ರಮಣ್ ಸಿಂಗ್ ವಿರುದ್ಧ ವಾಜಪೇಯಿ ಸೋದರ ಸಂಬಂಧಿ ಕಾಂಗ್ರೆಸ್ ಅಭ್ಯರ್ಥಿ
ನವದೆಹಲಿ, ಅಕ್ಟೋಬರ್ 22: ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಕರುಣಾ ಶುಕ್ಲಾ ಅವರನ್ನು ಛತ್ತೀಸ್ ಗಢದ ಮುಖ್ಯಮಂತ್ರಿ- ಬಿಜೆಪಿಯ ನಾಯಕ ರಮಣ್ ಸಿಂಗ್ ವಿರುದ್ಧ ಕಾಂಗ್ರೆಸ್ ನಿಂದ ಕಣಕ್ಕೆ ಇಳಿಸಲಾಗುವುದು ಎಂದು ಪಕ್ಷದಿಂದ ತಿಳಿಸಲಾಗಿದೆ.
ಚುನಾವಣೆಗೆ ತಿಂಗಳಿಲ್ಲ,ಛತ್ತೀಸ್ ಗಢದಲ್ಲಿ ಪಕ್ಷಾಂತರಕ್ಕೆ ಎಲ್ಲೆಯಿಲ್ಲ!
ಛತ್ತೀಸ್ ಗಢ ವಿಧಾನಸಭೆ ಚುನಾವಣೆಯಲ್ಲಿ ರಾಜ್ ನಂದನ್ ಗಾಂವ್ ಕ್ಷೇತ್ರದಿಂದ ಕರುಣಾ ಶುಕ್ಲಾ ಸ್ಪರ್ಧೆ ಮಾಡಲಿದ್ದಾರೆ. ಅಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ ಹದಿನೆಂಟು ಸ್ಥಾನಗಳಿಗೆ ಮತದಾನ ನಡೆಯಲಿರುವ ವ್ಯಾಪ್ತಿಗೆ ರಾಜ್ ನಂದನ್ ಗಾಂವ್ ಕ್ಷೇತ್ರ ಬರುತ್ತದೆ. ಅಲ್ಲಿ ನವೆಂಬರ್ 12ರಂದು ಮತದಾನ ನಡೆಯಲಿದೆ.
ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳ ಪೈಕಿ ಘೋಷಣೆ ಮಾಡಿದ ಆರು ಅಭ್ಯರ್ಥಿಗಳ ಪೈಕಿ ಕರುಣಾ ಶುಕ್ಲಾ ಅವರ ಹೆಸರು ಕೂಡ ಒಂದು. ಇದಕ್ಕೂ ಮುನ್ನ ಕಾಂಗ್ರೆಸ್ ನಿಂದ ಹನ್ನೆರಡು ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಕರುಣಾ ಶುಕ್ಲಾ ಅವರು ಮಾಜಿ ಸಂಸದೆ. ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಗೆ ಸೇರ್ಪಡೆಯಾದರು.