ದೇಶದ ದೀರ್ಘಾವಧಿ ಸುಧಾರಣೆಗೆ ಕೊವಿಡ್-19 ಅಡ್ಡಿಯಾಗಲ್ಲ: ನಿರ್ಮಲಾ ಸೀತಾರಾಮನ್
ನವದೆಹಲಿ, ಫೆಬ್ರವರಿ.13: ದೇಶದಲ್ಲಿನ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಭಾರತದ ದೀರ್ಘಾವಧಿಯ ಸುಧಾರಣೆ ಮತ್ತು ಬೆಳವಣಿಗೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ರೀತಿ ಅಡ್ಡಿ ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮುಂಬರುವ ದಶಕದಲ್ಲಿ ಜಗತ್ತಿನ ಉನ್ನತ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರುವುದಕ್ಕೆ ಸರ್ಕಾರದ ಸುಧಾರಕಣೆಗಳು ಅವಕಾಶ ಕಲ್ಪಿಸುತ್ತವೆ ಎಂದು ಹೇಳಿದರು.
"ಶ್ರೀಮಂತರ ಬಜೆಟ್" ಆರೋಪ ಅಲ್ಲಗಳೆದ ನಿರ್ಮಲಾ ಸೀತಾರಾಮನ್
ದೇಶದ ದೀರ್ಘಾವಧಿಯ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ತೆೆಗೆದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಕೊರೊನಾವೈರಸ್ ಪಿಡುಗು ದೇಶದ ಬೆಳವಣಿಗೆಗೆ ಅಡ್ಡಿ ಉಂಟು ಮಾಡುವುದಿಲ್ಲ. ಈಗ ಜಾರಿಗೊಳಿಸುವ ಸುಧಾರಣೆಗಳು ಇಂದಿಗೆ, ನಾಳೆಗೆ ಅಥವಾ ಒಂದು ವರ್ಷದ ಮಟ್ಟಿಗೆ ಆಗಿರುವುದಿಲ್ಲ. ದೇಶದ ಆರ್ಥಿಕತೆಗೆ ಭದ್ರಬುನಾದಿ ಹಾಕುವ ನಿಟ್ಟಿನಲ್ಲಿ ಸುಧಾರಣೆಗಳನ್ನು ರೂಪಿಸಲಾಗುತ್ತಿದೆ. ಮುಂಬರುವ ದಶಕದಲ್ಲಿ ಭಾರತವು ವಿಶ್ವದ ಪ್ರಬಲ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೊವಿಡ್-19 ನಿಯಂತ್ರಣದಲ್ಲಿ ವಿಶ್ವಕ್ಕೆ ಮಾದರಿ ಎನಿಸಿದ ಭಾರತ
ವಿಶ್ವದಲ್ಲೇ ಕೊರೊನಾವೈರಸ್ ನಿಯಂತ್ರಿಸುವಲ್ಲಿ ಭಾರತವು ಮಾದರಿ ಎನಿಸಿದೆ. ಏಕೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವಿಗೆ ಜನರು ಸ್ಪಂದಿಸಿದ್ದರಿಂದಾಗಿ ಸಾಂಕ್ರಾಮಿಕ ಪಿಡುಗು ದೇಶಕ್ಕೆ ಅಷ್ಟಾಗಿ ಅಪಾಯವನ್ನು ಉಂಟು ಮಾಡಲಿಲ್ಲ. ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲೇ ಅತಿ ಕಡಿಮೆ ಜನರು ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿಯೇ ಅತಿಕಡಿಮೆ ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಇದು ಇಡೀ ವಿಶ್ವದಲ್ಲೇ ಭಾರತವನ್ನು ಮಾದರಿ ಎನ್ನಿಸುವಂತೆ ಮಾಡಿದೆ ಎಂದರು.
ದೇಶದಲ್ಲಿ ಕೊವಿಡ್-19 ಅಂಕಿ-ಅಂಶಗಳು
ಭಾರತದಲ್ಲಿ 24 ಗಂಟೆಗಳಲ್ಲಿ 12,143 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಂದೇ ದಿನ 103 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 1,55,550ಕ್ಕೆ ಏರಿಕೆಯಾಗಿದೆ. ಕಳೆದ ಒಂದು ದಿನದಲ್ಲಿ 11,395 ಜನರು ಕೊವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ, ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1,08,92,746ಕ್ಕೆ ಏರಿಕೆಯಾಗಿದೆ. 1,06,00,625 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 1,36,571 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಎರಡನೇ ಹಂತದ ಕೊವಿಡ್-19 ಲಸಿಕೆ ವಿತರಣೆ ಅಭಿಯಾನವನ್ನು ಸಹ ಕ್ಷಿಪ್ರಗತಿಯಲ್ಲಿ ನಡೆಸಲಾಗುತ್ತಿದೆ. ಇದುವರೆಗೂ 79,67,647 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ.
ಕೇಂದ್ರ ಬಜೆಟ್ ರಚನೆ ಹಿಂದೆ ಪ್ರಧಾನಮಂತ್ರಿ ಅನುಭವ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿನ ಅನುಭವ ಕ್ರೂಢೀಕರಿಸಿ ಈ ಬಾರಿಯ ಬಜೆಟ್ ರಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 1991ರಲ್ಲಿ ಪರವಾನಗಿ ಕೋಟಾರಾಜ್ ಬದಲಾವಣೆಯಿಂದ ಎದುರಾದ ಸವಾಲುಗಳನ್ನು ಮುಂದಿಟ್ಟುಕೊಂಡು ಬಜೆಟ್ ರೂಪಿಸಲಾಗಿದೆ ಎಂದು ಸ್ಮರಿಸಿಕೊಂಡರು.
ಪ್ರತಿಪಕ್ಷ ನಾಯಕರ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ಉತ್ತರ
ಕೇಂದ್ರ ಸರ್ಕಾರವು ಕೇವಲ ಶ್ರೀಮಂತರು ಮತ್ತು ತಮ್ಮ ಮಿತ್ರರಿಗಾಗಿ ಕೆಲಸ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಉತ್ತರ ನೀಡಿದರು. ಪ್ರತಿಪಕ್ಷ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕೇಂದ್ರ ಸರ್ಕಾರವು ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ಕಳೆದ ಫೆಬ್ರವರಿ.1ರಂದು 2021-22ನೇ ಸಾಲಿನ ಕೇಂದ್ರ ಬಜೆಟ್ ನ್ನು ಮಂಡಿಸಿದ್ದರು.