ವಿಶ್ವಾಸಾಘಾತದ ಆರೋಪ; ಅರ್ನಬ್ ಗೋಸ್ವಾಮಿ ವಿರುದ್ಧ NSUI ದೂರು
ನವದೆಹಲಿ, ಜನವರಿ 18: ದೇಶಕ್ಕೆ ವಿಶ್ವಾಸಾಘಾತ ಮಾಡಿದ ಆರೋಪದಲ್ಲಿ ರಿಪಬ್ಲಿಕ್ ಟಿ.ವಿಯ ಅರ್ನಬ್ ಗೋಸ್ವಾಮಿ ವಿರುದ್ಧ ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ದೂರು ದಾಖಲಿಸಿದೆ.
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಎನ್ ಎಸ್ ಯುಐ ರಾಷ್ಟ್ರೀಯ ಕಾರ್ಯದರ್ಶಿ ರೋಷನ್ ಲಾಲ್ ಬಿಟ್ಟು ಅರ್ನಬ್ ಗೋಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಪಾಕ್ ವಿರುದ್ಧದ ಸರ್ಕಾರದ ಯೋಜನೆಗಳು ಅರ್ನಬ್ ಗೋಸ್ವಾಮಿಗೆ ಹೇಗೆ ತಿಳಿಯುತ್ತವೆ? ರಾಷ್ಟ್ರದ ಇಂಥ ಗೌಪ್ಯ ಮಾಹಿತಿಗಳು ಇವರಿಗೆ ಹೇಗೆ ಸಿಗುತ್ತವೆ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.
ಟಿಆರ್ಪಿ ಹಗರಣ : ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ನಡುವಿನ ವಾಟ್ಸಾಪ್ ಚಾಟ್ ಸೋರಿಕೆ
ಫೆಬ್ರುವರಿ 26, 2019ರಲ್ಲಿ ನಡೆದ ಬಾಲಾಕೋಟ್ ದಾಳಿಗೆ ಮೊದಲೇ ಇವರಿಗೆ ರಹಸ್ಯ ಮೂಲದಿಂದ ಮಾಹಿತಿ ಬಂದಿದೆ. ತಮ್ಮ ಟಿ.ವಿ ಚಾನಲ್ ನ ಟಿಆರ್ ಪಿಗಾಗಿ ರಾಷ್ಟ್ರದೊಂದಿಗೆ ಅರ್ನಬ್ ಆಟ ಆಡಿ, ಸರ್ಕಾರದ ರಹಸ್ಯ ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಹಾಗೂ ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಪ್ ಚಾಟ್ ಸೋರಿಕೆಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅರ್ನಬ್ ಗೋಸ್ವಾಮಿ ಹಾಗೂ ಪಾರ್ಥೋ ದಾಸ್ ಗುಪ್ತಾ ನಡುವಿನ ಫೆ.23ರ ವಾಟ್ಸ್ ಆಪ್ ಚಾಟ್ ನಲ್ಲಿ ವೈಮಾನಿಕ ದಾಳಿ ಮಾದರಿಯ ದೊಡ್ಡ ದಾಳಿ ನಡೆಯಬಹುದು ಎಂಬ ಬಗ್ಗೆ ಉಲ್ಲೇಖಿಸಲಾಗಿತ್ತು.