RSS ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಕಾಂಗ್ರೆಸ್: ಸಂಘದ ಸ್ವಾಗತ
ಇಂದೋರ್, ಫೆ 23 : ರಾಷ್ಟ್ರಧ್ವಜದ ವಿಚಾರದಲ್ಲಿ 'ರಾಜಕೀಯ' ಮಾಡಲು ಬಂದ ಕಾಂಗ್ರೆಸ್ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರ ನಡೆಯಿಂದ ತಬ್ಬಿಬ್ಬಾದ ಘಟನೆ ನಗರದಲ್ಲಿ ಸೋಮವಾರ (ಫೆ 22) ವರದಿಯಾಗಿದೆ.
ದೇಶಭಕ್ತಿಯ ವಿಚಾರದಲ್ಲಿ ಬರೀ ಬೊಗಳೆ ಬಿಡುವ ಆರ್ ಎಸ್ ಎಸ್ ಸಂಘಟನೆ ತನ್ನ ಕಚೇರಿಯಲ್ಲೇ ರಾಷ್ಟ್ರಧ್ವಜ ಹಾರಿಸಿಲ್ಲ. ಹಾಗಾಗಿ ನಾವು ಆ ಕೆಲಸ ಮಾಡಲು ಬಂದಿದ್ದೇವೆಂದು ಸುಮಾರು 800ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಆರ್ ಎಸ್ ಎಸ್ ಕಚೇರಿಗೆ ಘೋಷಣೆ ಕೂಗುತ್ತಾ ಆಗಮಿಸಿದ್ದರು.
ಆದರೆ, ಸ್ಥಳೀಯ ಆರ್ ಎಸ್ ಎಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಘದ ಕಚೇರಿಯಲ್ಲಿ ಧ್ವಜ ಹಾರಿಸಲು ಅವಕಾಶ ನೀಡುವ ಮೂಲಕ, ಈ ಘಟನೆಯನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳಬಹುದು ಎನ್ನುವ ಕಾಂಗ್ರೆಸ್ ಕಾರ್ಯಕರ್ತರ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
JNU, ರೋಹಿತ್ ವೇಮುಲ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಆರ್ ಎಸ್ ಎಸ್ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿಲ್ಲ ಎನ್ನುವ ವಿಚಾರವೂ ತೀವ್ರ ಚರ್ಚೆಗೆ ಗುರಿಯಾಗಿತ್ತು.
ಧ್ವಜ ಹಾರಿಸಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರೀತಿಯಿಂದ ಸ್ವಾಗತಿಸಿದ ಆರ್ ಎಸ್ ಎಸ್, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಸ್ಮೃತಿ ಇರಾನಿ
ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮೃತಿ ಇರಾನಿ, ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದರು. ಇದು ವ್ಯಾಪಕ ಪರ, ವಿರೋಧ ಚರ್ಚೆಗೆ ನಾಂದಿ ಹಾಡಿತ್ತು.
RSS ಕೇಂದ್ರ ಕಚೇರಿ
ನಾಗ್ಪುರದ RSS ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದೇ ಎಷ್ಟು ವರ್ಷವಾಯಿತು ಎನ್ನುವುದು ನಿಮ್ಮ ಎನ್ಡಿಎ ಸರಕಾರಕ್ಕೆ ಅರಿತಿದೆಯೇ ಎನ್ನುವ ಟೀಕೆ, ಟಿಪ್ಪಣಿ ವ್ಯಕ್ತವಾಗಿದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಶಾಮೀಲಾಗಿದ್ದರಿಂದ ಸಂಘದ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಬಾರದು ಎಂದು 1948ರಲ್ಲಿ ಅಂದಿನ ಸರಕಾರ ಆದೇಶ ಹೊರಡಿಸಿತ್ತು. ಆದರೆ 26.01.1950 ಮತ್ತು 2002ರಲ್ಲೂ ಸಂಘದ ಕಚೇರಿಯಲ್ಲಿ ಧ್ವಜ ಹಾರಾಡುತ್ತಿತ್ತು.
