ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜದ್ರೋಹ ಕಾನೂನು ಕಸದಬುಟ್ಟಿಗೆ!
ನವದೆಹಲಿ, ಮಾರ್ಚ್ 14 : ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ದೇಶದ್ರೋಹದ ಕೂಗು ಹಾಕುವವರಿಗೆ ಕಂಟಕವಾಗಿರುವ, ರಾಜದ್ರೋಹ ಅಪರಾಧ ಕಾನೂನನ್ನು ಹರಿದು ಬಿಸಾಕಿ ಕಸದ ಬುಟ್ಟಿಗೆ ಹಾಕಲಿದೆ.
ನರೇಂದ್ರ ಮೋದಿ ಸರಕಾರ ಬಂದಾಗಿನಿಂದ ರಾಜದ್ರೋಹ ಅಪರಾಧ ಕಾನೂನನ್ನು ದುರ್ಬಳಸಿಕೊಳ್ಳುತ್ತಿದ್ದು, ಭಾರತದ ನಾಗರಿಕರಿಗೆ ತೊಂದರೆ ನೀಡುತ್ತಿದೆ. ಈ ಕಾರಣದಿಂದ ಅದನ್ನು ತೆಗೆದು ಹಾಕಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಸುಳಿವು ನೀಡಿದ್ದಾರೆ.
ಲೋಕ ಸಮರ : ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಪ್ರಿಯಾ ದತ್ ಅಚ್ಚರಿಯ ಸೇರ್ಪಡೆ
ಈ ಕಾನೂನು ಕಸದಬುಟ್ಟಿಗೆ ಸೇರಿದರೆ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಭಾರತದ ವಿರುದ್ಧ ಮತ್ತು ಕಾಶ್ಮೀರ ಪ್ರತ್ಯೇಕತಾವಾದದ ಕೂಗು ಹಾಕಿದ ಕನ್ಹಯ್ಯ ಕುಮಾರ್ ನಂಥ ವಿದ್ಯಾರ್ಥಿ ಸಂಘಟನೆಯ ನಾಯಕರು ದೇಶದಾದ್ಯಂತ ಸಿಹಿ ಹಂಚಿ, ಪಟಾಕಿ ಸಿಡಿಸಲಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರಿಂದ, ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ನಿರತವಾಗಿರುವ ಕಾಂಗ್ರೆಸ್ ನಾಯಕರು, ಮಹಿಳೆಯರ ಸಬಲೀಕರಣ, ಎಲ್ಜಿಬಿಟಿ ಹಕ್ಕುಗಳು, ಉದ್ಯೋಗ ಗ್ಯಾರಂಟಿಯ ಜೊತೆಗೆ ರಾಜದ್ರೋಹ ಅಪರಾಧ ಕಾನೂನಿನ ಬಗ್ಗೆ ಹಲವಾರು ಭರವಸೆಗಳನ್ನು ಸೇರಿಸುತ್ತಿದೆ.
ಕಾಂಗ್ರೆಸ್ ರಾಜದ್ರೋಹ ಕಾನೂನನ್ನು ತೆಗೆದು ಹಾಕುವ ಮೂಲಕ ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದೆಯೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲವಾದರೂ, ಈ ಸುದ್ದಿ ಬಿರುಗಾಳಿಯಂತೆ ವ್ಯಾಪಿಸಿಕೊಳ್ಳುತ್ತಿದ್ದು, ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ.
ಕನ್ಹಯ್ಯ ಕುಮಾರ್ ವಿರುದ್ಧ ಚಾರ್ಜ್ ಶೀಟ್
ರಾಜದ್ರೋಹ ಅಪರಾಧ ಕಾನೂನಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಹಲವಾರು ವರ್ಷಗಳಿಂದ ಜಟಾಪಟಿ ನಡೆಯುತ್ತಲೇ ಇದೆ. 2016ರಲ್ಲಿ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ್ ಮತ್ತು ಇತರರು ಭಾರತದ ವಿರುದ್ಧ ಕೂಗು ಹಾಕಿದಾಗ, ಆತನ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಹಾಕಿದ್ದನ್ನು ಕಾಂಗ್ರೆಸ್ ವಿರೋಧಿಸಿತ್ತು.
