ದಕ್ಷಿಣ ಭಾರತಕ್ಕೆ ದಂಗು ಬಡಿಸಿದ ಕೊರೊನಾವೈರಸ್; ಇಲ್ಲಿದೆ ರಿಪೋರ್ಟ್!
ನವದೆಹಲಿ, ಜುಲೈ.09: ನೊವೆಲ್ ಕೊರೊನಾವೈರಸ್ ಅಟ್ಟಹಾಸಕ್ಕೆ ದಕ್ಷಿಣ ಭಾರತದ ರಾಜ್ಯಗಳು ಅಕ್ಷರಶಃ ನಲುಗಿ ಹೋಗಿವೆ. ಒಟ್ಟು ಸೋಂಕಿತ ಪ್ರಮಾಣದಲ್ಲಿ ಶೇ.60ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ದಕ್ಷಿಣದ ರಾಜ್ಯಗಳಲ್ಲೇ ವರದಿಯಾಗುತ್ತಿವೆ.
ಭಾರತದಲ್ಲಿ ಈಗಾಗಲೇ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 7,71,833ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ದೇಶದಲ್ಲಿ 21,174ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಇದುವರೆಗೂ 4,77,685ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದರೆ, 2,72,974 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಕರುನಾಡ ಕಥೆ: 2ನೇ ದಿನವೂ 2,000 ಗಡಿ ದಾಟಿದ ಕೊರೊನೊವೈರಸ್ ಪ್ರಕರಣ!
ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಗುಣಮುಖ ಪ್ರಮಾಣ ಶೇ.62.09ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ. ಇದರ ನಡುವೆಯೂ ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಕಂಡೀಷನ್ ಮಿತಿ ಮೀರುತ್ತಿದೆ. ಈ ರಾಜ್ಯಗಳಲ್ಲಿ ಗುರುವಾರ ಪತ್ತೆಯಾಗಿರುವ ಒಟ್ಟು ಸೋಂಕಿತರ ಸಂಖ್ಯೆಗೆ ಸಂಬಂಧಿಸಿದ ವಿಶೇಷ ವರದಿ ಇಲ್ಲಿದೆ.
ಕೊರೊನಾವೈರಸ್ ಮಹಾಸ್ಫೋಟಕ್ಕೆ ಮಹಾರಾಷ್ಟ್ರ ತತ್ತರ
ಮಹಾರಾಷ್ಟ್ರದಲ್ಲಿ ಒಂದೇ ದಿನ 6875 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,30,599ಕ್ಕೆ ಏರಿಕೆಯಾಗಿದೆ. ಗುರುವಾರ ಮಹಾಮಾರಿಗೆ ರಾಜ್ಯದಲ್ಲಿ 219 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9,667ಕ್ಕೆ ಏರಿಕೆಯಾಗಿದೆ. ಇನ್ನು, 1,27,259 ಸೋಂಕಿತರು ಗುಣಮುಖರಾಗಿದ್ದು, 93652 ಸಕ್ರಿಯ ಪ್ರಕರಣಗಳಿವೆ.
ತಮಿಳುನಾಡಿನಲ್ಲೂ ಅಬ್ಬರಿಸಿ ಬೊಬ್ಬಿರಿದ ಕೊರೊನಾವೈರಸ್
ತಮಿಳುನಾಡಿನಲ್ಲಿ ಒಂದೇ ದಿನ 4231 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 65 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,26,581ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,765ಕ್ಕೆ ತಲುಪಿದೆ.
ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೊವಿಡ್-19 ಕಥೆ
ಕೊವಿಡ್-19 ಹಾವಳಿಗೆ ಕಕ್ಕಾಬಿಕ್ಕಿಯಾದ ಕರ್ನಾಟಕ
ಕರ್ನಾಟಕದಲ್ಲಿ ಒಂದೇ ದಿನ ರಾಜ್ಯದಲ್ಲಿ 2228 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 31105ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಯ ಅಟ್ಟಹಾಸ ಯಥಾರೀತಿ ಮುಂದುವರಿದಿದೆ. ಒಂದೇ ದಿನ 1373 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 13,882ಕ್ಕೆ ಏರಿಕೆಯಾಗಿದೆ. ಗುರುವಾರ ರಾಜ್ಯದಲ್ಲಿ 17 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 486ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ 167, ಕಲಬುರಗಿ 85, ಧಾರವಾಡ 75, ಮೈಸೂರು 52, ಬಳ್ಳಾರಿ 41, ದಾವಣಗೆರೆ 40, ಶಿವಮೊಗ್ಗ 37, ಬಾಗಲಕೋಟೆ 36, ಕೋಲಾರ 34, ಚಿಕ್ಕಬಳ್ಳಾಪುರ 32, ತುಮಕೂರು 27, ಮಂಡ್ಯ 24, ಉತ್ತರ ಕನ್ನಡ 23, ಉಡುಪಿ 22, ಹಾಸನ 21, ಹಾವೇರಿ 18, ರಾಮನಗರ 17, ಯಾದಗಿರಿ 16, ರಾಯಚೂರು 16, ಬೆಂಗಳೂರು 16, ಬೀದರ್ 15, ಚಾಮರಾಜನಗರ 12, ಬೆಳಗಾವಿ 9, ಗದಗ 6, ಚಿಕ್ಕಮಗಳೂರು 5, ಕೊಡಗು 4, ಕೊಪ್ಪಳ 2, ಚಿತ್ರದುರ್ಗ 2, ವಿಜಯಪುರ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಒಂದೇ ದಿನ ಆಂಧ್ರ ಪ್ರದೇಶದಲ್ಲಿ 1555 ಮಂದಿಗೆ ಸೋಂಕು
ಆಂಧ್ರ ಪ್ರದೇಶದಲ್ಲಿ ಕೊರೊನಾವೈರಸ್ ಸೋಂಕಿನ ಹಾವಳಿ ಮಿತಿ ಮೀರುತ್ತಿದ್ದು, ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 1555 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 23814ಕ್ಕೆ ಏರಿಕೆಯಾಗಿದ್ದು, ಒಂದೇ ದಿನ 13 ಮಂದಿ ಕೊವಿಡ್-19 ನಿಂದ ಉಸಿರು ಚೆಲ್ಲಿದ್ದಾರೆ.
ಜುಲೈ.10ರ ರಾತ್ರಿ 10 ಗಂಟೆಯಿಂದ ಜುಲೈ.13ರವರೆಗೂ ಲಾಕ್ ಡೌನ್!
ಕೇರಳದಲ್ಲೂ ಕೊರೊನಾವೈರಸ್ ಅಬ್ಬರ
ಕೇರಳದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 6534ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 339 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ರಾಜ್ಯದಲ್ಲಿ 2795 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಗೋವಾದಲ್ಲೂ ಕೊರೊನಾವೈರಸ್ ಸೋಂಕಿನ ಅಟ್ಟಹಾಸ
ಕೊರೊನಾವೈರಸ್ ಅಟ್ಟಹಾಸಕ್ಕೆ ಗೋವಾದಲ್ಲೂ ಚಿತ್ರಣ ಬದಲಾಗುತ್ತಿದ್ದು, ಕಳೆದ 24 ಗಂಟೆಗಳಲ್ಲೇ 112 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 2151ಕ್ಕೆ ಏರಿಕೆಯಾಗಿದೆ. ಒಂದೇ ದಿನ 66 ಸೋಂಕಿತರು ಗುಣಮುಖವಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1273ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 9 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಕೊರೊನಾವೈರಸ್ ನಿಂದ ತೆಲಂಗಾಣದಲ್ಲಿ ಜನರು ಹೈರಾಣ
ತೆಲಂಗಾಣದಲ್ಲೂ ಕೊರೊನಾವೈರಸ್ ಅಟ್ಟಹಾಸವು ಮಿತಿ ಮೀರಿದ್ದು, ಒಂದೇ ದಿನ 1410 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 30,946ಕ್ಕೆ ಏರಿಕೆಯಾಗಿದೆ. ಇಂದು 7 ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ. ಇನ್ನು, ರಾಜ್ಯದಲ್ಲಿ ಗುರುವಾರ 913 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ 18,192 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.