ಮಲೇಷ್ಯಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಜಾಕಿರ್
ಇಡಿ ವತಿಯಿಂದ ಬಂಧನ ರಹಿತ ವಾರೆಂಟ್ ಜಾರಿಯಾಗಿದ್ದರೂ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿವಾದಾತ್ಮಕ ಇಸ್ಲಾ ಧರ್ಮ ಭೋಧಕ ಜಾಕಿರ್ ನಾಯಕ್ ಈಗ ಮಲೇಷ್ಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆಂದು ಹೇಳಲಾಗಿದೆ.
ನವದೆಹಲಿ, ಮೇ 31: ಹಣಕಾಸು ಅವ್ಯವಹಾರದ ಆರೋಪ ಹೊತ್ತು, ಭಾರತದಿಂದ ಓಡಿ ಹೋಗಿ, ಬಂಧನ ರಹಿತ ವಾರೆಂಟ್ ಜಾರಿಯಾಗಿದ್ದರೂ ವಿದೇಶದಲ್ಲಿ ಅಡಗಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಈಗ ಮಲೇಷ್ಯಾದ ಪೌರತ್ವ ಪಡೆಯಲು ಅರ್ಜಿ ಗುಜರಾಯಿಸಿದ್ದಾನೆಂಬ ಸುದ್ದಿ ಹರಿದಾಡುತ್ತಿದೆ.
ಇಲ್ಲಿ ಈತನ ವಿರುದ್ಧ ಜಾರಿಯಾಗಿರುವ ಬಂಧನ ರಹಿತ ವಾರೆಂಟ್ ಅನ್ನು ಇಟ್ಟುಕೊಂಡು ಈತನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಈತ ಬಂಧನಕ್ಕಾಗಿ ಹಲವಾರು ತಂತ್ರಗಾರಿಕೆಯನ್ನು ರೂಪಿಸುತ್ತಿದೆ.[ಜಾಕಿರ್ ನಾಯಕ್ ವಿರುದ್ಧ ಜಾಮೀನು ರಹಿತ ವಾರೆಂಟ್]
ಈ ಹಿನ್ನೆಲೆಯಲ್ಲಿ ಅದು ಇಂಟರ್ ಪೊಲ್ ಗೆ ಮನವಿ ಸಲ್ಲಿಸಿ, ಜಾಕಿರ್ ನಾಯಕ್ ವಿರುದ್ಧ ರೆಡ್ ಕಾರ್ಡನ್ ನೋಟಿಸ್ (ಆರ್ ಸಿ ಎನ್ - ಅಂತಾರಾಷ್ಟ್ರೀಯ ಬಂಧನ ವಾರೆಂಟ್) ಜಾರಿಗೊಳಿಸಲು ಕೋರಿದೆ.
ಇದೆಲ್ಲದರ ನಡುವೆಯೇ ಆತ ಮಲೇಷ್ಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದು, ಭಾರತೀಯ ತನಿಖಾ ಸಂಸ್ಥೆಗಳ ಕೈಗೆ ಸಿಗದಿರಲು ಆತ ಹೊಸ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾನೆಯೇ ಎಂಬ ಅನುಮಾನ ಹುಟ್ಟಿಹಾಕಿದೆ.
ಮಲೇಷ್ಯಾದಲ್ಲಿ ಶಾಶ್ವತ ವಿಳಾಸವೊಂದನ್ನು ಈಗಾಗಲೇ ಮಾಡಿಕೊಂಡಿರುವ ಆತ ತಾನು ಅಲ್ಲಿ ಶಾಶ್ವತವಾಗಿ ನೆಲೆಯೂರುವ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅರ್ಜಿಯ ಜತೆಗೆ ಮಾಡಿಕೊಟ್ಟಿದ್ದಾನೆನ್ನಲಾಗಿದೆ. ಆದರೆ, ಮಲೇಷ್ಯಾ ಸರ್ಕಾರ ಈತನ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ.