮೆ ಸಲ್ಲಿಸಿದ್ದು, ಅವರ ಸ್ಥಾನಕ್ಕೆ ತೀರಥ್ ಸಿಂಗ್ ರಾವತ್ ಅವರಿಗೆ ನೀಡಲಾಯಿತು. ಮಾರ್ಚ್ 10ರಂದು ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ತೀರಥ್ ಸಿಂಗ್ ರಾವತ್ ಅಧಿಕಾರ ಸ್ವೀಕರಿಸಿದರು. ಇದಾಗಿ ಮೂರು ದಿನಗಳಲ್ಲೇ ಹಿಂದಿನ ಸರ್ಕಾರವು ರಾಜಕೀಯವಾಗಿ ತೆಗೆದುಕೊಂಡ ಕೆಲವು ನಿರ್ಧಾರಗಳಲ್ಲಿ ಮಾರ್ಪಾಡು ಮಾಡಲು ಮುಂದಾಗಿದ್ದಾರೆ.