ಕಾಂಗ್ರೆಸ್ ಕೋಮಾದಿಂದ ಇನ್ನೂ ಹೊರಗೆ ಬಂದಿಲ್ಲ; ಮೋದಿ
ನವದೆಹಲಿ, ಜುಲೈ 20: "ಕಾಂಗ್ರೆಸ್ಗೆ ಕೋಮಾದಿಂದ ಇನ್ನೂ ಹೊರಗೆ ಬರಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಸದಸ್ಯರ ನಡವಳಿಕೆ ದುರದೃಷ್ಟಕರ. ನಾವು ಇಲ್ಲಿಯವರೆಗೆ ಸಾಧಿಸಿದ್ದೇವೆ ಎಂಬ ಸತ್ಯವನ್ನು ಕಾಂಗ್ರೆಸ್ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಪ್ರಧಾನಿ ಮೋದಿ ಕೊರೊನಾ ನಿರ್ವಹಣೆ ಕುರಿತ ಕಾಂಗ್ರೆಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನ ನಿರ್ವಹಣೆ ವಿಷಯದಲ್ಲಿ ಪ್ರತಿಪಕ್ಷಗಳು ಯಾವಾಗಲೂ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಕೊರೊನಾ ನಿರ್ವಹಣೆ ಕುರಿತು ನಕಾರಾತ್ಮಕ ವಾತಾವರಣ ಸೃಷ್ಟಿಸಲು ಉದ್ದೇಶಪೂರ್ವಕ ಪ್ರಯತ್ನ ಮಾಡಲಾಗುತ್ತಿದೆ. ದೇಶದಲ್ಲಿ ಕೊರೊನಾ ಲಸಿಕೆಗಳ ಕೊರತೆ ಇಲ್ಲ" ಎಂದು ಕಾಂಗ್ರೆಸ್ ಉದ್ದೇಶಿಸಿ ದೂರಿದರು.
ಮುಂಗಾರು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಿರುವ ಮಸೂದೆಗಳ ಪಟ್ಟಿ
"ಕೊರೊನಾ ಸೋಂಕಿನ ಸಂದರ್ಭ ದೇಶದ ಯಾವೊಬ್ಬ ಪ್ರಜೆಯೂ ಹಸಿವಿನಿಂದ ಬಳಲದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಕೊರೊನಾ ತಂದಿಟ್ಟ ಸಂಕಷ್ಟ ರಾಜಕೀಯ ವಿಷಯವಲ್ಲ. ಇದು ಮಾನವೀಯ ನೆಲೆಯಲ್ಲಿ ಎದುರಿಸಬೇಕಾದ ಸಂಗತಿ" ಎಂದು ಹೇಳಿದರು.
ಇದೇ ವೇಳೆ ಕೊರೊನಾ ಮೂರನೇ ಅಲೆಗೆ ಸಂಬಂಧಿಸಿದಂತೆ ಸರ್ವಸನ್ನದ್ಧರಾಗಲು ಸಂಸದರಿಗೆ ಕರೆ ನೀಡಿದರು.
ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಇಂಧನ ಬೆಲೆ ಏರಿಕೆ, ರೈತರ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಆರೋಪಿಸಿ ಸಂಸತ್ತಿನ ಉಭಯ ಸದನಗಳಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸಿದವು. ಅಧಿವೇಶನಕ್ಕೂ ಮುನ್ನ ಮಾತನಾಡಿದ್ದ ಮೋದಿ, "ಎಲ್ಲಾ ಸಂಸದರು, ಸರ್ವ ಪಕ್ಷಗಳೂ ಸಂಸತ್ತಿನಲ್ಲಿ ಕಠಿಣ ಹಾಗೂ ನೇರ ಪ್ರಶ್ನೆಗಳನ್ನು ಕೇಳಬೇಕು. ಇದಕ್ಕೆ ಉತ್ತರಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಆರೋಗ್ಯಕರ ಚರ್ಚೆ ನಡೆಸಬೇಕು. ಶಿಸ್ತುಬದ್ಧ ವಾತಾವರಣದಲ್ಲಿ ಮಾತುಕತೆ ನಡೆಯಬೇಕು" ಎಂದು ಪ್ರತಿಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದರು.