ಕೊರೊನಾ ಲಸಿಕೆ ಸರಬರಾಜು ಹೆಚ್ಚಿಸಲು ನಿರಂತರ ಪ್ರಯತ್ನ: ಮೋದಿ
ನವದೆಹಲಿ, ಮೇ 17: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ನಡುವೆ ನಿರಂತರ ಪರಿಶ್ರಮದಿಂದ ಲಸಿಕೆ ಉತ್ಪಾದನೆ ಮತ್ತು ಸರಬರಾಜು ವ್ಯವಸ್ಥೆ ಕಲ್ಪಿಸುವುದಕ್ಕೆ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ಜೊತೆ ನಡೆಸಿದ ಸಭೆ ಬಳಿಕ ಪ್ರಧಾನಿ ಮೋದಿ ಮಾತನಾಡಿದರು. ರಾಜ್ಯಗಳಿಗೆ ಮುಂದಿನ 15 ದಿನಗಳಿಗೆ ಸಾಕಾಗುವಷ್ಟು ಕೊರೊನಾ ಲಸಿಕೆಯನ್ನು ಮೊದಲೇ ಸರಬರಾಜು ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವುದರ ಬಗ್ಗೆ ಹೇಳಿದ್ದಾರೆ.
ಎಚ್ಚರ! ದಿನಕ್ಕೆ 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದ್ರೆ ಸಾವು ಪಕ್ಕಾ?
ಲಸಿಕೆ ಎನ್ನುವುದು ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಇರುವ ಪರಿಣಾಮಕಾರಿ ಆಸ್ತ್ರವಾಗಿದ್ದು, ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಹಾಗಾಗಿ ನಾವು ಲಸಿಕೆ ಉತ್ಪಾದನೆ ಮತ್ತು ಪೂರೈಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವತ್ತ ಲಕ್ಷ್ಯ ವಹಿಸಬೇಕಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕೊರೊನಾ ಲಸಿಕೆ ವ್ಯರ್ಥವಾಗುವುದನ್ನು ತಡೆಯಿರಿ:
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇದರ ಜೊತೆ ಲಸಿಕೆ ವ್ಯರ್ಥ ಆಗದಂತೆ ಸರಬರಾಜು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಕೊವಿಡ್-19 ಸೋಂಕಿನ ತಪಾಸಣೆ ವೇಗ ಹೆಚ್ಚಿಸುವುದು, ಸೋಂಕಿತರ ಚಿಕಿತ್ಸೆಗೆ ಆಗತ್ಯವಾಗಿರುವ ಕೊರೊನಾವೈರಸ್ ಔಷಧಿ ಮತ್ತು ಆಮ್ಲಜನಕವನ್ನು ಕಾಳಸಂತೆಯಲ್ಲಿ ಮಾರಾಟ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಹಲವು ಪರಿಸ್ಥಿತಿ ಮತ್ತು ಸವಾಲುಗಳನ್ನು ಎದುರಿಸುವುದನ್ನು ಕಲಿಯುತ್ತೇವೆ. ಈ ಸನ್ನಿವೇಶದಲ್ಲಿ ನಾವೆಲ್ಲರೂ ಯೋಧರಂತೆ ಹೋರಾಡಬೇಕಿದೆ. ಭವಿಷ್ಯದಲ್ಲಿ ಇಂದಿನ ಪ್ರತಿಯೊಂದು ಅನುಭವಗಳು ಬದುಕಿಗೆ ಸಹಕಾರಿ ಆಗಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 122 ದಿನಗಳಲ್ಲಿ 18,44,22,218 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರ ರಾತ್ರಿ 8 ಗಂಟೆ ವೇಳೆಗೆ 14,79,592 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 12,42,929 ಜನರಿಗೆ ಮೊದಲ ಡೋಸ್ ಹಾಗೂ 2,36,663 ಎರಡನೇ ಡೋಸ್ ಲಸಿಕೆ ನೀಡಲಾಗಿದೆ.