ಸಂಸತ್ ದಾಳಿಯ ರೂವಾರಿ, ಭಯೋತ್ಪಾದಕ ಅಫ್ಜಲ್ ಗುರುವನ್ನು ನೇಣಿಗೇರಿಸಿದ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಸಮಯದಲ್ಲಿ, ವಿದ್ಯಾರ್ಥಿ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ್ ಮತ್ತು ಆತನ ಸಂಗಡಿಗರು ಭಾರತದ ವಿರುದ್ಧ ಧಿಕ್ಕಾರ ಕೂಗಿದ್ದರು.
ಕನ್ಹಯ್ಯನಿಗೆ ರಾಹುಲ್ ಬೆಂಬಲ
ರಾಜದ್ರೋಹದ ಆರೋಪ ಹೊತ್ತಿದ್ದ ಕನ್ಹಯ್ಯ ಕುಮಾರನಿಗೆ ಜಾಮೀನು ಸಿಕ್ಕ ಮೇಲೆ ಆತನ ಮನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿ, ಆತನಿಗೆ ಸಾಂತ್ವನ ಹೇಳಿದ್ದರು ಮತ್ತು ಆತನ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ನಂತರ 2016ರ ಫೆಬ್ರವರಿಯಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಕೂಡ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಸರಕಾರದ ವಿರುದ್ಧ ಹರಿಹಾಯ್ದಿದ್ದರು.
'ದೇಶವಿರೋಧಿ' ಕಾರ್ಯಕ್ರಮ; ಕನ್ಹಯ್ಯಾ ವಿರುದ್ಧ 1200 ಪುಟದ ಆರೋಪ ಪಟ್ಟಿ
ಯುವಜನತೆ ಧ್ವನಿ ತುಳಿದುಹಾಕಲಾಗುತ್ತಿದೆ
ದೇಶದ ಜನರ ಧ್ವನಿಯನ್ನು ನರೇಂದ್ರ ಮೋದಿ ಸರಕಾರ ಹೊಸಕಿಹಾಕುತ್ತಿದೆ, ಅವರ ದನಿಗೇ ಬಿಜೆಪಿ ಸರಕಾರ ಹೆದರುತ್ತಿದೆ ಎಂದು ಅಬ್ಬರಿಸಿದ್ದ ರಾಹುಲ್ ಗಾಂಧಿ ಅವರು, ಎನ್ಡಿಎ ಸರಕಾರವನ್ನೇ ದೇಶ ವಿರೋಧಿ ಎಂದು ಜರಿದಿದ್ದರು. ಸರಕಾರದ ವಿರುದ್ಧ ಯಾರೇ ದನಿ ಎತ್ತಿದರೂ ಅವರನ್ನು ದೇಶದ್ರೋಹಿ ಎಂಬ ಪಟ್ಟಕಟ್ಟಲಾಗುತ್ತಿದೆ. ಮೋದಿ ಸರಕಾರ ಯುವ ಜನತೆಯ ಧ್ವನಿಯನ್ನೇ ತುಳಿದು ಹಾಕುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಕಪಿಲ್ ಸಿಬಲ್ ಅವರು ರಾಹುಲ್ ಅವರ ದನಿಗೆ ದನಿಗೂಡಿಸಿ, ರಾಜದ್ರೋಹ ಕಾನೂನನ್ನು ತೆಗೆದು ಹಾಕಬೇಕು ಎಂದು ಹೇಳಿದ್ದರು.
