ಮದುವೆಗಾಗಿ ಇಸ್ಲಾಂಗೆ ಮತಾಂತರ ಅಸಿಂಧು : ಹೈಕೋರ್ಟ್
ಅಲಹಾಬಾದ್: ಮದುವೆಯ ಉದ್ದೇಶದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಸಿಂಧು ಅಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ತೀರ್ಪು ನೀಡಿದೆ.
ಉತ್ತರ ಪ್ರದೇಶ ರಾಜ್ಯದ ವಿವಿಧ ಪ್ರದೇಶಗಳ ಐವರು ಹಿಂದೂ ಯುವತಿಯರು ತಾವು ಮುಸ್ಲಿಂ ಯುವಕರನ್ನು ಮದುವೆಯಾಗಿದ್ದು, ತಮ್ಮ ಮದುವೆಗೆ ರಕ್ಷಣೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ. ಸೂರ್ಯಪ್ರಕಾಶ್ ಕೇಸರ್ವಾಣಿ ಅವರಿದ್ದ ಪೀಠ ವಜಾಗೊಳಿಸಿದೆ.
ಮತಾಂತರವಾಗುವವರು ಇಸ್ಲಾಂ ಧರ್ಮದ ಮೇಲೆ ನೈಜ ನಂಬಿಕೆ ಹೊಂದಿರಬೇಕು. ಅದು ಬಿಟ್ಟು ಮದುವೆಯ ಉದ್ದೇಶದಿಂದ ಮುಸ್ಲಿಮೇತರರು ಆ ಧರ್ಮಕ್ಕೆ ಮತಾಂತರವಾಗುವುದು ಸಿಂಧುವಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಈ ಯುವತಿಯರು ಅರ್ಜಿ ಸಲ್ಲಿಸುವಾಗ ತಮಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ. ಮುಸ್ಲಿಂ ಯುವಕರನ್ನು ಮದುವೆಯಾಗುವ ಉದ್ದೇಶದಿಂದ ಮತಾಂತರವಾಗಿದ್ದಾಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಮೇಲೆ ಯುವತಿಯೋರ್ವಳಿಗೆ ನಂಬಿಕೆ ಹುಟ್ಟುವವರೆಗೂ ಮದುವೆಯಾಗಬಾರದು ಎಂದು ಕುರಾನ್ನಲ್ಲೂ ಹೇಳಲಾಗಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ದೇಶದ ಅತ್ಯಂತ ಜನಪ್ರಿಯ ತಾರಾ ಜೋಡಿ ಧರ್ಮೇಂದ್ರ ಹಾಗೂ ಹೇಮಾಮಾಲಿನಿ ಕೂಡ ಮದುವೆಯ ಉದ್ದೇಶದಿಂದಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ, ಹಿಂದೂ ಧರ್ಮ ರೀತ್ಯಾ ಹಸೆಮಣೆ ಏರಿದ್ದರು.