ಕೊರೊನಾವೈರಸ್ ಕಾರಣ: ಮರಣ ಪ್ರಮಾಣಪತ್ರ ನೀಡುವುದಕ್ಕೂ ಮಾರ್ಗಸೂಚಿ!
ನವದೆಹಲಿ, ಸೆಪ್ಟೆಂಬರ್ 12: ಕೊರೊನಾವೈರಸ್ ಸೋಂಕಿತರ ಸಾವಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನೀಡುವುದರ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಹೊಸ ಮಾರ್ಗಸೂಚಿಗಳನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರಿಗೆ ಮರಣ ಪ್ರಮಾಣಪತ್ರ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು. ಅದಾಗಿ 10 ದಿನಗಳ ನಂತರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ.
CoWin Update: ಕೊರೊನಾವೈರಸ್ ಲಸಿಕೆ ಪಡೆದವರಿಗೆ ಆನ್ಲೈನ್ ಪ್ರಮಾಣಪತ್ರ
ಕೊರೊನಾವೈರಸ್ ಸೋಂಕಿತ ವ್ಯಕ್ತಿ ಸಾವನ್ನಪ್ಪಿದರೆ ಯಾವ ಮಾನದಂಡಗಳ ಮೇಲೆ ಮರಣ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮತ್ತು ಐಸಿಎಂಆರ್ ನೀಡಿರುವ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಸುಪ್ರೀಂಕೋರ್ಟ್ ಎದುರು ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿರುವ ಅಂಶಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.
ಸಾವಿನ ಮೂಲ ಪತ್ತೆ ಮಾಡುವುದಕ್ಕೆ ನಿರ್ಧರಿಸಿದ ಮಾನದಂಡ
ಕೇಂದ್ರ ಸರ್ಕಾರ ಸಲ್ಲಿಸಿದ ಮಾರ್ಗಸೂಚಿಗಳ ಅನ್ವಯ, RT-PCR ಪರೀಕ್ಷೆ, ಅಣ್ವಿಕ ಪರೀಕ್ಷೆ, ಆಂಟಿಜೆನಿಕ್ ಪರೀಕ್ಷೆ, ಅಥವಾ ವೈದ್ಯಕೀಯ ಪರೀಕ್ಷೆ ನಂತರದಲ್ಲಿ ನಡೆಸಿದ ತನಿಖೆ, ರೋಗಿಗೆ ಚಿಕಿತ್ಸೆ ನೀಡಿದ ತಜ್ಞವೈದ್ಯರ ಹೇಳಿಕೆಯನ್ನು ಆಧರಿಸಿ ರೋಗಿಯು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾನೆಯೇ ಇಲ್ಲವೇ ಎಂಬುದನ್ನು ದೃಢಪಡಿಸಲಾಗುತ್ತದೆ. ಆನಂತರದಲ್ಲಿ ಕೊವಿಡ್-19 ರೋಗದಿಂದ ಮೃತಪಟ್ಟಿರುವ ಬಗ್ಗೆ ಮರಣ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಕೊವಿಡ್-19 ಸಾವಿನ ಪಟ್ಟಿಯಲ್ಲಿ ಅಪಘಾತ, ಆತ್ಮಹತ್ಯೆ ಸೇರುವುದಿಲ್ಲ
ವಿಷ ಸೇವನೆ, ಅಪಘಾತ, ಆತ್ಮಹತ್ಯೆ, ಮತ್ತು ನರಮೇಧದಂತ ಪ್ರಕರಣಗಳಿಂದ ವ್ಯಕ್ತಿಯು ಸಾವನ್ನಪ್ಪಿರುತ್ತಾನೆ. ಅಂಥ ವ್ಯಕ್ತಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕೊವಿಡ್-19 ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ. ಈ ಹಂತದಲ್ಲಿ ಆ ವ್ಯಕ್ತಿಯು ಕೊರೊನಾವೈರಸ್ ರೋಗದಿಂದಲೇ ಮೃತಪಟ್ಟಿರುತ್ತಾನೆ ಎಂದು ಮರಣಪ್ರಮಾಣ ನೀಡುವುದಕ್ಕೆ ಆಗುವುದಿಲ್ಲ. "ಕೊವಿಡ್-19 ಆಸ್ಪತ್ರೆ, ಕೇಂದ್ರಗಳಲ್ಲಿ ಅಥವಾ ಮನೆಯಲ್ಲಿ ಮರಣ ಹೊಂದಿದ ರೋಗಿಗಳು ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರ ಸೆಕ್ಷನ್ 10ರ ಅಡಿಯಲ್ಲಿ ಸಾವಿನ ಕಾರಣವಾದ ವೈದ್ಯಕೀಯ ಪ್ರಮಾಣಪತ್ರವನ್ನು 4 ಮತ್ತು 4 ಎ ಅರ್ಜಿಯಲ್ಲಿ ನೀಡಲಾಗುವುದು. ಅಂಥ ಸಾವನ್ನು ಕೊವಿಡ್-19 ಸಾವು ಎಂದು ಪರಿಗಣಿಸಲಾಗುವುದು," ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಸಾಮಾನ್ಯವಾಗಿ ಸೋಂಕು ತಗುಲಿದ 25 ದಿನಗಳಲ್ಲಿ ಸಾವು
