ಹೈದರಾಬಾದ್ ಎನ್ಕೌಂಟರ್, ಪೊಲೀಸ್ ಕ್ರಮ ಖಂಡಿಸಿದ ಕಾರ್ಯಕರ್ತೆ
ಹೈದರಾಬಾದ್, ಡಿಸೆಂಬರ್ 06: ಹೈದರಾಬಾದಿನ ಪಶುವೈದ್ಯೆ ಅತ್ಯಾಚಾರ, ಹತ್ಯೆ ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿರುವುದನ್ನು ಮಹಿಳಾ ಕಾರ್ಯಕರ್ತೆ ಖಂಡಿಸಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ತೆಲಂಗಾಣ ಸರ್ಕಾರದ ಆಡಳಿತ ವೈಫಲ್ಯವಾಗಿದೆ ಎಂದಿದ್ದಾರೆ.
"ತೆಲಂಗಾಣದಲ್ಲಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಸಂಪೂರ್ಣ ಅಸಮರ್ಥತೆಯಿಂದ ಕೂಡಿದೆ. ಅಪರಾಧ ಕೃತ್ಯಗಳನ್ನು ತಡೆಯಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಈ ಪ್ರಕರಣ ನೋಡಿದರೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ'' ಎಂದು ಪ್ರಗತಿಪರ ಮಹಿಳಾ ಸಮಿತಿ ಕಾರ್ಯದರ್ಶಿ ಕವಿತಾ ಕೃಷ್ಣನ್ ಹೇಳಿದ್ದಾರೆ.
ಎನ್ಕೌಂಟರ್ ಹೇಗೆ ಮತ್ತು ಯಾವಾಗ ನಡೆಯುತ್ತದೆ? ನಿಯಮಗಳು ಏನು?
ಆರೋಪಿಗಳನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಇನ್ನು ಆದೇಶಿಸಿಲ್ಲ. ಆರೋಪ ಸಾಬೀತಾಗುವ ಮುನ್ನವೇ ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರ ಹೇಳದೆ ತೆಲಂಗಾಣ ಸರ್ಕಾರವು, ನ್ಯಾಯ ಸಿಕ್ಕಿದೆ ಎಂಬಂತೆ ವರ್ತಿಸುತ್ತಿದೆ ಎಂದು ಹೇಳಿದರು.
ತೆಲಂಗಾಣ ಪೊಲೀಸರು ನಡೆದುಕೊಂಡ ರೀತಿ ಸರಿಯಿಲ್ಲ. ಮಹಿಳೆಯರು ಘನತೆಯಿಂದ ಬದುಕುವಂತೆ ಪೊಲೀಸ್ ವ್ಯವಸ್ಥೆಯನ್ನು ಸರ್ಕಾರ ಸಜ್ಜುಗೊಳಿಸಬೇಕಿದೆ. ಅದು ಬಿಟ್ಟು ಪೊಲೀಸರು ನ್ಯಾಯವನ್ನು ಕೈಗೆತ್ತಿಕೊಂಡಿದ್ದಾರೆ. ಈ ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದ ಪೊಲೀಸರ ವಿಚಾರಣೆ ನಡೆಸಬೇಕಿದೆ.
ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮನ್ (ಎನ್ಎಫ್ಐಡಬ್ಲ್ಯು) ಪ್ರಧಾನ ಕಾರ್ಯದರ್ಶಿ ಅನ್ನಿರಾಜಾ, ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು, ಈ ರೀತಿ ಎನ್ ಕೌಂಟರ್ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?
ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಬೃಂದಾ ಗ್ರೋವರ್ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಬಂಧಿತರಾದವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವುದು ಸರಿಯಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಸಮಂಜಸವಲ್ಲ. ಮಹಿಳೆಯರು ಸಮಾನ ಮತ್ತು ಮುಕ್ತ ನಾಗರಿಕರಾಗಿ ಬದುಕುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ಮರೆತಿದೆ ಎಂದಿದ್ದಾರೆ.
"ಬಿಜೆಪಿ ಈ ರೀತಿ ವಿಷಯಾಂತರ ರಾಜಕೀಯದಲ್ಲಿ ನಿಪುಣವಾಗಿದ್ದು, ಹಿಂಸೆಯ ಮೂಲಕ ನ್ಯಾಯ, ನಕಲಿ ಎನ್ಕೌಂಟರ್, ಕಲ್ಲು ಹೊಡೆದು ಸಾಯಿಸುವುದು ಎಲ್ಲಕ್ಕೂ ಒಂದೇ ರೀತಿ ನ್ಯಾಯ ಸರಿಯೇ?"ಎಂದು ಮಾನವ ಹಕ್ಕು ಕಾರ್ಯಕರ್ತರಾದ ಶಬನಮ್ ಹಶ್ಮಿ ಪ್ರತಿಕ್ರಿಯಿಸಿದ್ದಾರೆ.