ವಿಮಾನಕ್ಕೆ ನೀಡದ ಅನುಮತಿ: ಚೀನಾಕ್ಕೆ ಕಠಿಣ ಕ್ರಮದ ಪ್ರತಿಕ್ರಿಯೆ ಕೊಟ್ಟ ಭಾರತ
ನವದೆಹಲಿ, ಫೆಬ್ರವರಿ 24: ಮಾರಕ ಕೊರೊನಾ ವೈರಸ್ ಸೋಂಕು ಪೀಡಿತ ಸವುಹಾನ್ ನಗರದಲ್ಲಿ ಸಿಲುಕಿರುವ ಉಳಿದ ಭಾರತೀಯರನ್ನು ಕರೆದುತರುವ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಿಯಾಗಿದೆ. ಫೆಬ್ರವರಿ 20ರಂದೇ ಭಾರತ ತನ್ನ ಸೇನಾ ವಿಮಾನ ಕಳುಹಿಸಲು ಸಿದ್ಧವಾಗಿದ್ದರೂ ಅದಕ್ಕೆ ಚೀನಾ ಇದುವರೆಗೂ ಅನುಮತಿ ನೀಡಿಲ್ಲ. ಈ ಸಂದರ್ಭದಲ್ಲಿಯೇ ಚೀನಾದ ವಿರುದ್ಧ ಭಾರತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕೋವಿಡ್-19 ವಿರುದ್ಧದ ತನ್ನ ಹೋರಾಟಕ್ಕೆ ಚೀನಾ, ಭಾರತ ಸೇರಿದಂತೆ ವಿವಿಧ ದೇಶಗಳಿಂದ ಔಷಧ ಸಲಕರಣೆಗಳ ನೆರವನ್ನು ಪಡೆದುಕೊಳ್ಳುತ್ತಿದೆ. ಭಾರತೀಯರನ್ನು ಕರೆತರುವ ವಿಮಾನವು ತನ್ನ ನೆಲೆ ಪ್ರವೇಶಿಸಲು ಚೀನಾ ಅನುಮತಿ ನೀಡಿಲ್ಲ. ಇದರ ನಡುವೆ ಭಾರತ ಕೆಲವು ವೈದ್ಯಕೀಯ ಉಪಕರಣಗಳ ಕೊರತೆಯ ಕಾರಣವೊಡ್ಡಿ ಅವುಗಳ ರಫ್ತಿನ ಮೇಲೆ ನಿಯಂತ್ರಣ ಹೇರಿದೆ.
ಕೊರೊನಾ ವೈರಸ್ ಹಾವಳಿ ವಿಚಾರದಲ್ಲೂ ಕುತಂತ್ರ ಬುದ್ಧಿ ತೋರಿಸಿದ ಚೀನಾ
ಚೀನಾದ ವುಹಾನ್ ನಗರವು ಮಾರಕ ಕೊರೊನಾ ವೈರಸ್ನ ಪ್ರಮುಖ ಕೇಂದ್ರವಾಗಿದೆ. ಚೀನಾದಿಂದ ಭಾರತವು ಎರಡು ಏರ್ ಇಂಡಿಯಾ ವಿಮಾನಗಳಲ್ಲಿ ಸುಮಾರು 640 ಮಂದಿಯನ್ನು ವಾಪಸ್ ಕರೆದುಕೊಂಡು ಬಂದಿತ್ತು. ಇನ್ನೂ ಅನೇಕರು ವುಹಾನ್ ನಗರದಲ್ಲಿಯೇ ಇದ್ದು, ಅವರನ್ನು ಕರೆದುಕೊಂಡು ಬರಲು ವಿಶೇಷ ಸೇನಾ ವಿಮಾನ ಕಳುಹಿಸಲು ಭಾರತ ಅನುಮತಿ ಕೋರಿತ್ತು. ಆದರೆ ಇದುವರೆಗೂ ಚೀನಾ ಅನುಮತಿ ನೀಡಿಲ್ಲ. ಅದರ ಬೆನ್ನಲ್ಲೇ ಭಾರತ ಈ ಕಠಿಣ ಕ್ರಮ ತೆಗೆದುಕೊಂಡಿದೆ.
ಡಬ್ಲ್ಯೂಎಚ್ಒ ಸಲಹೆಯಂತೆ ನಿರ್ಬಂಧ
ಕೊರೊನಾ ವೈರಸ್ ಹಾವಳಿಯ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ಸಲಹೆ ಮೇರೆಗೆ ಈ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಹೇಳಿಕೆ ನೀಡಿದೆ.
