ಮೇಘಾಲಯದಲ್ಲೂ ಕಾಂಗ್ರೆಸ್ಸಿಗೆ ಸೋಲು, ಎನ್ ಪಿಪಿಯಿಂದ ಸರ್ಕಾರ ರಚನೆ
ಶಿಲ್ಲಾಂಗ್, ಮಾರ್ಚ್ 04: ಮೇಘಾಲಯದಲ್ಲಿ ಕೊನೆಗೂ ಸರ್ಕಾರ ರಚನೆ ಮಾಡುವ ಯತ್ನದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ತ್ರಿಪುರಾ, ನಾಗಾಲ್ಯಾಂಡ್ ನಂತರ ಮೇಘಾಲಯವನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ನ್ಯಾಷನಲ್ ಪೀಪಲ್ ಪಾರ್ಟಿ (ಎನ್ ಪಿ ಪಿ) ನೇತೃತ್ವದ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿದೆ. ಕೊನ್ರಾಡ್ ಸಂಗ್ಮಾ ಅವರು 34 ಶಾಸಕರ ಬೆಂಬಲ ಪಡೆದಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆ ಮಾಡುವ ಅವಕಾಶ ಕೋರಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ 06ರಂದು ಬೆಳಗ್ಗೆ 10.30ರ ವೇಳೆಗೆ ಕೊನ್ರಾಡ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
'ಕಾಂಗ್ರೆಸ್ ಮುನ್ನಡೆ ಪಡೆದರೂ ಸರ್ಕಾರ ರಚನೆಯಲ್ಲಿ ಮುಗ್ಗರಿಸುವ ಸಂಭವ ಹೆಚ್ಚು ಎಂದಿದ್ದಾರೆ. ಕಮಲ್ ನಾಥ್ ಹಾಗೂ ಸಿಪಿ ಜೋಶಿಗಿಂತ ಬಿಜೆಪಿಯ ಹಿಮತಾ ಬಿಸ್ವಾಗೆ ಇಲ್ಲಿನ ಒಳ-ಹೊರಗೂ ಪರಿಸ್ಥಿತಿ ಗೊತ್ತಿದೆ.
ಈಶಾನ್ಯದಲ್ಲಿ ಬಿಜೆಪಿ ಯಶಸ್ಸಿಗೆ ನಾಲ್ವರು ತಂತ್ರಗಾರರೇ ಕಾರಣ
ಹೀಗಾಗಿ, ಎನ್ ಪಿಪಿ ಹಾಗೂ ಬಿಜೆಪಿ ಮೈತ್ರಿ ಸಾಧ್ಯವಿದೆ' ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದು ನಿಜವಾಗುತ್ತಿದೆ. ಮೇಘಗಳ ಆವಾಸ ಸ್ಥಾನವಾದ ಮೇಘಾಲಯದ ಎನ್ ಪಿಪಿ ಮೈತ್ರಿ ಸಾಧಿಸಿ, ಸರ್ಕಾರ ರಚನೆ ಮಾಡುವ ಯತ್ನದ ಹಿಂದೆ ಬಿಜೆಪಿಯ ಪ್ರಮುಖ ನಾಯಕರ ತಂತ್ರಗಾರಿಕೆ ಎದ್ದುಕಾಣುತ್ತಿದೆ. 60 ಸದಸ್ಯರ ಅಸೆಂಬ್ಲಿ ಹೊಂದಿರುವ ಮೇಘಾಲಯದಲ್ಲಿ ಎನ್ ಪಿಪಿ ಮೈತ್ರಿಕೂಟದ ಬಲಾಬಲ ಹೇಗಿದೆ ಮುಂದೆ ಓದಿ...
