ಭಾರತದಲ್ಲಿ ಹೊಸ ಅಲೆಯ ಭೀತಿ ಹುಟ್ಟಿಸಿದ ಕೊರೊನಾ ವೈರಸ್!
ನವದೆಹಲಿ, ಜೂನ್ 3: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೆ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮೂರು ತಿಂಗಳ ನಂತರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,041 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಕಳೆದ ಮಾರ್ಚ್ 11ರ ನಂತರದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳ ಸಂಖ್ಯೆ ಇದಾಗಿದೆ.
Breaking; ದಾವಣಗೆರೆ ವಿಮಾನ ನಿಲ್ದಾಣ, 3 ವಾರದಲ್ಲಿ ವರದಿ
ಭಾರತದ ಕೆಲವು ಭಾಗಗಳಲ್ಲಿ ಈಗ ಕೊರೊನಾ ವೈರಸ್ ನಾಲ್ಕನೇ ಅಲೆಯ ಭಯವನ್ನು ಹುಟ್ಟುಹಾಕಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ 43.17 ದಶಲಕ್ಷ ಕೋವಿಡ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈವರೆಗೂ 5,24,651 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ನೀಡಿದೆ.
ಕೊರೊನಾ ವೈರಸ್ ಪಾಸಿಟವಿಟಿ ದರ: ಭಾರತದಲ್ಲಿ ದೈನಂದಿನ ಪಾಸಿಟಿವಿಟಿ ದರ ಅಥವಾ ಒಟ್ಟಾರೆ ಪರೀಕ್ಷೆಗಳ ಶೇಕಡಾವಾರು ದೃಢಪಡಿಸಿದ ಕೋವಿಡ್ ಪ್ರಕರಣಗಳು ಪ್ರಮಾಣ ಶೇ.0.95ರಷ್ಟಿದೆ. ಈ ಹಿಂದೆ ಕೊವಿಡ್-19 ಮೂರು ಅಲೆಗಳ ಸಂದರ್ಭದಲ್ಲಿ ಆರಂಭಿಕ ಹಾಟ್ಸ್ಪಾಟ್ ಆಗಿದ್ದ ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಈ ವಾರದ ಪಾಸಿಟಿವಿಟಿ ದರವು ಶೇ.8ರಷ್ಟಾಗಿದೆ.
ಪಂಚರಾಜ್ಯಗಳಿಗೆ ಕೇಂದ್ರದಿಂದ ಪತ್ರ ರವಾನೆ:
ಮಹಾರಾಷ್ಟ್ರ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸೋಂಕನ್ನು ತಡೆಯಲು ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಈ ಸಂಬಂಧ ಜೂನ್ 3ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಪತ್ರವನ್ನು ರವಾನಿಸಿದೆ. ಆ ಮೂಲಕ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು "ಕಟ್ಟುನಿಟ್ಟಾದ ನಿಗಾ ಇರಿಸಲು ಮತ್ತು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲು" ಸಚಿವಾಲಯವು ಈ ರಾಜ್ಯಗಳಿಗೆ ಸೂಚನೆ ನೀಡಿದೆ.