ರಾಷ್ಟ್ರಗೀತೆಯನ್ನು ಸುತ್ತಿಕೊಂಡಿರುವ ವಿವಾದ ಒಂದೆ ಎರಡೆ?
1911ರಲ್ಲಿ ಬ್ರಿಟಿಷ್ ದೊರೆ ಕಿಂಗ್ ಜಾರ್ಜ್ V ಭಾರತಕ್ಕೆ ಬಂದಾಗ, ಕಾಕತಾಳೀಯವೆಂಬಂತೆ ರವೀಂದ್ರರು 'ಜನ ಗಣ ಮನ' ರಚಿಸಿದ್ದರು. ಇದರ ಮೊದಲ ಭಾಗವನ್ನು ರಾಷ್ಟ್ರಗೀತೆಯನ್ನಾಗಿ 1942ರಲ್ಲಿ ಘೋಷಿಸಲಾಯಿತು. ರಾಗಸಂಯೋಜನೆ ಮಾಡಿದ್ದು ರಾಮ್ ಸಿಂಗ್.
ಬೆಂಗಳೂರು, ಜು. 08 : ಭಾರತ ದೇಶದ ಹೆಮ್ಮೆಯ ಪ್ರತೀಕವಾಗಿರುವ, ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ರಚಿಸಿರುವ ರಾಷ್ಟ್ರಗೀತೆಯಲ್ಲಿನ 'ಅಧಿನಾಯಕ' ಎಂಬ ಪದದ ಸುತ್ತ ವಿವಾದದ ಹುತ್ತ ಸುತ್ತಿಕೊಂಡಿದೆ. ರಾಜಸ್ತಾನದ ರಾಜ್ಯಪಾಲ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಈ ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.
ರಾಷ್ಟ್ರಗೀತೆಯ ಸುತ್ತ ವಿವಾದ ಸುತ್ತಿಕೊಂಡಿರುವುದು ಇದೇ ಮೊದಲೇನಲ್ಲ. ಸ್ವಾತಂತ್ರ್ಯಪೂರ್ವವೇ 1911ರಲ್ಲಿ ಟ್ಯಾಗೋರರು ರಾಷ್ಟ್ರಗೀತೆಯನ್ನು ರಚಿಸಿದ ಸಂದರ್ಭದಿಂದಲೂ ಇದು ವಿವಾದಕ್ಕೆ ಕಾರಣವಾಗಿದೆ. 'ಜನ ಗಣ ಮನ'ದಲ್ಲಿ ಐದು ಭಾಗಗಳಿದ್ದು, ಮೊದಲನೇ ಭಾಗವನ್ನು ಮಾತ್ರ ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಲಾಗಿದೆ. [ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ]
1911ರ ಡಿಸೆಂಬರ್ 26ರಂದು 'ಜನ ಗಣ ಮನ' ಗೀತೆಯನ್ನು ಮೊದಲ ಬಾರಿ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡುವ ಮುನ್ನ, ಪಶ್ಚಿಮ ಬಂಗಾಳದವರೇ ಆದ ಬಂಕಿಂಚಂದ್ರ ಚಟರ್ಜಿ ಅವರು ರಚಿಸಿರುವ 'ವಂದೇ ಮಾತರಂ' ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಘೋಷಿಸಬೇಕೆಂಬ ಕೂಗು ಕೂಡ ಎದ್ದಿತ್ತು.
1911ರಲ್ಲಿ ಬ್ರಿಟಿಷ್ ದೊರೆ ಕಿಂಗ್ ಜಾರ್ಜ್ V ಭಾರತಕ್ಕೆ ಬಂದಾಗ, ಕಾಕತಾಳೀಯವೆಂಬಂತೆ ರವೀಂದ್ರರು 'ಜನ ಗಣ ಮನ' ರಚಿಸಿದ್ದರು. ಇದರ ಮೊದಲ ಭಾಗವನ್ನು ರಾಷ್ಟ್ರಗೀತೆಯನ್ನಾಗಿ 1942ರಲ್ಲಿ ಘೋಷಿಸಲಾಯಿತು. ಈಗ ನಾವು ರಾಗವಾಗಿ ಹಾಡುವ ಗೀತೆಯ ರಾಗಸಂಯೋಜನೆ ಮಾಡಿದ್ದು ರಾಮ್ ಸಿಂಗ್ ಎಂಬುವವರು. [ರಾಷ್ಟ್ರಗೀತೆಯಲ್ಲಿರುವ 'ಅಧಿನಾಯಕ' ಪದ ಬದಲಿಸಿ]
'ಅಧಿನಾಯಕ' ಎಂದರೆ ಕಿಂಗ್ ಜಾರ್ಜ್ V?
