ಸೂಪರ್ ಸುದ್ದಿ: ಭಾರತದ 146 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳೇ ಇಲ್ಲ!
ನವದೆಹಲಿ, ಜನವರಿ.28: ಕೊರೊನಾವೈರಸ್ ಸೋಂಕಿನ ಬಗ್ಗೆ ಭಾರತೀಯರಲ್ಲಿ ಮೊದಲಿದ್ದ ಆತಂಕ ಈಗಿಲ್ಲ. ಭಾರತದಲ್ಲಿ 24 ಗಂಟೆಗಳಲ್ಲಿ ಕೇವಲ 11,666 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 14301 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲಿ 123 ಮಂದಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,53,847ಕ್ಕೆ ಏರಿಕೆಯಾಗಿದೆ.
ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,07,01,193ಕ್ಕೆ ಏರಿಕೆಯಾಗಿದೆ. ಈವರೆಗೆ 1,03,73,606 ಸೋಂಕಿತರು ಗುಣಮುಖರಾಗಿದ್ದು, 1,73,740 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ!
ದೇಶದ ಹಲವು ರಾಜ್ಯಗಳಲ್ಲಿನ ಬಹಳಷ್ಟು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾವೈರಸ್ ಸೋಂಕಿನ ಒಂದೇ ಒಂದು ಪ್ರಕರಣಗಳು ಪತ್ತೆಯಾಗುತ್ತಿಲ್ಲ. ಕಳೆದ ವಾರದ ದತ್ತಾಂಶಗಳು ಖುಷಿ ಕೊಡುತ್ತಿವೆ. ರಾಜ್ಯದಲ್ಲಿನ ಪ್ರತಿ ಐದು ಜಿಲ್ಲೆಗಳ ಪೈಕಿ ಒಂದು ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿರುವ ಬಗ್ಗೆ ತಿಳಿದು ಬಂದಿದೆ.
718 ಜಿಲ್ಲೆಗಳ ಪೈಕಿ 146 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿ
ಭಾರತದಲ್ಲಿರುವ ಒಟ್ಟು 718 ಜಿಲ್ಲೆಗಳ ಪೈಕಿ ಐದರ ಒಂದರಷ್ಟು ಜಿಲ್ಲೆಗಳಲ್ಲಿ ಶೂನ್ಯ ಕೊವಿಡ್-19 ಪ್ರಕರಣ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ದೇಶದ 146 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. 18 ಜಿಲ್ಲೆಗಳಲ್ಲಿ ಕಳೆದ 2 ವಾರಗಳಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಎಂಟು ತಿಂಗಳಿನಲ್ಲಿ 30 ಕೋಟಿ ಭಾರತೀಯರಿಗೆ ಲಸಿಕೆ
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಜನವರಿ.16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊವಿಡ್-19 ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಮುಂದಿನ ಏಳು-ಎಂಟು ಅಂದರೆ ಜುಲೈ ಅಥವಾ ಆಗಸ್ಟ್ ತಿಂಗಳ ವೇಳೆಗೆ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪ್ರಸ್ತುತ ದೇಶದಲ್ಲಿ ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಭಾರತದಲ್ಲಿ 19,43,38,773 ಜನರಿಗೆ ಕೊವಿಡ್ ತಪಾಸಣೆ
ಭಾರತದಲ್ಲಿ ಕೊವಿಡ್-19 ಸೋಂಕಿತ ತಪಾಸಣೆ ವೇಗವನ್ನು ಕೂಡಾ ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲೇ 7,25,653 ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಇನ್ನು, ದೇಶದಲ್ಲಿ ಒಟ್ಟು 19,43,38,773 ಜನರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು ಮಾಹಿತಿ ನೀಡಿದೆ.
ರಾಜ್ಯದ 4 ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣಗಳಿಲ್ಲ
ಕರ್ನಾಟಕದಲ್ಲೂ ಕೊರೊನಾವೈರಸ್ ಅಟ್ಟಹಾಸದ ಪ್ರಮಾಣ ತಗ್ಗಿದೆ. ಬುಧವಾರ 428 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 937383ಕ್ಕೆ ಏರಿಕೆಯಾಗಿದೆ. ಒಟ್ಟು 937383 ಸೋಂಕಿತ ಪ್ರಕರಣಗಳ ಪೈಕಿ 918859 ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲೇ 760 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ ರಾಜ್ಯದಲ್ಲಿ 6298 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ. ಆದರೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಬಾಗಲಕೋಟೆ, ಹಾವೇರಿ, ಕೊಪ್ಪಳ ಮತ್ತು ರಾಮನಗರದಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿರುವುದು ಕೊಂಚ ನೆಮ್ಮದಿ ತಂದಿದೆ.