ನೂರಾರು ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಈ ಕಾಯಿಲೆ ಹರಡದಂತೆ ತಡೆಯಲು ಇತರೆ ದೇಶಗಳಂತೆಯೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಧಾರ
'ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿರುವ ಕೊರೊನಾ ವೈರಸ್ ಸೋಂಕಿನ ದಾಳಿಯ ಕುರಿತು ಡಬ್ಲ್ಯೂಎಚ್ಒ ಸೂಚನೆ ನೀಡಿರುವಂತೆ ಭಾರತ ಈ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಕೆಲವು ವೈದ್ಯಕೀಯ ಉಪಕರಣಗಳ ಕೊರತೆ ಭಾರತಕ್ಕೆ ಎದುರಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆಯ ಕ್ರಮವಾಗಿ ಅವುಗಳ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿದೆ' ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಗೆ ಚೀನಾ ಬಳಿಕ ನಲುಗಿದ ಮತ್ತೊಂದು ದೇಶ
ಭಾರತದ ಕ್ರಮದ ವಿರುದ್ಧ ದೂರು
ಚೀನಾದಲ್ಲಿ ತೀವ್ರವಾಗಿರುವ ವೈರಸ್ ಸೋಂಕನ್ನು ತಡೆಯಲು ಅತ್ಯಗತ್ಯವಾಗಿರುವ ಕೆಲವು ವೈದ್ಯಕೀಯ ಉತ್ಪನ್ನಗಳ ರಫ್ತು ನಿರ್ಬಂಧಿಸಿರುವ ಭಾರತದ ಕ್ರಮದ ವಿರುದ್ಧ ಚೀನಾದ ವೈದ್ಯಕೀಯ ಸಂಸ್ಥೆಗಳು, ದತ್ತಿ ಸಂಸ್ಥೆಗಳು ಮತ್ತು ಸ್ಥಳೀಯ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ಚೀನಾ ರಾಯಭಾರ ಕಚೇರಿ ವಕ್ತಾರೆ ಜಿ ರಾಂಗ್ ಹೇಳಿದ್ದಾರೆ.
ಭಾರತ ಸಹಕಾರ ನೀಡಲಿದೆ ಎಂಬ ವಿಶ್ವಾಸ
'ಈ ತುರ್ತುಪರಿಸ್ಥಿತಿಯನ್ನು ಭಾರತ ಮಹತ್ವದ ಗಂಭೀರ ಸ್ಥಿತಿ ಎಂದು ಪರಿಗಣಿಸಿ ಚೀನಾದ ಅತಿ ಅಗತ್ಯತೆಯನ್ನು ಪೂರೈಸಲು ಸಹಕಾರ ನೀಡಲಿದೆ ಮತ್ತು ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಲಿದೆ ಎಂಬ ಭರವಸೆ ಇದೆ. ಉಭಯ ದೇಶಗಳ ನಡುವೆ ಆದಷ್ಟು ಶೀಘ್ರವೇ ಸಹಜ ವೈಯಕ್ತಿಕ ವಿನಿಮಯ ಮತ್ತು ವ್ಯಾಪಾರ ವಹಿವಾಟು ನಡೆಯಲಿದೆ ಎಂಬ ವಿಶ್ವಾಸವಿದೆ' ಎಂದಿರುವ ಅವರು, ಯಾವುದೇ ಪ್ರಯಾಣ ಮತ್ತು ವ್ಯಾಪಾರ ನಿರ್ಬಂಧಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿಲ್ಲ ಎಂದು ಹೇಳಿದ್ದಾರೆ.
ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ
ಮಾನವೀಯ ನೆಲೆಯಲ್ಲಿ ನೆರವು
ಚೀನಾ ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ಪತ್ರ ಬರೆದಿದ್ದರು. ವುಹಾನ್ ನಗರಕ್ಕೆ ವಿಶೇಷ ವಿಮಾನದಲ್ಲಿ ವೈದ್ಯಕೀಯ ಪರಿಹಾರ ಸಾಮಗ್ರಿಗಳನ್ನು ರವಾನಿಸುವ ಮೂಲಕ ಮಾನವೀಯ ನೆಲೆಯಲ್ಲಿ ಸಹಾಯವನ್ನೂ ನೀಡಲು ಮುಂದಾಗಿತ್ತು. ಭಾರತೀಯರು ಮತ್ತು ನಮ್ಮ ನೆರೆಯ ದೇಶಗಳ ಪ್ರಜೆಗಳನ್ನು ಅದೇ ವಿಮಾನದಲ್ಲಿ ಕರೆತರಲು ಅವಕಾಶ ನೀಡುವಂತೆ ಚೀನಾದ ಅಧಿಕಾರಿಗಳಿಗೆ ಹೇಳಲಾಗಿತ್ತು. ಅವರು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.