ಕಿಂಗ್ ಜಾರ್ಜ್ ರನ್ನು ಸಂಪ್ರೀತಗೊಳಿಸಲೆಂದು ಈ ಗೀತೆಯನ್ನು ರಚಿಸಲಾಗಿದೆ ಎಂದು ಭಾರತದ ಆಂಗ್ಲ ಪತ್ರಿಕೆಗಳಾಗಿದ್ದ ಸ್ಟೇಟ್ಸ್ಮನ್, ಇಂಗ್ಲಿಷ್ಮನ್ ಮತ್ತು ಇಂಡಿಯನ್ ಆ ಕಾಲದಲ್ಲೇ ಟೀಕಿಸಿದ್ದವು. ಗೀತೆಯಲ್ಲಿ ಬರುವ 'ಭಾರತ ಭಾಗ್ಯ ವಿಧಾತ' ಮತ್ತು 'ಅಧಿನಾಯಕ' ಕಿಂಗ್ ಜಾರ್ಜ್ನನ್ನು ಸಂಬೋಧಿಸುತ್ತದೆ ಎಂಬ ಟೀಕೆ ಕೇಳಿಬಂದಿತ್ತು.
ವಿವಾದಕ್ಕೆ ರವೀಂದ್ರರ ಪ್ರತ್ಯುತ್ತರ
ಈ ವಿವಾದದ ಕುರಿತು 1937ರಲ್ಲಿ ರವೀಂದ್ರರೇ ಬಂಗಾಳಿಯಲ್ಲಿ ಪತ್ರ ಬರೆದಿದ್ದರು. ಬ್ರಿಟಿಷ್ ರಾಜನನ್ನು ಸನ್ಮಾನಿಸುವ ಸಂದರ್ಭದಲ್ಲಿ ರಾಜನ ಮೇಲೆ ಹಾಡೊಂದನ್ನು ಬರೆಯಬೇಕೆಂದು ಮನವಿ ಬಂದಿತ್ತು. ಇದರಿಂದ ನನ್ನ ಹೃದಯದಲ್ಲಿ ಬಿರುಗಾಳಿ ಎದ್ದಿತ್ತು. ಇದನ್ನು ಮೀರಿ ನನ್ನ ಮನೋಸ್ಥೈರ್ಯ ಗಟ್ಟಿ ಮಾಡಿದ ಭಾರತ ಭಾಗ್ಯ ವಿಧಾತ(God of Destiny)ನನ್ನು ಹೊಗಳಿ ಈ ಗೀತೆ ಬರೆದಿದ್ದು. ಆ ಭಾರತ ಭಾಗ್ಯ ವಿಧಾತ ಜಾರ್ಜ್ 5, ಜಾರ್ಜ್ 6 ಅಥವಾ ಯಾರೇ ಆಗಲಿ ಸಾಧ್ಯವೇ ಇಲ್ಲ ಎಂದು ಚಾಟಿಯೇಟು ನೀಡಿದ್ದರು.
ಕಿಂಗ್ ಅಂದ್ರೆ ಜಾರ್ಜ್, ಮಾ ಅಂದ್ರೆ ಅವರಮ್ಮನಲ್ಲ
ಗೀತೆಯ ಇಂಗ್ಲಿಷ್ ಅನುವಾದದಲ್ಲಿ ಬರುವ King ಅಂದರೆ ದೇವರು, ಕಿಂಗ್ ಜಾರ್ಜ್ ಅಲ್ಲ, ಹಾಗು Ma ಅಥವಾ Mata ಎಂದರೆ ಭಾರತಮಾತೆ, ಜಾರ್ಜ್ನ ತಾಯಿ ಅಲ್ಲ ಎಂಬ ವಿವರಣೆಗಳೂ ಇವೆ. ಅಲ್ಲದೆ, ನೊಬೆಲ್ ಪ್ರಶಸ್ತಿ ಪಡೆದ 'ಗೀತಾಂಜಲಿ' ಪುಸ್ತಕದಲ್ಲಿಯೂ ದೇವರನ್ನು ಕಿಂಗ್ ಅಂತಲೇ ಟ್ಯಾಗೋರರು ಸಂಬೋಧಿಸಿದ್ದಾರೆ.
ಇತರ ಪ್ರಾಂತ್ಯಗಳ ಹೆಸರುಗಳೇಕಿಲ್ಲ?
