ಸಹಜೀವನದಲ್ಲಿನ ಸಹಮತದ ಸೆಕ್ಸ್ ಅತ್ಯಾಚಾರವಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನವದೆಹಲಿ, ಜನವರಿ 3: ಸಹಜೀವನ ನಡೆಸುವ ಸಂಗಾತಿಗಳ ಮಧ್ಯೆ ನಡೆಯುವ ಸಹಮತದ ಲೈಂಗಿಕ ಕ್ರಿಯೆಯನ್ನು, ಪುರುಷ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಮ್ಮತಿಯ ಸಂಬಂಧದಲ್ಲಿ ಮದುವೆಗೆ ನಿರಾಕರಿಸಿದರೆ ಪರಿಹಾರ ತೆರಬೇಕೆ?
ಸನ್ನಿವೇಶಗಳು ಕೈಮೀರಿದ ಸಂದರ್ಭದಲ್ಲಿ ಪುರುಷನಿಗೆ ಮದುವೆಯಾಗಲು ಸಾಧ್ಯವಾಗದೆ ಇದ್ದರೂ, ಮದುವೆಯಾಗುವ ಭರವಸೆಯೊಂದಿಗೆ ಮಹಿಳೆ ಜೊತೆಗೆ ನಡೆಸುವ ಸಹಮತದ ಲೈಂಗಿಕ ಕ್ರಿಯೆಯನ್ನು, ಸಹಜೀವನದ (ಲಿವಿಂಗ್ ಟುಗೆದರ್) ಸಂಗಾತಿಗಳ ನಡುವಿನ ಪ್ರೀತಿ ಮುರಿದು ಬಿದ್ದ ಸಂದರ್ಭದಲ್ಲಿ ಅತ್ಯಾಚಾರ ಎನ್ನಲಾಗದು ಎಂದು ಪೀಠ ಹೇಳಿದೆ.
ಮದುವೆಯಾಗದೆ ಸಂಬಂಧವನ್ನು ಕಡಿದುಕೊಂಡರೆ ಪುರುಷನ ವಿರುದ್ಧ ಮಹಿಳೆಯು ಅತ್ಯಾಚಾರದ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳನ್ನು ಮದುವೆಯಾಗಿ ಸುಳ್ಳು ಭರವಸೆ ನೀಡದ್ದು ಎನ್ನುವುದಕ್ಕಿಂತ ಮದುವೆಯಾಗುವ ಭರವಸೆಯನ್ನು ಮುರಿದಿರುವುದು ಎಂದು ವ್ಯಾಖ್ಯಾನಿಸಬಹುದು ಎಂಬುದಾಗಿ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಸ್ಪಷ್ಟ ಅಂತರವಿದೆ
ಅತ್ಯಾಚಾರ ಮತ್ತು ಸಹಮತದ ಸೆಕ್ಸ್ ನಡುವೆ ಸ್ಪಷ್ಟ ಅಂತರವಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಬಹು ಎಚ್ಚರಿಕೆಯಿಂದ ಪರಿಶೀಲನೆ ನಡೆಸಬೇಕಾಗುತ್ತದೆ. ಆರೋಪಿಯು ನಿಜಕ್ಕೂ ಸಂತ್ರಸ್ತೆಯನ್ನು ಮದುವೆಯಾಗಲು ಬಯಸಿದ್ದರೇ ಅಥವಾ ದುರುದ್ದೇಶ ಹೊಂದಿದ್ದರೇ ಅಥವಾ ತನ್ನ ಲೈಂಗಿಕ ವಾಂಛೆಯನ್ನು ತೀರಿಸಿಕೊಳ್ಳುವ ಸಲುವಾಗಿಯಷ್ಟೇ ಸುಳ್ಳು ಭರವಸೆ ನೀಡಿದ್ದರೇ ಎಂಬುದನ್ನು ಗಮನಿಸಬೇಕು. ಏಕೆಂದರೆ ಇದು ಮೋಸ ಅಥವಾ ವಂಚನೆಯ ಪ್ರಕರಣದ ವ್ಯಾಪ್ತಿಯೊಳಗೆ ಬರುತ್ತದೆ ಎಂದು ಪೀಠ ಸಲಹೆ ನೀಡಿದೆ.
