ನಾನು ಪ್ರಚಾರ ಮಾಡಿದರೆ ಮ.ಪ್ರ.ದಲ್ಲಿ ಕಾಂಗ್ರೆಸ್ ಸೋಲುತ್ತದೆ: ದಿಗ್ವಿಜಯ್ ಸಿಂಗ್
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ವೇಳೆ ನಾನೇನಾದರೂ ಕಾಂಗ್ರೆಸ್ ಪರ ಚುನಾವಣೆ ಪ್ರಚಾರ ಅಥವಾ ಭಾಷಣ ಮಾಡಿದರೆ ಪಕ್ಷ ಸೋಲನ್ನು ಅನುಭವಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಹರಿದಾಡುತ್ತಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ಅವರ ಮಾತು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಎಎನ್ಐ ಸುದ್ದಿ ಸಂಸ್ಥೆ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರನ್ನು ದಿಗ್ವಿಜಯ್ ಸಿಂಗ್ ಭೇಟಿ ಮಾಡಿದ ಸಂದರ್ಭದಲ್ಲಿ, ನನ್ನ ಭಾಷಣಗಳಿಂದ ಕಾಂಗ್ರೆಸ್ ಗೆ ಹಾನಿಯಾಗುತ್ತದೆ. ಬರುವ ಮತಗಳ ಪ್ರಮಾಣ ಕಡಿಮೆ ಆಗುತ್ತದೆ. ಆದ್ದರಿಂದ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಅಥವಾ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮೇಲೆ ಮೇಲ್ಜಾತಿಯ ಮುನಿಸು: ಸಂಧಾನಕ್ಕೆ ಬಂದ ಆರೆಸ್ಸೆಸ್?!
ಪಕ್ಷದ ಕಾರ್ಯಕರ್ತರು ಶ್ರಮ ಹಾಕದ ಹೊರತು ಕಾಂಗ್ರೆಸ್ ಗೆಲ್ಲುವುದು ಸಾಧ್ಯವಿಲ್ಲ ಎಂದಿರುವ ಅವರು, ಒಂದು ವೇಳೆ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಇದ್ದರೂ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಸಲಹೆ ಮಾಡಿದ್ದಾರೆ. ಅವರ ಈ ಹೇಳಿಕೆಯು ಪಕ್ಷದೊಳಗೆ ನಾನಾ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದರು ಎಂಬುದೇ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ಗದ್ದುಗೆಗಾಗಿ ದೊಡ್ಡ ಕದನವೇ ನಡೆಯುವ ಸೂಚನೆ
ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿ ವಿರುದ್ಧ ಗೆಲ್ಲಲು ಯುಪಿಎ ಹರಸಾಹಸ ಪಡುತ್ತಿದೆ. ಇದೀಗ ಕಾಂಗ್ರೆಸ್ ಒಳಗೇ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸಿದಂತೆ ಆಗಿದೆ. ಮುಂಬರುವ ವಿಧಾನಸಭಾ ಚುನಾವಣೆ ನಂತರ ಒಂದು ವೇಳೆ ಕಾಂಗ್ರೆಸ್ ಅಧಿಕಾರ ಹಿಡಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಮಧ್ಯೆ ಗದ್ದುಗೆಗಾಗಿ ದೊಡ್ಡ ಕದನವೇ ನಡೆಯುವ ಸೂಚನೆ ಸಿಕ್ಕಂತಾಗಿದೆ.
ಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರ
ಎಫ್ ಐಅರ್ ದಾಖಲಿಸಿಕೊಳ್ಳಲು ಕೋರ್ಟ್ ನಿಂದ ನಿರ್ದೇಶನ
ವ್ಯಾಪಂ ಪ್ರಕರಣದಲ್ಲಿ ಕೋರ್ಟ್ ನ ದಾರಿ ತಪ್ಪಿಸಿದ್ದಕ್ಕೆ ಹಾಗೂ ಪೊಲೀಸರ ತನಿಖೆಯಲ್ಲಿ ಪ್ರಭಾವ ಬೀರಿದ ಕಾರಣಕ್ಕೆ ಕಾಂಗ್ರೆಸ್ ನ ನಾಯಕರಾದ ಕಮಲ್ ನಾಥ್, ದಿಗ್ವಿಜಯ್ ಸಿಂಗ್, ಜ್ಯೋತಿರಾದಿತ್ಯ ಸಿಂಧ್ಯಾ, ಪ್ರಶಾಂತ್ ಪಾಂಡೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳುವಂತೆ ಭೋಪಾಲ್ ಕೋರ್ಟ್ ಪೊಲೀಸರಿಗೆ ನಿರ್ದೇಶನ ಮಾಡಿದೆ.
ಚೌಕಿದಾರ ಮೋದಿ ಹೃದಯದಲ್ಲಿ ಬಡವರಿಗೆ ಜಾಗವಿಲ್ಲ: ರಾಹುಲ್ ಗಾಂಧಿ
ಸಮೀಕ್ಷೆ ಪ್ರಕಾರ ಮತ್ತೆ ಬಿಜೆಪಿ ಅಧಿಕಾರಕ್ಕೆ
ಇತ್ತೀಚೆಗೆ ಬಂದ ಚುನಾವಣೆ ಪೂರ್ವ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಅಲ್ಲಿ ಈಗ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಈ ಬಗ್ಗೆ ಭಿನ್ನವಾದ ಅಭಿಪ್ರಾಯ ಇದೆ. ಆ ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಇದ್ದು, ಅದು ಕಾಂಗ್ರೆಸ್ ಗೆ ಪೂರಕವಾಗಲಿದೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಚುನಾವಣೆ
ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ತಾನ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗೆ ಚುನಾವಣೆ ಆಯೋಗವು ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ನವೆಂಬರ್ 28 ಮತ್ತು ಡಿಸೆಂಬರ್ 7 ಮತದಾನ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.