ಕೊಲೆ ಕೇಸ್: ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್ ದೋಷಿ
ಹಿಸಾರ್(ಹರ್ಯಾಣ), ಅಕ್ಟೋಬರ್ 11: ಸ್ವಯಂಘೋಷಿತ ದೇವಮಾನವ ರಾಮಪಾಲ್ ಅವರನ್ನು ಎರಡು ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಹಿಸಾರ್ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಧೀಶರು ಘೋಷಿಸಿದ್ದಾರೆ.
2006ರಲ್ಲಿ ಮಹಿಳಾ ಭಕ್ತೆಯೊಬ್ಬಳ ಕೊಲೆ ಹಾಗೂ 2014ರಲ್ಲಿ ನಾಲ್ವರು ಮಹಿಳೆ ಹಾಗೂ ಒಂದು ಮಗು ಕೊಲೆ ಪ್ರಕರಣದಲ್ಲಿ ರಾಮ್ ಪಾಲ್ ದೋಷಿ ಎಂದು ತೀರ್ಪು ಪ್ರಕಟಿಸಲಾಗಿದೆ.
ತೀರ್ಪು ಪ್ರಕಟಿಸುವ ವೇಳೆ ರಾಮ್ ಪಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಿದ್ದರು. ಈ ಎರಡು ಪ್ರಕರಣಗಳಲ್ಲಿ ದೋಷಿಯಾಗಿರುವ ರಾಮ್ ಪಾಲ್ ಅವರಿಗೆ ಸಿಗಲಿರುವ ಶಿಕ್ಷೆ ಪ್ರಮಾಣ ಅಕ್ಟೋಬರ್ 16 ಹಾಗೂ 17ರಂದು ತಿಳಿಯಲಿದೆ. ಎರಡು ಪ್ರಕರಣಗಳಿಗೆ ಪ್ರತ್ಯೇಕ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರು
ಈ ಹಿಂದೆ ಆಗಸ್ಟ್ 29, 2017ರಂದು ಹಿಸಾರ್ ಕೋರ್ಟಿನಲ್ಲಿ ಎರಡು ಪ್ರಕರಣಗಳಲ್ಲಿ ಸರಿಯಾದ ಸಾಕ್ಷಿಗಳಿಲ್ಲದೆ, ಖುಲಾಸೆಗೊಂಡಿದ್ದರು. ಆದರೆ, ಮರು ತನಿಖೆಯಾಗುವ ತನಕ ಜೈಲಿನಲ್ಲೇ ಇರಬೇಕಾಯಿತು. ಕೋರ್ಟಿಗೆ ಕರೆದೊಯ್ಯಲು ಕಾನೂನು ಸುವ್ಯವಸ್ಥೆಯ ಹದಗೆಡುವ ಶಂಕೆಯಿಂದ ಸೆಂಟ್ರಲ್ ಜೈಲಿನ ಆವರಣ ಕೋರ್ಟಿನಲ್ಲೇ ವಿಚಾರಣೆ ನಡೆಸಿ, ತೀರ್ಪು ನೀಡಲಾಗಿದೆ.
ಯಾರು ಈ ರಾಮ್ಪಾಲ್
ಬಂಧಿತ 63 ವರ್ಷ ವಯಸ್ಸಿನ ರಾಮ್ಪಾಲ್ ಮೊದಲು ಇಂಜಿನಿಯರ್ ಆಗಿದ್ದ. ನಂತರ ತನ್ನನ್ನು ಸಂತನೆಂದು ಘೋಷಿಸಿಕೊಂಡಿದ್ದ. ಕಬೀರನ ದೋಹಾಗಳನ್ನು ಹೇಳುತ್ತ ಆಶ್ರಮಕ್ಕೆ ಬರುವ ಭಕ್ತರ ಮೇಲೆ ಮೋಡಿ ಮಾಡಿದ್ದ. ಈತನ ಭಕ್ತರಾಗುವ ಮೊದಲು ಮದ್ಯ, ಮಾಂಸ, ಸಿಗರೇಟು ಸೇರಿದಂತೆ ಹಲವು ಆಹಾರಗಳನ್ನು ತ್ಯಜಿಸಲೇಬೇಕಿತ್ತು. ಅಸ್ಪ್ರಶ್ಯತೆ ಹಾಗೂ ನೃತ್ಯಗಳನ್ನು ನಿಷೇಧಿಸುವ ಮೂಲಕ ಉತ್ತಮ ಹೆಸರನ್ನೂ ಗಳಿಸಿದ್ದ. ಆದರೆ, ಭಿಕ್ಷುಕರಿಗೆ ಹಣ ನೀಡಬೇಡಿ. ಏನಾದರೂ ಕುಡಿಯಲು ಕೊಟ್ಟು ಕಳುಹಿಸಿಬಿಡಿ ಎಂಬಂತಹ ವಿಚಿತ್ರ ಸಲಹೆಗಳನ್ನು ನೀಡುತ್ತಿದ್ದ.
