ವಿವಾದದ ಕಿಡಿ ಹಚ್ಚಿಸಿದ ಕೇರಳ ಪ್ರವಾಸೋದ್ಯಮದ 'ಗೋಮಾಂಸ' ಟ್ವೀಟ್
ನವದೆಹಲಿ, ಜನವರಿ 17: ಗೋಮಾಂಸದ ಖಾದ್ಯದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕೇರಳ ಪ್ರವಾಸೋದ್ಯಮ ಇಲಾಖೆ ಮಾಡಿರುವ ಟ್ವೀಟ್ ತೀವ್ರ ಚರ್ಚೆಗೆ ಒಳಗಾಗಿದೆ. ಈ ಟ್ವೀಟ್ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕೇರಳ ಪ್ರವಾಸೋದ್ಯಮ ಇಲಾಖೆಯ ಟ್ವೀಟ್, ಗೋಮಾಂಸ ಖಾದ್ಯವನ್ನು ಪ್ರಚಾರ ಮಾಡುತ್ತದೆಯೇ ಅಥವಾ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತದೆಯೇ? ಎಂದು ವಿಶ್ವ ಹಿಂದೂ ಪರಿಷತ್ ಕಿಡಿಕಾರಿದೆ.
ಸಚಿವ ಸಿ. ಟಿ. ರವಿ ಟ್ವೀಟ್ನಲ್ಲಿ ಬೀಫ್; ಬಿಸಿ-ಬಿಸಿ ಚರ್ಚೆ!
'ಸುಕೋಮಲವಾದ ಗೋಮಾಂಸದ ಭಾಗ, ಸುವಾಸನೆ ಭರಿತ ಮಸಾಲೆ, ತೆಂಗಿನಕಾಯಿ ತುಂಡುಗಳು ಮತ್ತು ಕರಿಬೇವಿನ ಜತೆ ಸಣ್ಣನೆ ಹುರಿದಿರುವುದು. ಇದು ಅತ್ಯಂತ ಶಾಸ್ತ್ರೀಯವಾದ ಖಾದ್ಯ. ಮಸಾಲೆಯ ಭೂಮಿ ಕೇರಳದ ತಿನಿಸು' ಎಂದು ಕೇರಳ ಪ್ರವಾಸೋದ್ಯಮ ಇಲಾಖೆಯ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಬೀಫ್ ಪ್ರಿಯರು ಈ ಟ್ವೀಟ್ಅನ್ನು ಸ್ವಾಗತಿಸಿದ್ದಾರೆ. ಆದರೆ ಹೆಚ್ಚಿನವರು ಇದಕ್ಕೆ ತೀವ್ರ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಧಾರ್ಮಿಕ ನಂಬಿಕೆಗೆ ನೋವು ಉಂಟುಮಾಡುವ ಅಧಿಕಾರ ನಿಮಗಿಲ್ಲ. ಹೀಗೆಯೇ ಹಂದಿ ಮಾಂಸವನ್ನು ಪ್ರಚಾರ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಶಂಕರಾಚಾರ್ಯರ ಧರ್ಮ ಭೂಮಿಯೇ?
'ಈ ಟ್ವೀಟ್, ಪ್ರವಾಸೋದ್ಯಮವನ್ನು ಪ್ರಚಾರ ಮಾಡುವ ಉದ್ದೇಶ ಹೊಂದಿದೆಯೇ ಅಥವಾ ಬೀಫ್ಅನ್ನು ಪ್ರಚಾರ ಮಾಡುತ್ತಿದೆಯೇ? ಇದು ಕೋಟ್ಯಂತರ ಗೋವು ಆರಾಧಕರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಿಲ್ಲವೇ? ಈ ಟ್ವೀಟ್ ಶಂಕರಾಚಾರ್ಯರ ಧರ್ಮ ಭೂಮಿಯಿಂದ ಸೃಷ್ಟಿಯಾಗಿದೆಯೇ?' ಎಂದು ವಿಎಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಪ್ರಶ್ನಿಸಿದ್ದಾರೆ.
