ಬಡವರ ಹಸಿವು ನೀಗಿಸುವತ್ತ ಖ್ಯಾತ ಟೆಕ್ ಕಂಪನಿಗಳ ಚಿತ್ತ
ಕೋವಿಡ್-19 ತಡೆಗಟ್ಟಲು ದೇಶದಲ್ಲಿ ಲಾಕ್ ಡೌನ್ ಘೋಷಿಸಿರುವುದರಿಂದ ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅಗತ್ಯ ಆಹಾರ, ಔಷಧಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಟೆಕ್ ದಿಗ್ಗಜ ಕಂಪನಿಗಳು ಮತ್ತು ಸ್ಟಾರ್ಟ್ ಅಪ್ ಸಂಸ್ಥಾಪಕರು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
Recommended Video
ತಂತ್ರಜ್ಞಾನದ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಂಡು ವಿಪ್ರೋ ಚೇರ್ ಮನ್ ರಿಷಾದ್ ಪ್ರೇಮ್ ಜಿ, ಹೂಡಿಕೆದಾರ ಕೆ.ಗಣೇಶ್, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಆನ್ ಲೈನ್ ಡೆಲಿವರಿ ಪ್ಲಾಟ್ ಫಾರ್ಮ್ ಸ್ವಿಗ್ಗಿ ಮತ್ತು ನಿಂಜಾಕಾರ್ಟ್ ಸೇರಿದಂತೆ ಹಲವರು ತಮ್ಮ ಸಂಸ್ಥೆಗಳ ಮುಖಾಂತರ ದಿನಗೂಲಿ ಕಾರ್ಮಿಕರು ಮತ್ತು ಸಂಕಷ್ಟಕ್ಕೆ ಸಿಲುಕಿರುವವರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರತಿ ನಿತ್ಯ 5 ಲಕ್ಷ ನಿರಾಶ್ರಿತರಿಗೆ ಉಚಿತ ಆಹಾರ ಪೂರೈಕೆ ಸ್ವಿಗ್ಗಿ ಗುರಿ
''ವಿಪ್ರೋ ಕ್ಯಾಂಪಸ್ ಕ್ಯಾಂಟೀನ್ ಗಳಲ್ಲಿ ಪ್ರತಿದಿನ 60 ಸಾವಿರ ಮಂದಿಗೆ ಆಗುವಷ್ಟು ಊಟ ತಯಾರಾಗುತ್ತಿದೆ. ಉಳಿದವರಿಗೆ 14-21 ದಿನಗಳಿಗೆ ಆಗುವಷ್ಟು ರೇಷನ್ ನೀಡುವ ಮೂಲಕ ಸುಮಾರು ಐದು ಲಕ್ಷ ಮಂದಿಗೆ ಸಹಾಯ ಮಾಡಿದ್ದೇವೆ'' ಎಂದು ಪ್ರೇಮ್ ಜಿ ಟ್ವೀಟ್ ಮಾಡಿದ್ದಾರೆ.
ಫೀಡ್ ಮೈ ಬೆಂಗಳೂರು
'ಫೀಡ್ ಮೈ ಬೆಂಗಳೂರು' ಎಂಬ ಹೆಸರಿನಡಿ ಬಿಗ್ ಬಾಸ್ಕೆಟ್ ಸಂಸ್ಥೆಯ ಕೆ.ಗಣೇಶ್, ದಿನಗೂಲಿ ಕಾರ್ಮಿಕರಿಗೆ ಆಹಾರ ತಲುಪಿಸುತ್ತಿದ್ದಾರೆ. ''ಮೊದಲು 500 ಮಂದಿಗೆ ಆಗುವಷ್ಟು ಊಟ ತಯಾರಿಸಿದ್ವಿ. ಇದೀಗ ದಿನಕ್ಕೆ 75 ಸಾವಿರ ಮಂದಿಗೆ ಆಗುವಷ್ಟು ಊಟ ರೆಡಿಯಾಗುತ್ತಿದೆ. ಅತಿ ಶೀಘ್ರದಲ್ಲಿ 1 ಲಕ್ಷ ಜನರಿಗೆ ಊಟ ತಲುಪಿಸುತ್ತೇವೆ'' ಎನ್ನುತ್ತಾರೆ ಕೆ.ಗಣೇಶ್. ಅಂದ್ಹಾಗೆ, ಪ್ರೆಸ್ಟೀಜ್ ಗ್ರೂಪ್ ಸಿ.ಇ.ಓ ವೆಂಕಟ್.ಕೆ.ನಾರಾಯಣ ಮತ್ತು ಜೆಎಲ್ಎಲ್ ಇಂಡಿಯಾ ಸಹಯೋಗದೊಂದಿಗೆ ಕೆ.ಗಣೇಶ್ 'ಫೀಡ್ ಮೈ ಬೆಂಗಳೂರು' ಪ್ರಾರಂಭಿಸಿದ್ದರು.