ಎನ್ ಪಿಪಿಗೆ 34 ಶಾಸಕರ ಬಲ
ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ)ಯ ಕೊನ್ರಾಡ್ ಸಂಗ್ಮಾ ಅವರು ರಾಜ್ಯಪಾಲರ ಬಳಿ ತೆರಳಿ ನೀಡಿರುವ ಬೆಂಬಲಿತರ ಪಟ್ಟಿ ಪ್ರಕಾರ, ಎನ್ ಪಿಪಿ(19) + ಯುಡಿಪಿ (6) + ಪಿಡಿಎಫ್ (4) + ಬಿಜೆಪಿ (2) + ಎಚ್ ಎಸ್ ಪಿ ಡಿಪಿ (2) + ಪಕ್ಷೇತರ (1) =34, 59 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 30 ಸ್ಥಾನ ಪಡೆದ ಪಕ್ಷ ಅಧಿಕಾರ ಸ್ಥಾಪನೆಗೆ ಮುಂದಾಗಬಹುದಾಗಿದೆ.
ಐದು ಪಕ್ಷಗಳ ಮೈತ್ರಿಕೂಟ
ಶನಿವಾರ(ಮಾರ್ಚ್ 03)ದಂದು ಪ್ರಕಟವಾದ ಫಲಿತಾಂಶದಂತೆ ಕಾಂಗ್ರೆಸ್ 21 ಸ್ಥಾನ ಗಳಿಸಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿತ್ತು. ಆದರೆ, ಕಳೆದ ಬಾರಿ 2 ಸ್ಥಾನ ಮಾತ್ರ ಗೆದ್ದಿದ್ದ ಕೊನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಈ ಬಾರಿ 19 ಸ್ಥಾನ ಗಳಿಸಿದ್ದು, ಬಿಜೆಪಿ ಬೆಂಬಲದಿಂದ ಇತರೆ ಪಕ್ಷಗಳು ಹಾಗೂ ಪಕ್ಷೇತರರ ನೆರವಿನಿಂದ ಸರ್ಕಾರ ರಚನೆಗೆ ಮುಂದಾಗಿದೆ.
ಕೊನ್ರಾಡ್ ಸಂಗ್ಮಾ ಮುಖ್ಯಮಂತ್ರಿ
ಸದ್ಯ ಎನ್ ಪಿಪಿ ಅಧ್ಯಕ್ಷರಾಗಿರುವ ಕೊನ್ರಾಡ್ ಸಂಗ್ಮಾ ಅವರು ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸಿಎಂ ಮಾಡಿ ಎಂಬ ಬೇಡಿಕೆಯೂ ಬಂದಿದೆ. ಹೀಗಾಗಿ, ಕೊನ್ರಾಡ್ ಅವರ ತಂಗಿ ಅಗಾಥಾ ಸಂಗ್ಮಾ ಅವರನ್ನು ಸಿಎಂ ಸ್ಥಾನಕ್ಕೇರಿಸುವ ಮಾತುಕತೆಯೂ ನಡೆದಿದೆ.
ಕಾಂಗ್ರೆಸ್ ಗೆ ಮತ್ತೆ ಸೋಲು
ಕಳೆದ 10 ವರ್ಷಗಳಿಂದ ಇಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 21 ಸ್ಥಾನಗಳನ್ನು ಗಳಿಸಿದ್ದು, ಸರ್ಕಾರ ರಚನೆ ಕಸರತ್ತಿನಲ್ಲಿ ಸೋಲು ಕಂಡಿದೆ. ಗೋವಾದಲ್ಲಿ ಸರ್ಕಾರ ರಚನೆ ಮಾಡಲು ವಿಫಲವಾಗಿ ಬಿಜೆಪಿ ಮೈತ್ರಿಕೂಟದ ಮುಂದೆ ತಲೆ ತಗ್ಗಿಸುವಂಥ ಪರಿಸ್ಥಿತಿ ತಂದುಕೊಂಡ ಕಾಂಗ್ರೆಸ್ ಇಲ್ಲಿ ಕೂಡಾ ಅದೇ ಪರಿಸ್ಥಿತಿಯನ್ನು ಎದುರಿಸಿದೆ. ಪಕ್ಷದ ಮುಖಂಡರಾದ ಅಹಮ್ಮದ್ ಪಾಟೀಲ್ ಹಾಗೂ ಕಮಲ್ನಾಥ್ ಅವರ ತಂತ್ರಗಾರಿಕೆ ವಿಫಲವಾಗಿದೆ.