ಕೊರೊನಾ ವೈರಸ್ ಹಾವಳಿ ವಿಚಾರದಲ್ಲೂ ಕುತಂತ್ರ ಬುದ್ಧಿ ತೋರಿಸಿದ ಚೀನಾ
ನವದೆಹಲಿ, ಫೆಬ್ರವರಿ 22: ಚೀನಾದ ವುಹಾನ್ ನಗರದಲ್ಲಿ ಸಿಲುಕಿರುವ ಕೊರೊನಾ ವೈರಸ್ ಸೋಂಕಿತರನ್ನು ಭಾರತಕ್ಕೆ ಮರಳಿ ಕರೆತರಲು ಭಾರತೀಯ ಸೇನೆ ಸಿದ್ಧವಾಗಿದೆ. ಆದರೆ, ಭಾರತದ ವಿಮಾನಕ್ಕೆ ಅನುಮತಿ ನೀಡಲು ಚೀನಾ ವಿಳಂಬ ಮಾಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತ ಎರಡು ಬಾರಿ ಚೀನಾಕ್ಕೆ ತನ್ನ ವಿಮಾನ ಕಳುಹಿಸಿ ವುಹಾನ್ ನಗರದಲ್ಲಿದ್ದ ಅನೇಕ ಪ್ರಜೆಗಳನ್ನು ಮರಳಿ ಕರೆತಂದಿದೆ. ಆದರೆ ಅಲ್ಲಿ ಇನ್ನೂ ಅನೇಕ ಭಾರತೀಯರಿದ್ದು, ಅವರನ್ನು ವಾಪಸ್ ಕರೆತರಲು ಹಾಗೂ ಕೊರನಾ ವೈರಸ್ಗೆ ತುತ್ತಾಗಿರುವವರಿಗೆ ಆರೋಗ್ಯ ಸಲಕರಣೆಗಳನ್ನು ನೀಡುವ ಸಲುವಾಗಿ ಭಾರತೀಯ ವಾಯುಪಡೆಯ ವಿಮಾನವನ್ನು ಕಳುಹಿಸಲು ನಿರ್ಧರಿಸಲಾಗಿತ್ತು. ಅದಕ್ಕೆ ಅನುಮತಿ ನೀಡಲು ಚೀನಾ ವಿಳಂಬ ಮಾಡುತ್ತಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಮಾರಕ ಕೊರೊನಾ ವೈರಸ್ನ ಮೂಲ ಕೇಂದ್ರವಾದ ವುಹಾನ್ ನಗರಕ್ಕೆ ತನ್ನ ಸಿ-17 ಸೇನಾ ಸಾರಿಗೆ ವಿಮಾನವನ್ನು ಫೆ. 20ರಂದೇ ಕಳುಹಿಸುವುದಾಗಿ ಭಾರತ ಹೇಳಿತ್ತು. ಆದರೆ ಭಾರತದ ವಿಮಾನ ಬಂದಿಳಿಯಲು ಚೀನಾ ಅನುಮತಿ ನೀಡಬೇಕಿದ್ದು, ಅದಕ್ಕೆ ಅದಿನ್ನೂ ಪ್ರತಿಕ್ರಿಯೆ ನೀಡದ ಕಾರಣ ವಿಮಾನ ಅಲ್ಲಿಗೆ ಹೊರಡಲು ಸಾಧ್ಯವಾಗಿಲ್ಲ.
ಉದ್ದೇಶಪೂರ್ವಕ ವಿಳಂಬ
'ಜನರನ್ನು ಸ್ಥಳಾಂತರಿಸುವ ಸಲುವಾಗಿ ಕಳುಹಿಸಲು ಉದ್ದೇಶಿಸಿರುವ ವಿಮಾನಕ್ಕೆ ಅನುಮತಿ ನೀಡಲು ಚೀನಾ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದೆ' ಎಂದು ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ವಿಮಾನವು ಚೀನಾಕ್ಕೆ ಭಾರಿ ಪ್ರಮಾಣದ ವೈದ್ಯಕೀಯ ಸಲಕರಣೆ ಹಾಗೂ ಔಷಧಗಳನ್ನು ಸಾಗಿಸಬೇಕಿದ್ದು, ಅಲ್ಲಿಂದ ಇನ್ನಷ್ಟು ಭಾರತೀಯರನ್ನು ಮರಳಿ ಕರೆತರಬೇಕಿದೆ.
ವಿಳಂಬ ಮಾಡಿಲ್ಲ-ಚೀನಾ
ಆದರೆ ಚೀನಾವು ಅನುಮತಿ ನೀಡಲು ತನ್ನಿಂದ ಯಾವುದೇ ವಿಳಂಬವಾಗುತ್ತಿಲ್ಲ ಎಂದು ಪ್ರತಿಪಾದಿಸಿದೆ. ಹೀಗಿದ್ದರೂ ವಿಮಾನ ಹಾರಾಟಕ್ಕೆ ಮಾತ್ರ ಅನುಮತಿ ನೀಡಿಲ್ಲ. ಗ್ಲೌಸ್, ಸರ್ಜಿಕಲ್ ಮಾಸ್ಕ್, ಫೀಡಿಂಗ್ ಪಂಪ್ಗಳು ಸೇರಿದಂತೆ ಅನೇಕ ವಸ್ತುಗಳನ್ನು ಭಾರತ, ಚೀನಾಕ್ಕೆ ನೀಡುವ ಮೂಲಕ ಮಾರಕ ಸೋಂಕಿನ ನಿಯಂತ್ರಣಕ್ಕೆ ತನ್ನ ಮಿತಿಯಲ್ಲಿನ ಸಹಕಾರ ನೀಡಿದೆ.
640 ಭಾರತೀಯರು ವಾಪಸ್
ಎರಡು ಪ್ರತ್ಯೇಕ ವಿಮಾನಗಳಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸುಮಾರು 640 ಭಾರತೀಯರನ್ನು ಕರೆದುಕೊಂಡು ಬಂದಿತ್ತು. ಅಂದಾಜಿನ ಪ್ರಕಾರ ಇನ್ನೂ ಸುಮಾರು 100 ಭಾರತೀಯರು ವುಹಾನ್ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಸೋಂಕು ತಗುಲಿರುವ ಸಾಧ್ಯತೆಯೂ ಇದೆ.
ಕಂಗಾಲಾದ ಕುಟುಂಬದವರು
ವುಹಾನ್ನಲ್ಲಿನ ಭಾರತೀಯರು ವಿಮಾನಕ್ಕಾಗಿ ಅನೇಕ ದಿನಗಳಿಂದ ಕಾದು ಸುಸ್ತಾಗಿದ್ದಾರೆ. ಇದರಿಂದ ಅವರು ಮತ್ತಷ್ಟು ಕಂಗೆಟ್ಟಿದ್ದು, ಭಾರತದಲ್ಲಿರುವ ಅವರ ಕುಟುಂಬದವರು ಭಯಗೊಂಡಿದ್ದಾರೆ. ಈ ನಡುವೆ ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳು ರವಾನಿಸಿದ್ದ ವಿಮಾನಕ್ಕೆ ಚೀನಾ ಅನುಮತಿ ನೀಡಿದೆ. ಆದರೆ ಭಾರತಕ್ಕೆ ಮಾತ್ರ ಅನುಮತಿ ನೀಡಲ್ಲ ಎನ್ನಲಾಗಿದೆ.