ಅತ್ಯಾಚಾರದಷ್ಟು ಗಂಭೀರವಲ್ಲ
ಭರವಸೆಯನ್ನು ಉಲ್ಲಂಘಿಸುವುದಕ್ಕೂ ಒಂದು ಸುಳ್ಳು ಭರವಸೆಯನ್ನು ಈಡೇರಿಸದೆ ಇರುವುದಕ್ಕೂ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ಲೈಂಗಿಕ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ಮಹಿಳೆಯನ್ನು ಪ್ರೇರೇಪಿಸುವ ಉದ್ದೇಶದೊಂದಿಗೆ ಆರೋಪಿಯು ಭರವಸೆ ನೀಡದೆ ಇದ್ದರೆ ಅದು ಅತ್ಯಾಚಾರ ಆರೋಪದಷ್ಟು ಗಂಭೀರವಾಗಿರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಾಲಕಿ ಅತ್ಯಾಚಾರ, ಹತ್ಯೆ ಅಪರಾಧಿಗೆ ಮರಣದಂಡನೆ ವಿಧಿಸಿದ ಕೋರ್ಟ್
ಪ್ರಕರಣಗಳ ವ್ಯತ್ಯಾಸ ಗಮನಿಸಿ
ಆರೋಪಿಯ ಮೇಲಿನ ಪ್ರೀತಿ ಮತ್ತು ವ್ಯಾಮೋಹದಿಂದ ಮಹಿಳೆಯು ಲೈಂಗಿಕ ಸಂಬಂಧ ಹೊಂದಲು ಬಯಸಿದ್ದರೆ ಮತ್ತು ಆರೋಪಿಯು ಕೇವಲ ತಪ್ಪು ಗ್ರಹಿಕೆ ಸೃಷ್ಟಿಸಿದ್ದರೆ ಅಥವಾ ಆರೋಪಿಯು ಮದುವೆಯಾಗುವ ಎಲ್ಲ ಉದ್ದೇಶಗಳಿದ್ದರೂ, ತನ್ನ ಸಾಮರ್ಥ್ಯದಾಚೆಗೆ ಆಕೆಯನ್ನು ಮದುವೆಯಾಗಲು ಸಾಧ್ಯವಾಗದೆ ಇದ್ದರೆ ಅಂತಹ ಪ್ರಕರಣಗಳನ್ನು ಬೇರೆ ರೀತಿಯನ್ನು ನಿರ್ವಹಿಸಬೇಕು ಎಂದು ಪೀಠ ತಿಳಿಸಿದೆ.
ನರ್ಸ್ ನೀಡಿದ ದೂರಿನ ಪ್ರಕರಣ
ಮಹಾರಾಷ್ಟ್ರದ ಸರ್ಕಾರಿ ವೈದ್ಯರೊಬ್ಬರ ಬಳಿ ಕೆಲಸ ಮಾಡುತ್ತಿದ್ದ ದಾದಿಯೊಬ್ಬರು ಸಲ್ಲಿಸಿದ್ದ ದೂರಿನ ಅಡಿಯಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣದ ವಿಚಾರಣೆಯನ್ನು ವಜಾಗೊಳಿಸಿದ ನ್ಯಾಯಪೀಠ ಈ ಅಭಿಪ್ರಾಯಗಳನ್ನು ದಾಖಲಿಸಿದೆ.
ವೈದ್ಯರೊಂದಿಗೆ ಪ್ರೀತಿ ಉಂಟಾದ ಬಳಿಕ ಇಬ್ಬರೂ ಸಹಜೀವನ ನಡೆಸುತ್ತಿದ್ದೆವು. ತನ್ನನ್ನು ಮದುವೆಯಾಗುವುದಾಗಿ ವೈದ್ಯರು ಹೇಳಿದ್ದರಿಂದ ಅವರೊಂದಿಗೆ ದೈಹಿಕ ಸಂಬಂಧ ಇರಿಸಿಕೊಂಡಿದ್ದೆ ಎಂದಿದ್ದ ನರ್ಸ್, ವೈದ್ಯ ಬೇರೆ ಮಹಿಳೆಯನ್ನು ಮದುವೆಯಾದ ನಂತರ ದೂರು ಸಲ್ಲಿಸಿದ್ದರು. ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸಲು ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದ್ದರಿಂದ ವೈದ್ಯ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅತ್ಯಾಚಾರ ಪ್ರಕರಣವಲ್ಲ
ನರ್ಸ್ ಮಾಡಿರುವ ಆರೋಪ ಪರಿಶೀಲಿಸಿದ ನ್ಯಾಯಪೀಠ, ವೈದ್ಯನ ವಿರುದ್ಧದ ಅತ್ಯಾಚಾರ ಆರೋಪವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿತು. ಮಹಿಳೆಯು ವೈದ್ಯನ ಮೇಲೆ ತನಗೆ ಪ್ರೀತಿ ಮೂಡಿದ್ದಾಗಿ ಮತ್ತು ವಿಧವೆಯಾದ ತನಗೆ ಸಂಗಾತಿ ಬೇಕಿದ್ದರಿಂದ ಅವರೊಂದಿಗೆ ಸಹಜೀವನ ನಡೆಸಲು ಆರಂಭಿಸಿದ್ದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ.
ಇಬ್ಬರೂ ಕೆಲವು ಸಮಯ ಒಟ್ಟಿಗೆ ಸಂಬಂಧ ಹೊಂದಿದ್ದು, ಪರಸ್ಪರರ ಸಾಂಗತ್ಯವನ್ನು ಇಷ್ಟಪಟ್ಟಿದ್ದಾರೆ. ವೈದ್ಯ ಬೇರೆ ಮಹಿಳೆಯನ್ನು ಮದುವೆಯಾದ ಬಳಿಕ ದೂರು ನೀಡಿದ್ದಾರೆ. ಇದು ಅವರು ಬಲವಂತದಿಂದ ಅತ್ಯಾಚಾರ ಎಸಗಿದ ಪ್ರಕರಣವಲ್ಲ. ಅವರು ಇಲ್ಲಿ ಯಾವುದೇ ದೈಹಿಕ ಒತ್ತಡವಿಲ್ಲ. ಮತ್ತು ಆಕೆಯೇ ನೀಡಿರುವ ಪ್ರಜ್ಞಾಪೂರ್ವಕ ಒಪ್ಪಿಗೆಯಾಗಿದೆ ಎಂದು ಪೀಠ ಹೇಳಿದೆ.