ಒಬ್ಬರಲ್ಲ, ಇಬ್ಬರಲ್ಲ, 6 ಮಂದಿ ಭಾರತೀಯರಿಗೆ ಕೊರೊನಾ ವೈರಸ್
ನವದೆಹಲಿ, ಫೆಬ್ರವರಿ.17: ಜಪಾನ್ ಹಡಗಿನಲ್ಲಿ ಇರುವ ಆರು ಮಂದಿ ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ಹರಡಿರುವ ಬಗ್ಗೆ ಟೋಕಿಯೋದಲ್ಲಿ ಇರುವ ಭಾರತೀಯ ರಾಯಭಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸೋಮವಾರ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಮತ್ತಿಬ್ಬರು ಭಾರತೀಯರಲ್ಲಿ ಸೋಂಕು ಪತ್ತೆಯಾಗಿದೆ.
ಹಾಂಗ್ ಕಾಂಗ್ ನಿಂದ ಹೊರಟ ಡೈಮೆಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ 138 ಭಾರತೀಯರು ಸೇರಿದಂತೆ 3,711 ಮಂದಿ ಪ್ರಯಾಣಿಕರಿದ್ದು, ಜಪಾನ್ ನ ಯೊಕೊಹಮಾ ಬಂದರಿನಲ್ಲಿ ಹಡಗು ಸಿಲುಕಿಕೊಂಡಿತ್ತು. ಈ ಹಡಗಿನಲ್ಲಿ ಇರುವ ನಾಲ್ವರು ಭಾರತೀಯರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ಸ್ಪಷ್ಟವಾಗಿತ್ತು. ಇದೀಗ ಮತ್ತಿಬ್ಬರು ಭಾರತೀಯರು ಈ ಪಟ್ಟಿಗೆ ಸೇರ್ಪಡೆಯಾಗಿದ್ದು, ಸೋಂಕಿತ ಭಾರತೀಯ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
Coronavirus: ಹಡಗಿನಲ್ಲಿರುವ ಪ್ರಜೆಗಳ ಕರೆಸಿಕೊಳ್ಳಲು ವಿಶೇಷ ವಿಮಾನ
ಸೋಮವಾರ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಒಟ್ಟು 99 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಜಪಾನ್ ತೀರದಲ್ಲಿ ಇರುವ ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇರುವ ಒಟ್ಟು 454 ಮಂದಿಯಲ್ಲಿ ಕೊರೊನಾ ವೈರಸ್ ಹರಡಿರುವುದು ಸ್ಪಷ್ಟವಾಗಿದೆ.
ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸ್ಪಷ್ಟನೆ
ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇರುವ 6 ಮಂದಿ ಭಾರತೀಯರಿಗೆ ಕೊರೊನಾ ವೈರಸ್ ತಗಲಿರುವ ಬಗ್ಗೆ ತಿಳಿದು ಬಂದಿದೆ. ಈ ಮೊದಲು ತಪಾಸಣೆ ವೇಳೆ ಸೋಂಕು ಪತ್ತೆಯಾದ ನಾಲ್ವರು ಭಾರತೀಯರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಪಾನ್ ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಡಗಿನ ಆಡಳಿತ ಮಂಡಳಿ ಜೊತೆಗೂ ಸಂಪರ್ಕ
ಜಪಾನ್ ಸರ್ಕಾರ ಹಾಗೂ ಹಡಗು ನಿರ್ವಹಣಾ ಕಂಪನಿಯ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಭಾರತೀಯ ರಾಯಭಾರಿ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯರಿಗೆ ಚಿಕಿತ್ಸೆ ನೀಡುವುದು, ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
340 ಅಮೆರಿಕಾ ಪ್ರಜೆಗಳ ಸುರಕ್ಷಿತವಾಗಿ ವಾಪಸ್
ಜಪಾನ್ ನಲ್ಲಿ ಇರುವ ಡೈಮೆಂಡ್ ಪ್ರಿನ್ಸಸ್ ಹಡಗಿನಲ್ಲಿ ಇರುವ 340 ಮಂದಿ ಅಮೆರಿಕಾ ಪ್ರಜೆಗಳನ್ನು ಈಗಾಗಲೇ ಅಮೆರಿಕಾ ವಾಪಸ್ ಕರೆಸಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೇ ವಿಶೇಷ ವಿಮಾನದಲ್ಲಿ ತನ್ನ ಪ್ರಜೆಗಳನ್ನು ಕರೆಸಿಕೊಳ್ಳುವುದಾಗಿ ತಿಳಿಸಿತ್ತು. ಅದಾಗಿ ಮರುದಿನವೇ ಇಟಲಿ ವಿದೇಶಾಂಗ ವ್ಯವಹಾರಗಳ ಸಚಿವರು ಕೂಡಾ ವಿಶೇಷ ವಿಮಾನದ ಮೂಲಕ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವುದಾಗಿ ತಿಳಿಸಿದ್ದರು.
ಫೆಬ್ರವರಿ.19ರ ಬಳಿಕ ಭಾರತೀಯರು ವಾಪಸ್
ಹಡಗಿನಲ್ಲಿ ಕೊವಿಡ್-19 ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಬಳಿಕವಷ್ಟೇ ಜಪಾನ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಅಲ್ಲಿವರೆಗೂ ಹಡಗಿನಲ್ಲೇ ಎಲ್ಲ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಫೆಬ್ರವರಿ.19ರ ನಂತರವಷ್ಟೇ ಹಡಗಿನಲ್ಲಿ ದಿಗ್ಬಂಧನವನ್ನು ತೆರವುಗೊಳಿಸಲಾಗಿತ್ತದೆ. ಆ ನಂತರವಷ್ಟೇ ಪ್ರಯಾಣಿಕರನ್ನು ಬಿಡುಗಡೆಗೊಳಿಸಲು ತೀರ್ಮಾನಿಸಲಾಗುತ್ತಿದೆ.