ವಿವಿಧ ರಾಜ್ಯಗಳಲ್ಲಿ ಈತನ ಭಕ್ತರಿದ್ದಾರೆ
ತನ್ನನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಅವತಾರ ಎಂದು ರಾಮ್ಪಾಲ್ ಘೋಷಿಸಿಕೊಂಡಿದ್ದ. ಅಲ್ಲದೆ, ಕವಿ ಕಬೀರ ಸರ್ವೋಚ್ಚ ದೇವರು ಎಂದು ತಿಳಿಸಿದ್ದ.
ದೇಶದ ವಿವಿಧ ರಾಜ್ಯಗಳಲ್ಲಿ ಈತನ ಆಶ್ರಮವಿದೆ. ದೇವಮಾನವ ರಾಮ್ಪಾಲ್ಗೆ ದಿನವೂ ಹಾಲಿನಿಂದ ಅಭಿಷೇಕ ಮಾಡಲಾಗುತ್ತಿತ್ತು. ನಂತರ ಅದೇ ಹಾಲಿನಿಂದ ಕೀರು ತಯಾರಿಸಿ ಭಕ್ತರಿಗೆ ಹಂಚಲಾಗುತ್ತಿತ್ತು. ಇದನ್ನು ಭಕ್ತರು ಮಹಾಪ್ರಸಾದ ಎಂದು ಕುಡಿದು ತಮ್ಮ ಜೀವನ ಪಾವನವಾಯಿತೆಂದು ತಿಳಿಯುತ್ತಿದ್ದರು. ರಾಮ್ಪಾಲ್ ಮೋಡಿಗೆ ಒಳಗಾಗಿದ್ದ ಭಕ್ತರು ಆತ ಹೇಳಿದಂತೆ ಕೇಳುತ್ತಿದ್ದರು.
ನಕಲಿ ಬಾಬಾಗಳ ಪಟ್ಟಿಯಲಿ ರಾಮ್ ಪಾಲ್ ಹೆಸರು
ಅಖಿಲ ಭಾರತೀಯ ಅಖಾರ ಪರಿಷತ್ ಪ್ರಕಟಿಸಿರುವ ನಕಲಿ ಹಿಂದೂ ಸಾಧು ಸನ್ಯಾಸಿ, ಬಾಬಾಗಳ ಪಟ್ಟಿಯಲ್ಲಿ ರಾಮ್ ಪಾಲ್ ಹೇಸರು ಸೇರಿಕೊಂಡಿದೆ.
1999ರಲ್ಲಿ ಹರ್ಯಾಣದ ರೋಹ್ಟಕ್ ಜಿಲ್ಲೆಯ ಕರೋಥಾ ಗ್ರಾಮದಲ್ಲಿ ಸತ್ಯ್ ಲೋಕ್ ಆಶ್ರಮ ಸ್ಥಾಪಿಸಿದ. ಪತ್ನಿ ನಾನೋ ದೇವಿ, ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದರು. ಆರ್ಯ ಸಮಾಜದ ಸತ್ಯಾರ್ಥ ಪ್ರಕಾಶವನ್ನು ವಿರೋಧಿಸಿ, ಒಂದಷ್ಟು ಗಲಭೆಗೂ ಕಾರಣನಾದ.
Array
ನವೆಂಬರ್ 19, 2014ರಂದು ತನ್ನ ಆಶ್ರಮದಲ್ಲಿ ಸಾವಿರಾರು ಭಕ್ತರೊಡನೆ ಬಚ್ಚಿಕೊಂಡಿದ್ದ ರಾಮಪಾಲ್ ನನ್ನು ಪೊಲೀಸರು ಬಂಧಿಸಲು ಹರಸಾಹಸ ಪಡಬೇಕಾಯಿತು. ಜೆಸಿಬಿ ತೆಗೆದುಕೊಂಡು ಹೋಗಿ ಆಶ್ರಮದ ಗೋಡೆ ಕೆಡವಲಾಯಿತು. ಅನೇಕ ಭಕ್ತರ ಪ್ರತಿರೋಧದ ನಡುವೆಯು ರಾಮಪಾಲ್ ಹಾಗೂ 292 ಮಂದಿಯನ್ನು ಬಂಧಿಸಲಾಯಿತು. ಆಶ್ರಮದಲ್ಲಿ ಬಚ್ಚಿಟ್ಟಿದ್ದ ಐದು ಶವಗಳನ್ನು ವಶಕ್ಕೆ ಪಡೆಯಲಾಯಿತು. ದೇಶದ್ರೋಹದ ಆರೋಪ ಹೊತ್ತಿದ್ದ ರಾಮ್ ಪಾಲ್ ಮೇಲೆ ಕೊಲೆ, ಕೊಲೆಗೆ ಸಂಚು, ಅಕ್ರಮ ಶಸ್ತ್ರಾಸ್ತ್ರ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಅನೇಕ ಪ್ರಕರಣಗಳಿವೆ.