ಕಪಿಲ್ ಸಿಬಲ್ ಟ್ವಿಟ್ಟರಲ್ಲಿ ವಾಗ್ದಾಳಿ
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅಡಿಯಲ್ಲಿ ಬರುವ ರಾಜದ್ರೋಹ ಅಪರಾಧ ಕಾನೂನನ್ನು ತೆಗೆದು ಹಾಕಬೇಕು. ಅಧಿಕಾರದಲ್ಲಿರುವವರು ಸಂಸ್ಥೆಗಳ (ಆರ್ಬಿಐ, ಸಿಬಿಐ) ಮೇಲೆ ಸವಾರಿ ಮಾಡುವುದು, ಕಾನೂನನ್ನು ದುರ್ಬಳಸಿಕೊಳ್ಳುವುದು, ಶಾಂತಿಯನ್ನು ಕದಡುವುದು, ಅಹಿಂಸಾ ಮಾರ್ಗದ ಮೂಲಕ ಶಾಂತಿ ಕದಡುವುದೇ ನಿಜವಾದ ರಾಜದ್ರೋಹ. ಅಂಥವರನ್ನು (ಬಿಜೆಪಿ) 2019ರಲ್ಲಿ ದೇಶದ ಜನರೇ ಶಿಕ್ಷಿಸಲಿದ್ದಾರೆ. ಸರಕಾರವನ್ನು ಬದಲಿಸಿ, ದೇಶವನ್ನು ಉಳಿಸಿ ಎಂದು ಜನವರಿಯಲ್ಲಿ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದರು.
ಅನಿಲ್ ಅಂಬಾನಿ ಜೊತೆ ಕಾಂಗ್ರೆಸ್ ಹಿರಿಯ ಮುಖಂಡನ ಅಂದರ್ ಬಾಹರ್
ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಚಿದಂಬರಂ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಮುನ್ನಡೆಸುತ್ತಿದ್ದಾರೆ. ಅವರಡಿಯಲ್ಲಿ ಕರ್ನಾಟಕದ ರಾಜ್ಯ ಸಭಾ ಸದಸ್ಯ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರಿನ ಮಾಜಿ ಪ್ರೊಫೆಸರ್ ರಾಜೀವ್ ಗೌಡ ಅವರು, ಜೈರಾಮ್ ರಮೇಶ್ ಸೇರಿದಂತೆ ಹಲವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದಾರೆ. ಇತ್ತೀಚೆಗೆ, ಪಿ. ಚಿದಂಬರಂ ಮತ್ತು ರಾಜೀವ್ ಗೌಡ ಅವರು ಬೆಂಗಳೂರಿನಲ್ಲಿ ಹಲವಾರು ಕ್ಷೇತ್ರಗಳ ತಜ್ಞರನ್ನು ಕರೆಸಿ ಅವರಿಂದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನೇನಿರಬೇಕು ಎಂದು ಮಾಹಿತಿಗಳನ್ನು ತೆಗೆದುಕೊಂಡಿದ್ದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿರಬೇಕು : ಬೆಂಗಳೂರಿನ ಜನ ಹೇಳಿದ್ದೇನು?
ಟುಕ್ಡೆ ಗ್ಯಾಂಗ್ ಗೆ ಕಾಂಗ್ರೆಸ್ ಬೆಂಬಲ
ರಾಜದ್ರೋಹ ಕಾನೂನು ತೆಗೆದುಹಾಕಲು ಚಿಂತನೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಭಾರತೀಯ ಜನತಾ ಪಕ್ಷ 'ದೇಶದ್ರೋಹಿ' ಎಂದು ಕರೆದಿದ್ದು, ಈ ಪಕ್ಷವೇನು ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡುತ್ತಿದೆಯೆ? ದೇಶದ್ರೋಹಿ ಟುಕ್ಡೆ ಗ್ಯಾಂಗ್ ಗೆ ಕಾಂಗ್ರೆಸ್ ನೇರವಾಗಿ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.