ತಮ್ಮ ಪ್ರತಿಕ್ರಿಯೆಯೊಂದಿಗೆ ವಿನೋದ್ ಬನ್ಸಾಲ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರನ್ನು ಟ್ಯಾಗ್ ಮಾಡಿದ್ದು, 'ಕೇರಳ ಪ್ರವಾಸೋದ್ಯಮಕ್ಕೆ ಸಲಹೆ ನೀಡಿ' ಎಂದು ಹೇಳಿದ್ದಾರೆ.
ಭಾವನೆಗಳಿಗೆ ನೋವು
ಮತ್ತೊಂದು ಟ್ವೀಟ್ ಮಾಡಿರುವ ಬನ್ಸಾಲ್, 'ಗೋವನ್ನು ಆರಾಧಿಸುವ ಕೇರಳದ ಲಕ್ಷಾಂತರ ಪ್ರವಾಸಿಗರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡಿ ನೀವು ಏನನ್ನೂ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕೇರಳ ಪ್ರವಾಸೋದ್ಯಮ ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
ವಿದೇಶಕ್ಕೆ ಹೋಗಿ ಗೋಮಾಂಸ ತಿನ್ನಲು ಕಲಿಯುತ್ತಾರೆ: ಕೇಂದ್ರ ಸಚಿವರ ವಿವಾದ
|
'ಕರ್ನಾಟಕಕ್ಕೆ ಸ್ವಾಗತ'
ಕೇರಳ ಪ್ರವಾಸೋದ್ಯಮ ಇಲಾಖೆ ಮಾಡಿದ್ದ ಟ್ವೀಟ್ಅನ್ನು ಹಂಚಿಕೊಂಡಿದ್ದ ಸಿ.ಟಿ. ರವಿ, ಕರ್ನಾಟಕಕ್ಕೆ ಸ್ವಾಗತ ಎಂದು ಬರೆದಿದ್ದರು. ಇದು ಬೇರೆಯದೇ ಅರ್ಥ ಪಡೆದುಕೊಂಡಿತ್ತು. ಕೇರಳ ಟ್ವೀಟ್ಅನ್ನು ತಪ್ಪಾಗಿ ಹಂಚಿಕೊಂಡು, ಗೋಮಾಂಸ ಭಕ್ಷಣೆಗೆ ಸಿ.ಟಿ ರವಿ ಪ್ರಚಾರ ನೀಡುತ್ತಿದ್ದಾರೆ ಎಂದು ಟೀಕಿಸಲಾಗಿತ್ತು.
|
ಅದು ವ್ಯಂಗ್ಯ ಮಾಡಿದ ಟ್ವೀಟ್
ಇದಕ್ಕೆ ಸ್ಪಷ್ಟೀಕರಣ ನೀಡಿರುವ ಸಿ.ಟಿ ರವಿ, 'ನಾನು ಗೋಮಾಂಸವನ್ನು ಬೆಂಬಲಿಸುತ್ತೇನೆ ಎಂದು ನೀವು ಆಲೋಚಿಸಲು ಕೂಡ ಹೇಗೆ ಸಾಧ್ಯ? ಅದು ನನ್ನ ನಂಬಿಕೆಗೆ ವಿರುದ್ಧವಾಗಿದೆ. ಕೇರಳ ಪ್ರವಾಸೋದ್ಯಮದ ಟ್ವೀಟ್ನಿಂದ ನಿಮ್ಮಲ್ಲಿ ಅನೇಕರು ಬೇಸರಪಟ್ಟುಕೊಂಡಿದ್ದೀರಿ ಎನ್ನುವುದು ನನಗೆ ಗೊತ್ತು. ನನ್ನ ಟ್ವೀಟ್ ವ್ಯಂಗ್ಯಾತ್ಮಕವಾಗಿದ್ದು, ಅದರ ವಿರುದ್ಧದ ಮೌನ ಪ್ರತಿಭಟನೆಯಾಗಿತ್ತು. ಹೀಗಾಗಿ ನಿಮ್ಮನ್ನು ಕರ್ನಾಟಕಕ್ಕೆ ಬರುವಂತೆ ಸ್ವಾಗತಿಸಿದ್ದೆ' ಎಂದು ಹೇಳಿದ್ದಾರೆ.