ಕೊರೊನಾವೈರಸ್ ಸೋಂಕು ತಗುಲಿದ ವ್ಯಕ್ತಿಯು ಸಾಮಾನ್ಯವಾಗಿ 25 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಉಲ್ಲೇಖಿಸಿದೆ. ಕೊರೊನಾವೈರಸ್ ಸೋಂಕು ಪರೀಕ್ಷಿಸಿದ ಅಥವಾ ಸೋಂಕು ತಗುಲಿರುವುದು ದೃಢಪಟ್ಟ 30 ದಿನಗಳ ಅವಧಿಯೊಳಗೆ ಆಸ್ಪತ್ರೆ ಮತ್ತು ಆಸ್ಪತ್ರೆಯಿಂದ ಹೊರಗಿನ ಚಿಕಿತ್ಸಾ ಕೇಂದ್ರಗಳಲ್ಲಿ ಮೃತಪಟ್ಟರೂ ಅದನ್ನು ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಪಟ್ಟಿಗೆ ಸೇರಿಸಲಾಗುತ್ತದೆ. "ಆದಾಗ್ಯೂ, ಒಬ್ಬ ಕೋವಿಡ್ -19 ರೋಗಿಯು ಆಸ್ಪತ್ರೆಯಲ್ಲಿ ಅಥವಾ ಒಳರೋಗಿ ವಿಭಾಗದಲ್ಲಿ ದಾಖಲಾದ ಸಂದರ್ಭದಲ್ಲಿ ಮತ್ತು 30 ದಿನಗಳಿಗಿಂತಲೂ ಹೆಚ್ಚು ಅವಧಿವರೆಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಲೇ ವ್ಯಕ್ತಿಯು ಮರಣ ಹೊಂದಿದರೂ ಅದನ್ನು ಕೋವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ" ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಯಾವಾಗ ಕೊರೊನಾವೈರಸ್ ಸೋಂಕಿನ ಸಾವು ಎಂದು ಪರಿಗಣನೆಯಾಗಲ್ಲ?
ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೆಲವೊಂದು ಬಾರಿ ಸಾವಿನ ಕಾರಣವನ್ನು ಉಲ್ಲೇಖಿಸಿರುವ ವೈದ್ಯಕೀಯ ಪ್ರಮಾಣಪತ್ರವು ಇಲ್ಲದದಿದ್ದಾಗ ಅಥವಾ ಮೇಲಿನ ಸನ್ನಿವೇಶದಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಕುಟುಂಬ ಸದಸ್ಯರು ಸರ್ಕಾರದಿಂದ ಪಡೆದ ಮರಣ ಪ್ರಮಾಣಪತ್ರದ ಬಗ್ಗೆ ತಕರಾರು ಇದ್ದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂಥ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ತಂಡವನ್ನು ರಚಿಸುವಂತೆ ಹೇಳಲಾಗಿದೆ. ಮಾರ್ಗಸೂಚಿಗಳಲ್ಲಿ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನ ಉಲ್ಲೇಖಿಸಲಾಗಿದ್ದು, ಇದರಲ್ಲಿ ಕುಟುಂಬದ ಸದಸ್ಯರು ಅಗತ್ಯ ದಾಖಲೆ ನೀಡುವುದಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಾರೆ.
ಕೊವಿಡ್-19 ಸಮಿತಿ ಕಾರ್ಯವಿಧಾನದ ಬಗ್ಗೆ ಉಲ್ಲೇಖ
ಕೊರೊನಾವೈರಸ್ ಸಾವಿನಿಂದ ಮೃತಪಟ್ಟಿರುವ ಬಗ್ಗೆ ಸರ್ಕಾರ ನೀಡಿರುವ ಪ್ರಮಾಣಪತ್ರದ ಕುರಿತು ತಕರಾರು ಉಳ್ಳವರು ಈ ಸಮಿತಿಗೆ ಅರ್ಜಿ ಸಲ್ಲಿಸಬಹುದು. ಈ ಸಮಿತಿಯು ಕುಟುಂಬದ ಕುಂದುಕೊರತೆಗಳನ್ನು ಪರಿಶೀಲಿಸುತ್ತದೆ. ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರ ತಿದ್ದುಪಡಿ ಮಾಡಿದ "ಕೋವಿಡ್ -19 ಸಾವಿಗೆ ಅಧಿಕೃತ ದಾಖಲೆ" ನೀಡುವುದು ಸೇರಿದಂತೆ ಅಗತ್ಯ ಪರಿಹಾರ ಕ್ರಮಗಳನ್ನು ಪ್ರಸ್ತಾಪಿಸುತ್ತದೆ. ವಿಶೇಷವಾಗಿ ದಾಖಲೆ ಸಲ್ಲಿಸಲು ಮತ್ತು ಕುಂದುಕೊರತೆಗಳ ಪರಿಹಾರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ 30 ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಲಾಗುತ್ತದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 28,591 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 34,848 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 338 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ 4,42,655ಕ್ಕೆ ಏರಿಕೆಯಾಗಿದೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,32,36,921ಕ್ಕೆ ಏರಿಕೆಯಾಗಿದೆ. ಇದುವರೆಗೂ 3,24,09,345 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 3,84,921 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಪತ್ತೆಯಾಗಿರುವ ಒಟ್ಟು ಸೋಂಕಿತ ಪ್ರಕರಣಗಳ ಪೈಕಿ ಅತಿಹೆಚ್ಚು ಹೊಸ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗಿವೆ. ದೇಶದಲ್ಲಿನ ಒಟ್ಟು 28,591 ಕೊವಿಡ್-19 ಸೋಂಕಿತ ಪ್ರಕರಣಗಳ ಪೈಕಿ ಕೇರಳದಲ್ಲಿ 20,487 ಪ್ರಕರಣಗಳು ವರದಿಯಾಗಿವೆ.