ಸಹಾಯ ಚಾಚಿರುವ ಇನ್ಫೋಸಿಸ್
'ಅಕ್ಷಯ ಪಾತ್ರೆ' ಜೊತೆಗೆ ಇನ್ಫೋಸಿಸ್ ಕೈ ಜೋಡಿಸಿ, ಹಸಿದವರಿಗೆ ಆಹಾರ ನೀಡುತ್ತಿದೆ. ನಾರಾಯಣ ಹೆಲ್ತ್ ಜೊತೆಗೂಡಿ 100 ಕೊಠಡಿಯ ಕ್ವಾರಂಟೈನ್ ಸೌಲಭ್ಯ ನೀಡಲು ಇನ್ಫೋಸಿಸ್ ಮುಂದಾಗಿದೆ.
1,125 ಕೋಟಿ ಮೀಸಲು
ಕೋವಿಡ್-19 ನಿಂದ ಉಂಟಾಗುವ ಸಮಸ್ಯೆಯನ್ನು ಎದುರಿಸಲು ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ವಿಪ್ರೋ ಮತ್ತು ವಿಪ್ರೋ ಎಂಟರ್ ಪ್ರೈಸಸ್ 1,125 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇನ್ನು ವೈದ್ಯಕೀಯ ಸಲಕರಣೆ, ವೆಂಟಿಲೇಟರ್, ಟೆಸ್ಟಿಂಗ್ ಕಿಟ್ಸ್ ಮತ್ತು ಆಹಾರ ಒದಗಿಸಲು ಇನ್ಫೋಸಿಸ್ ಫೌಂಡೇಶನ್ 100 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಸ್ವಿಗ್ಗಿ ಮತ್ತು ನಿಂಜಾಕಾರ್ಟ್
ಆಹಾರಕ್ಕಾಗಿ ಬಡ ಪ್ರದೇಶಗಳಿಂದ ಬರುವ ವಿನಂತಿಗಳನ್ನು ಪತ್ತೆ ಹಚ್ಚಲು ಸ್ವಿಗ್ಗಿ ಸಹಾಯವಾಣಿಯನ್ನು ಆರಂಭಿಸಿದೆ. ಆ ಮೂಲಕ ಹಸಿದವರಿಗೆ ಆಹಾರ ಪೂರೈಕೆ ಮಾಡುತ್ತಿದೆ. ಹಾಗೇ ಆಹಾರ ವೇಸ್ಟ್ ಆಗದಂತೆಯೂ ನೋಡಿಕೊಳ್ಳುತ್ತಿದೆ. ಇನ್ನು ಅನಾಥಾಶ್ರಮ, ವೃದ್ಧಾಶ್ರಮ, ಕೊಳಗೇರಿ ಪ್ರದೇಶಗಳಿಗೆ ಕಡಿಮೆ ಬೆಲೆಗೆ ಹಣ್ಣು ಮತ್ತು ತರಕಾರಿಗಳನ್ನು ನಿಂಜಾಕಾರ್ಟ್ ನೀಡುತ್ತಿದೆ.
ಹಸಿವನ್ನು ಮುಕ್ತವಾಗಿಸುವುದು ನಮ್ಮ ಗುರಿ
''ನಾವು ನಿಂತಿರುವುದೇ ದಿನಗೂಲಿ ಕಾರ್ಮಿಕರ ಮೇಲೆ. ಹೀಗಾಗಿ, ಅವರ ಸಂಕಷ್ಟಕ್ಕೆ ಜೊತೆಯಾಗಿ ನಿಲ್ಲುವುದು ನಮ್ಮ ಕರ್ತವ್ಯ. ಈಗಿನ ಪರಿಸ್ಥಿತಿಯಲ್ಲಿ ನಾವು ಇನ್ನೂ ಹೆಚ್ಚು ಮಾಡಬೇಕಿದೆ. ಹಸಿವನ್ನು ಮುಕ್ತವಾಗಿಸುವುದು ನಮ್ಮ ಗುರಿ'' ಎಂದು ಪ್ರೆಸ್ಟೀಜ್ ಗ್ರೂಪ್ ನ ಸಿಇಓ ವೆಂಕಟ್.ಕೆ.ನಾರಾಯಣ ಹೇಳಿದ್ದಾರೆ.