ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ದೇಶದಲ್ಲಿ ಕೊರೊನಾ ಮೂರನೇ ಅಲೆ; AIIMS
ನವದೆಹಲಿ, ಜುಲೈ 23: ಭಾರತದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯು ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಕಾಣಿಸಿಕೊಳ್ಳಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಇದರೊಂದಿಗೆ, ಈ ಸಂಭಾವ್ಯ ಮೂರನೇ ಅಲೆಯ ಪ್ರಭಾವ ಎರಡನೇ ಅಲೆಗಿಂತ ಕಡಿಮೆಯಿರುತ್ತದೆ ಎಂದು ಹೇಳಿದ್ದಾರೆ. "ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ನಾಲ್ಕನೇ ರಾಷ್ಟ್ರೀಯ ಸೆರೋ ಸರ್ವೆಯಲ್ಲಿ, ದೇಶದ ಮೂರನೇ ಎರಡರಷ್ಟು ಮಂದಿ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿ ಹೊಂದಿರುವುದಾಗಿ ತಿಳಿಸಿದೆ. ಜೊತೆಗೆ ಲಸಿಕಾ ಪ್ರಕ್ರಿಯೆಯನ್ನೂ ಚುರುಕುಗೊಳಿಸಲಾಗಿದೆ. ಇವೆಲ್ಲವೂ ಮೂರನೇ ಅಲೆ ಪ್ರಭಾವವನ್ನು ತಗ್ಗಿಸಬಹುದಾಗಿದೆ" ಎಂದು ಅವರು ಹೇಳಿದ್ದಾರೆ.
ಕೊರೊನಾ ಸೆರೋಸರ್ವೇ; ಜನರ ಆರೋಗ್ಯಕ್ಕೆ ಕೇಂದ್ರ ಪ್ರಕಟಿಸಿದ 7 ಬಹುಮುಖ್ಯ ಅಂಶಗಳು
"ಕೊರೊನಾ ಪ್ರಕರಣಗಳು ತಗ್ಗಿದ ಹಿನ್ನೆಲೆಯಲ್ಲಿ ಕೊರೊನಾ ನಿರ್ಬಂಧಗಳನ್ನು ಹಲವು ರಾಜ್ಯಗಳು ಸಡಿಲಿಸಿವೆ. ಜನರು ಕೊರೊನಾ ನಿಯಮಗಳನ್ನು ಮೀರುತ್ತಿದ್ದಾರೆ. ಸೆಪ್ಟೆಂಬರ್ ಅಕ್ಟೋಬರ್ ವೇಳೆಗೆ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ" ಎಂದು ತಿಳಿಸಿದ್ದಾರೆ.
ಈ ಹಿಂದೆ ಕೊರೊನಾ ಮೂರನೇ ಅಲೆ ಆಗಸ್ಟ್ ವೇಳೆಗೆ ದೇಶದಲ್ಲಿ ಆರಂಭವಾಗಲಿದೆ ಎಂದು ಐಸಿಎಂಆರ್ ಮಾಹಿತಿ ನೀಡಿತ್ತು. ಮಕ್ಕಳು ಈ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಾರೆ ಎನ್ನಲಾಗಿತ್ತು. ಈ ಕುರಿತು ಮಾತನಾಡಿರುವ ರಣದೀಪ್ ಗುಲೇರಿಯಾ, "ಮಕ್ಕಳಿಗೆ ಗಂಭೀರ ಮಟ್ಟದಲ್ಲಿ ಸೋಂಕು ತಗುಲುವ ಸಾಧ್ಯತೆಯಿಲ್ಲ. ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳುವಂತಿಲ್ಲ" ಎಂದಿದ್ದಾರೆ.
ಮಕ್ಕಳಿಗಾಗಿ ಭಾರತ್ ಬಯೋಟೆಕ್ ಹಾಗೂ ಝೈಡಸ್ ಕ್ಯಾಡಿಲಾದ ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈಚೆಗೆ ನಾಲ್ಕನೇ ಸೆರೋ ಸರ್ವೇ ಫಲಿತಾಂಶ ಹಂಚಿಕೊಂಡಿದ್ದು, ಇದರ ಪ್ರಕಾರ, ಕೊರೊನಾ ಸೋಂಕಿನಿಂದ ಚೇತರಿಕೆಯಾದ ನಂತರ ಅಥವಾ ಕೊರೊನಾ ಲಸಿಕೆಯಿಂದ 67.6% ಭಾರತೀಯರಲ್ಲಿ ಸೋಂಕಿನ ವಿರುದ್ಧ ಹೋರಾಟಕ್ಕೆ ಪ್ರತಿಕಾಯಗಳು ಬೆಳವಣಿಗೆಯಾಗಿರುವುದಾಗಿ ತಿಳಿಸಿದೆ. ಭಾರತದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದಾಗಿ ತಿಳಿಸಿದೆ.
ಗುರುವಾರ ಭಾರತದಲ್ಲಿ 41,383 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದ ಅವಧಿಯಲ್ಲಿ 507 ಮಂದಿ ಸೋಂಕಿನಿಂದ ಸಾವನ್ನಪ್ಪಿರುವ ವರದಿಯಾಗಿದೆ. ಗುರುವಾರದ ಅಂಕಿಸಂಖ್ಯೆಯೊಂದಿಗೆ, ಇದುವರೆಗೂ ದೇಶದಲ್ಲಿ ಒಟ್ಟು 3,12,57,720 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3,04,29,339 ಮಂದಿ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,09,394 ಆಗಿದೆ. ಇದುವರೆಗೂ ಸೋಂಕಿನಿಂದ 4,18,987 ಮಂದಿ ಸಾವನ್ನಪ್ಪಿದ್ದಾರೆ.