ಕೊರೊನಾ ಕೆಮ್ಮಿನ ಕಾಲರ್ ಟ್ಯೂನ್ ನಿಂದ ರೋಸಿ ಹೋಗಿದ್ದೀರಾ?
ಬೆಂಗಳೂರು, ಮಾರ್ಚ್.10: ದೇಶದಲ್ಲಿ ಯಾರದ್ದೇ ಮೊಬೈಲ್ ಕರೆ ಮಾಡಿದರೂ ಮೊದಲಿಗೆ ಕೇಳಿ ಬರುವುದೇ ಕೆಮ್ಮಿನ ಶಬ್ದ. ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಟೆಲಿಕಾಂ ಸಂಸ್ಥೆಗಳು ಮತ್ತು ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿವೆ.
ಪ್ರತಿಬಾರಿ ಕರೆ ಮಾಡಿದಾಗಲೂ ಕೆಮ್ಮಿನ ಶಬ್ದ ಕೇಳುತ್ತಿರುವುದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಟ್ರಿನ್ ಟ್ರಿನ್ ಬದಲು ಕೆಮ್ಮುವ ಸದ್ದು ಜನರಲ್ಲಿ ಬೇಸರ ತರಿಸಿದ್ದು, ಹೇಗಪ್ಪಾ ಇದರಿಂದ ತಪ್ಪಿಸಿಕೊಳ್ಳುವುದು ಎಂದು ಚಿಂತಿಸುತ್ತಿದ್ದಾರೆ.
ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!
ಪದೇ ಪದೆ ಕೆಮ್ಮುವ ಶಬ್ದದಿಂದ ಪಾರಾಗಲು 'ಒನ್ ಇಂಡಿಯಾ' ಮಾಜಿ ಸಂಸ್ಥಾಪಕರಾದ ಬಿ.ಜಿ.ಮಹೇಶ್ ಹೊಸ ಐಡಿಯಾವನ್ನು ನೀಡಿದ್ದಾರೆ. ಪ್ರತಿಬಾರಿ ಕೊರೊನಾ ವೈರಸ್ ಗೆ ಸಂಬಂಧಿಸಿದ ಸಂದೇಶ ಕೇಳಿ ಬರುತ್ತಿದ್ದರೆ # ಬಟನ್ ಪ್ರೆಸ್ ಮಾಡಿದರೆ ಸಾಕು. ನೇರವಾಗಿ ಕರೆಯು ಕನೆಕ್ಟ್ ಆಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಮೊಬೈಲ್ ಕಾಲರ್ ಟ್ಯೂನ್ ನಲ್ಲಿ ಕೇಳುವುದೇನು?
ದೇಶದಾದ್ಯಂತ ಇದೀಗ ಯಾರದ್ದೇ ಮೊಬೈಲ್ ಗೆ ಕರೆ ಮಾಡಿದರೂ ಮೊದಲಿಗೆ ವ್ಯಕ್ತಿಯೊಬ್ಬರು ಕೆಮ್ಮುವ ಶಬ್ದ ಕೇಳಿ ಬರುತ್ತದೆ. ನಂತರದಲ್ಲಿ ಕೊರೊನಾ ವೈರಸ್ ಪ್ರಾಥಮಿಕ ಲಕ್ಷಣಗಳು ಏನು, ಈ ಸೋಂಕಿನಿಂದ ಪಾರಾಗಲು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಸಂದೇಶವು ಕೇಳಿ ಬರುತ್ತಿದೆ.
ಮೊಬೈಲ್ ಮೇಲಿನ ಜನರ ಅವಲಂಬನೆ ಪರಿಗಣಿಸಿ ಕ್ರಮ
ಮೊಬೈಲ್ ಇಲ್ಲದೇ ಕ್ಷಣಕಾಲವೂ ಜನರು ಜೀವಿಸಲು ಆಗುವುದಿಲ್ಲ ಎನ್ನುವಂತಾ ವಾತಾವರಣ ನಿರ್ಮಾಣವಾಗಿದೆ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಕಾಲರ್ ಟ್ಯೂನ್ ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಯಾರದ್ದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಜಾಗೃತಿ ಸಂದೇಶವೀಗ ಕೇಳಿ ಬರುತ್ತದೆ.
ಆರೋಗ್ಯ ಇಲಾಖೆಯಿಂದ ದಿಟ್ಟ ನಡೆ
ಕೆಮ್ಮು, ಜ್ವರ, ಶೀತ ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಪ್ರಾಥಮಿಕ ಲಕ್ಷಣಗಳಾಗಿವೆ. ಇಂಥ ಸೋಂಕಿತರು ಪದೇ ಪದೆ ಕಣ್ಣು, ಮೂಗು, ಬಾಯಿ ಹಾಗೂ ಮುಖವನ್ನು ಕೈಗಳಿಂದ ಉಜ್ಜಿಕೊಳ್ಳುವಂತಿಲ್ಲ ಎಂದು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುಂದಾಗಿದೆ.
ಕೊರೊನಾ ಸೋಂಕಿತರಿಂದ ಅಂತರ ಕಾಯ್ದುಕೊಳ್ಳಲು ಮನವಿ
ಇನ್ನು, ಭಾರತದಲ್ಲಿ ಇದುವರೆಗೂ 50ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಸೋಂಕಿತರಿಂದ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂಬ ಜಾಗೃತಿ ಸಂದೇಶವು ಮೊಬೈಲ್ ಗಳಲ್ಲಿ ಕೇಳಿ ಬರುತ್ತಿದೆ.