ರಾಷ್ಟ್ರಗೀತೆಯಲ್ಲಿ ಹೆಸರಿಸಲಾಗಿರುವ ಪಂಜಾಬ್, ಸಿಂಧ್, ಗುಜರಾತ್, ಮರಾಠಾ, ದ್ರಾವಿಡ (ದಕ್ಷಿಣ ಭಾರತ), ಓರಿಸ್ಸಾ, ಬಂಗಾಲ ರಾಜ್ಯಗಳು ಅಂದು ಬ್ರಿಟಿಷರ ಆಳ್ವಿಕೆಯಲ್ಲಿದ್ದವು. ಆದರೆ, ಇತರ ರಾಜ್ಯಗಳನ್ನೇಕೆ ಹೆಸರಿಸಿಲ್ಲ ಎಂಬ ಕೂಗು ಕೂಡ ಎದ್ದಿತ್ತು. ಭಾರತದ ಗಡಿಭಾಗದಲ್ಲಿರುವ ರಾಜ್ಯಗಳ ಹೆಸರುಗಳನ್ನು ಮಾತ್ರ ನಮೂದಿಸಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿತ್ತು.
'ಸಿಂಧ್' ಪದವನ್ನು ತೆಗೆಯಬೇಕೆಂಬ ಪುಕಾರು
2005ರಲ್ಲಿ ರಾಷ್ಟ್ರಗೀತೆಯಲ್ಲಿರುವ 'ಸಿಂಧ್' ಪದವನ್ನು ತೆಗೆಯಬೇಕು ಎಂಬ ಪುಕಾರು ಎದ್ದಿತ್ತು. ಸಿಂಧ್ ಇಂದು ಭಾರತದ ಭಾಗವಾಗಿಲ್ಲ, ಅದು ಪಾಕಿಸ್ತಾನದಲ್ಲಿದೆ. ಇದಕ್ಕೆ ಪ್ರತಿಯಾಗಿ, ಸಿಂಧ್ ಎಂದರೆ ಸಿಂಧಿ ಸಂಸ್ಕೃತಿ ಅಥವಾ ಸಿಂಧಿ ಜನಾಂಗ, ಇವರು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿ ಟೀಕಾಕಾರರ ಬಾಯಿ ಮುಚ್ಚಿಸಲಾಯಿತು. ಸರ್ವೋಚ್ಚ ನ್ಯಾಯಾಲಯ ಕೂಡ ಈ ಪದ ತೆಗೆಯಲು ನಿರಾಕರಿಸಿತು.
ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ ಸಚಿವರು
ಬಿಳಿಯಂಗಿ ಬಿಳಿಪಂಚೆಯನ್ನು ಸುತ್ತಿಕೊಂಡಿರುವ ಕೇರಳದ ಸಚಿವರ ದಂಡೊಂದು ರಾಷ್ಟ್ರಗೀತೆಯನ್ನು ಚಿಕ್ಕಮಕ್ಕಳು ಕೂಡ ತಲೆತಗ್ಗಿಸುವಂತೆ ತಪ್ಪುತಪ್ಪಾಗಿ ಹಾಡಿರುವ ವಿಡಿಯೋ ವಾಟ್ಸಾಪ್ ನಲ್ಲಿ ಸುತ್ತಾಡಿ ಅಪಹಾಸ್ಯಕ್ಕೀಡಾಗಿದೆ. ಇವರು ಹೋಗಲಿ, ಭಾರತದಲ್ಲಿರುವ ಅದೆಷ್ಟು ಮಂತ್ರಿಗಳಿಗೆ ರಾಷ್ಟ್ರಗೀತೆ ಬರುತ್ತೋ? ಬಲ್ಲವರಾರು! [ಈ ಮೇಕೆಯನ್ನಾದರೂ ನೋಡಿ ಬುದ್ಧಿ ಕಲೀರೋ!]
ಉಪರಾಷ್ಟ್ರಪತಿಗಳ ಸುತ್ತವೂ ರಾಷ್ಟ್ರಗೀತೆ ವಿವಾದ
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ರಾಷ್ಟ್ರಗೀತೆ ಹಾಡುವಾಗ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಸೆಲ್ಯೂಟ್ ಮಾಡದೆ ಗೌರವ ತೋರಲಿಲ್ಲ ಎಂದು ಕೆಲವೊಬ್ಬರು ವಿವಾದವೆಬ್ಬಿಸಿದ್ದರು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದರಿಂದ ವಿವಾದ ತಣ್ಣಗಾಯಿತು.