ದೇಶಾದ್ಯಂತ ತಗ್ಗುವ ಹಾದಿಯಲ್ಲಿದೆ ಕೊರೊನಾ; ಕೇಂದ್ರ
ನವದೆಹಲಿ, ಸೆಪ್ಟೆಂಬರ್ 17: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಭಾರತದಾದ್ಯಂತ ತಗ್ಗಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದ ಕೇರಳ ರಾಜ್ಯದಲ್ಲಿಯೂ ಸೋಂಕು ಕಡಿಮೆಯಾಗಿದೆ. ಆದರೆ ಮಿಜೋರಾಂ ರಾಜ್ಯದಲ್ಲಿ ಸೋಂಕು ಕಳವಳಕಾರಿಯಾಗಿದೆ ಎಂದು ಕೇಂದ್ರ ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ.
'ಕೇರಳ ರಾಜ್ಯವನ್ನೂ ಒಳಗೊಂಡು ದೇಶಾದ್ಯಂತ ಹೊಸ ಕೊರೊನಾ ಪ್ರಕರಣಗಳಲ್ಲಿ ಇಳಿಮುಖದ ಪ್ರವೃತ್ತಿಯನ್ನು ನಾವು ನೋಡುತ್ತಿದ್ದೇವೆ. ಆದರೂ ಮಿಜೋರಾಂ ಕಳವಳಕಾರಿ ರಾಜ್ಯವಾಗಿದೆ. ಮುಂದಿನ ಎರಡು ಮೂರು ತಿಂಗಳಿನಲ್ಲಿ ನಾವು ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಮುಂಬರುವ ಈ ತ್ರೈಮಾಸಿಕದಲ್ಲಿ ಎಲ್ಲರೂ ಜಾಗರೂಕರಾಗಿರಬೇಕೆಂದು ನಾವು ವಿನಂತಿ ಮಾಡಿಕೊಳ್ಳುತ್ತೇವೆ. ಕೊರೊನಾ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಉಳಿದಿರುವುದು ಸಮಾಧಾನಕರ ಸಂಗತಿಯಾಗಿದೆ' ಎಂದು ಹೇಳಿದ್ದಾರೆ.
ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚು; ICMR ಅಧ್ಯಯನ
ಹಬ್ಬದ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ಪ್ರಯಾಣಿಸಬೇಕು. ಲಸಿಕೆಯನ್ನು ಪಡೆದುಕೊಳ್ಳಬೇಕು. ಕೊರೊನಾ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿ (ICMR) ಮಹಾನಿರ್ದೇಶಕ ಬಲರಾಂ ಭಾರ್ಗವ್ ಸೋಂಕು ದೂರವಿಡಲು ಸಲಹೆ ನೀಡಿದ್ದಾರೆ.
'ಇದು ಹಬ್ಬಗಳ ಸಮಯ. ಜನಸಂಖ್ಯಾ ಸಾಂದ್ರತೆಯ ಹಠಾತ್ ಹೆಚ್ಚಳ ವೈರಸ್ ಹರಡುವಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಜವಾಬ್ದಾರಿಯುತವಾಗಿ ವರ್ತಿಸುವುದು ಇಂದಿನ ಅಗತ್ಯವಾಗಿದೆ' ಎಂದು ಹೇಳಿದ್ದಾರೆ.
ಭಾರತದ ಪ್ರಸ್ತುತ ಕೊರೊನಾ ಪರಿಸ್ಥಿತಿಯ ಒಟ್ಟಾರೆ ಚಿತ್ರಣವನ್ನು ನೀಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, 'ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿವೆ. ಸತತ ಹನ್ನೊಂದನೇ ವಾರದಲ್ಲಿ ವಾರದ ಪಾಸಿಟಿವಿಟಿ ಪ್ರಮಾಣ 3% ಕ್ಕಿಂತ ಕಡಿಮೆ ಇದೆ. ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಒಂದೇ ಒಂದು ರಾಜ್ಯವಿದೆ. ಹೀಗಾಗಿ ಸೋಂಕು ನಿಯಂತ್ರಣ ಸುಲಭವಾಗಲಿದೆ' ಎಂದು ಮಾಹಿತಿ ನೀಡಿದರು.
ಕೊರೊನಾದಿಂದ ಚೇತರಿಸಿಕೊಂಡವರನ್ನು ಕಾಡುತ್ತಿದೆ ಪಿತ್ತಕೋಶ ಗ್ಯಾಂಗ್ರಿನ್
'ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ಚಂಡೀಗಢ, ಗೋವಾ ಹಾಗೂ ಹಿಮಾಚಲ ಪ್ರದೇಶಗಳು 18 ವರ್ಷ ಮೇಲ್ಪಟ್ಟ ಜನಸಂಖ್ಯೆಗೆ ಮೊದಲ ಡೋಸ್ ಲಸಿಕೆಯನ್ನು 100% ನೀಡಿ ಪೂರೈಸಿವೆ. ಒಟ್ಟಾರೆ 18ಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ 20%ಗೆ ಸಂಪೂರ್ಣವಾಗಿ ಕೊರೊನಾ ಲಸಿಕೆ ಹಾಕಲಾಗಿದೆ' ಎಂದು ತಿಳಿಸಿದರು.
ದೇಶದ ಕೆಲವು ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಮಾತನಾಡಿದ ಅವರು, 'ಮಳೆಗಾಲದ ನಂತರ ನೀರು ನಿಲ್ಲುತ್ತದೆ. ಇದು ಏಕಾಏಕಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಡೆಂಗ್ಯೂ ಹರಡುತ್ತದೆ. ಸೊಳ್ಳೆಗಳ ಮೂಲವನ್ನು ನಿರ್ಮೂಲನೆ ಮಾಡುವ ಕೆಲಸವನ್ನು ಪ್ರತಿ ವರ್ಷ ಎಲ್ಲಾ ರಾಜ್ಯಗಳಲ್ಲಿ ಮಾಡಲಾಗುತ್ತದೆ. ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್ ಹಾಗೂ ಅಸ್ಸಾಂನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ವರದಿಯಾಗಿದೆ. ಅಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ' ಎಂದು ತಿಳಿಸಿದರು.
ಶುಕ್ರವಾರ ಭಾರತದಲ್ಲಿ 34,403 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,33,47,325ಕ್ಕೆ ಏರಿಕೆಯಾಗಿದೆ. 37,950 ಜನರು ಗುಣಮುಖಗೊಂಡಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳು 3,39,056. ಇದುವರೆಗೂ ಗುಣಮುಖರಾದವರ ಸಂಖ್ಯೆ 3,25,98,424 ಆಗಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿ ನಡುವೆ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೆಚ್ಚಿಸುವುದರ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಿದೆ. ದೇಶದಲ್ಲಿ 3,631 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಘೋಷಿಸಿದ್ದಾರೆ. ಈ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳಲ್ಲಿ 4800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಅದರ ಪೈಕಿ ಶೇ.47ರಷ್ಟು ಅಂದರೆ 1595 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಒಂದು ಕೋಟಿ ಮಂದಿಗೆ ಲಸಿಕೆ ನೀಡಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.