ಆರ್ ಎಸ್ ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ
ಸೋಮವಾರ (ಫೆ 22) ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರುಣ್ ಯಾದವ್ ನೇತೃತ್ವದಲ್ಲಿ ಸುಮಾರು ಎಂಟು ನೂರಕ್ಕೂ ಹೆಚ್ಚು ಕಾರ್ಯಕರ್ತರು ಆರ್ ಎಸ್ ಎಸ್ ಕಚೇರಿಯಲ್ಲಿ ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿದ್ದರು, ಆರ್ ಎಸ್ ಎಸ್.. ಬಿಜೆಪಿಗೆ, ಧಿಕ್ಕಾರ.. ಧಿಕ್ಕಾರ.. ಎಂದು ಘೋಷಣೆ ಕೂಗುತ್ತಾ, ಮೋಹನ್ ಭಾಗವತ್ ಅವರ ಪ್ರತಿಕೃತಿ ದಹಿಸುತ್ತಾ ಸಂಘದ ಕಚೇರಿಗೆ ಆಗಮಿಸಿದ್ದಾರೆ. (ಚಿತ್ರ : ಪಿಟಿಐ)
ಪೊಲೀಸ್ ಭಾರೀ ಬಿಗಿಬಂದೋಬಸ್ತ್
ಸದ್ಯದ ಪರಿಸ್ಥಿತಿಯಲ್ಲಿ ಈ ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎಂದು ಪೊಲೀಸರು ಭಾರೀ ಬಂದೋಬಸ್ತ್ ಹಾಕಿದ್ದರು. ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದಿದ್ದಾರೆ ಕೂಡಾ. ನಂತರ ಪೊಲೀಸರು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಇಪ್ಪತ್ತು ಜನರನ್ನು ಸಂಘದ ಕಚೇರಿಗೆ ತೆರಳಲು ಅವಕಾಶ ನೀಡಿದರು.
RSS ಮುಖಂಡರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಗತ
ಆರ್ ಎಸ್ ಎಸ್ ಮುಖಂಡರಿಂದ ವಿರೋಧ ವ್ಯಕ್ತವಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ಮುಖಂಡರಿಗೆ, ಸಂಘದ ಮುಖಂಡರ ನಡೆ ಆವಕ್ಕಾಗುವಂತೆ ಮಾಡಿದೆ. ಕಾಂಗ್ರೆಸ್ ಮುಖಂಡರನ್ನು ಪ್ರೀತಿಯಿಂದ ಸ್ವಾಗತಿಸಿದ ಸಂಘದ ಮುಖಂಡರು ತಿಂಡಿ, ಕಾಫಿ ಕೊಟ್ಟು ಉಪಚಾರ ನಡೆಸಿದ್ದಾರೆ.
ಧ್ವಜಾರೋಹಣಕ್ಕೆ ಸಂಘದ ಮುಖಂಡರಿಂದ ಅವಕಾಶ
ತಿಂಡಿ ಉಪಚಾರದ ನಂತರ ಸಂಘದ ಕಟ್ಟಡದ ಮೇಲಿರುವ ಭಗವಧ್ವಜದ ಪಕ್ಕದಲ್ಲೇ ರಾಷ್ಟ್ರಧ್ವಜವನ್ನು ಸಂಘದ ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರು ಒಟ್ಟಾಗಿ ಹಾರಿಸಿದ್ದಾರೆ. ನಮಗೆ ರಾಜಕೀಯಕ್ಕಿಂತಲೂ ರಾಷ್ಟ್ರಧ್ವಜ ಮುಖ್ಯ, ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂದು ಸಂಘದ ಪ್ರಮುಖ ದಿನೇಶ್ ಜೈನ್ ಹೇಳಿದ್ದಾರೆ. ಒಟ್ಟಾರೆ ಸಂಘ ಪರಿವಾರಕ್ಕೆ ಮುಜುಗರ ತರಲು ಮುಂದಾದ ಕಾಂಗ್ರೆಸ್ ಮುಖಂಡರು, ತಾವೇ ಮುಜುಗರಕ್ಕೀಡಾಗಿದ್ದಂತೂ ಹೌದು.