ಕೂರೊನಾ: ಕುಕ್ಕೆ,ತಿರುಪತಿ, ಅಂಜನಾದ್ರಿ ದೇವಾಲಯ ಸ್ವಯಂ ನಿರ್ಬಂಧ
ಸಾಕಷ್ಟು ಮುಂಜಾಗೃತಾ ಕ್ರಮದ ಹೊರತಾಗಿಯೂ ಕೊರೊನಾ ವೈರಾಣು ವ್ಯಾಪಕವಾಗಿ ಹರಿದಾಡುತ್ತಿದೆ. ಭಾರತದಲ್ಲಿ ಭಾನುವಾರದ (ಮಾ 16) ಹೊತ್ತಿಗೆ ಸೋಂಕಿತರ ಪ್ರಮಾಣ 113ಕ್ಕೆ ಏರಿದೆ.
ಇನ್ನು ರಾಜ್ಯದಲ್ಲಿ ಏಳನೇ ಕೇಸ್ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಹದಿಮೂರು ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ರಾಜ್ಯ ಪ್ರವಾಸಕ್ಕೆ ಅನಿರ್ದಿಷ್ಠ ಕಾಲ ಮಹಾ ಸರಕಾರ ನಿರ್ಬಂಧ ವಿಧಿಸಿದೆ.
ಆಂಧ್ರಪ್ರದೇಶದಲ್ಲಿ ನಡೆಯಬೇಕಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಆರು ವಾರಗಳ ಕಾಲಕ್ಕೆ ಮುಂದಕ್ಕೆ ಹಾಕಲಾಗಿದೆ. ಇದುವರೆಗೆ, ಕೊರೊನಾ ವಿಶ್ವದಾದ್ಯಂತ 6,068 ಜನರನ್ನು ಬಲಿ ಪಡೆದುಕೊಂಡಿದೆ.
ಕೊರೊನಾ ವೈರಸ್ ನಿಂದ ಜಗತ್ತಿಗೆ ಯಾವಾಗ ಮುಕ್ತಿ? ಜ್ಯೋತಿಷಿ ಹೇಳಿದ ಭವಿಷ್ಯ
ಇನ್ನು, ಹಲವು ದೇವಾಲಯಗಳಲ್ಲಿ ಪೂಜೆ, ದರ್ಶನ ಮತ್ತು ಸೇವೆಯ ನಿಯಮಗಳನ್ನು ಬದಲಾಯಿಸಲಾಗಿದೆ. ಕುಕ್ಕೇ, ಕೊಲ್ಲೂರು, ಅಂಜನಾದ್ರಿ ಮತ್ತು ತಿರುಪತಿ ದೇವಾಲಯಗಳ ಪ್ರಕಟಣೆ ಇಂತಿದೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯ
ದಕ್ಷಿಣಭಾರತದ ಪ್ರಮುಖ ದೇವಾಲಯ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಭಕ್ತರಲ್ಲಿ ಮನವಿಯೊಂದನ್ನು ಮಾಡಿದ್ದರು. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಪ್ರವಾಸವನ್ನು ಒಂದು ವಾರ ಮುಂದೂಡುವಂತೆ ದೇವಾಲಯದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ. ಇಂದು (ಮಾ 16) ಕೊಲ್ಲೂರು ರಥೋತ್ಸವ ನಡೆಯಲಿದೆ.
ಐತಿಹಾಸಿಕ ಅಂಜನಾದ್ರಿ ಬೆಟ್ಟ
ಗಂಗಾವತಿ ತಾಲೂಕು ಆನೆಗೊಂದಿ ಸಮೀಪದಲ್ಲಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿತ್ಯ ಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ದೇವಾಲಯದ ಸಿಬ್ಬಂದಿಗಳಿಗೆ ಮಾಸ್ಕ್ ವಿತರಿಸಲಾಗಿದೆ.
ಕುಕ್ಕೆ ಸುಬ್ರಮಣ್ಯ ದೇವಾಲಯ
ನಾಗಾರಾಧನೆಯ ಪ್ರಸಿದ್ದ ಸ್ಥಳ ದಕ್ಷಿಣಕನ್ನಡ ಜಿಲ್ಲೆ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷಬಲಿ, ನಾಗಪ್ರತಿಷ್ಠೆ ಸೇವೆಗಳನ್ನು ನೆರವೇರಿಸುವ ಭಕ್ತರು ತಲಾ ಇಬ್ಬರಂತೆ ಮಾತ್ರ ಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂದು ದೇವಾಲಯದ ಆಡಳಿತಾಧಿಕಾರಿ ವಿನಂತಿಸಿಕೊಂಡಿದ್ದಾರೆ.
ತಿರುಮಲ ಬಾಲಾಜಿ
ತಿರುಮಲ ದೇವಸ್ಥಾನದ ಕೆಲವು ಪೂಜಾ ಕಾರ್ಯಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಸಹಸ್ರ ಕಲಶಾಭಿಷೇಕ (ಪ್ರತಿ ಬುಧವಾರ), ವಿಶೇಷ ಪೂಜೆ (ಪ್ರತಿ ಸೋಮವಾರ) ಹಾಗೂ ದೈನಂದಿನ ಪೂಜಾ ಕಾರ್ಯಕ್ರಮಗಳಾದ ವಸಂತೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ರದ್ದುಗೊಳಿಸಲಾಗಿದೆ.